ಕೊಪ್ಪಳ: ಹೃದಯ ಖಾಯಿಲೆಯಿಂದ ಬಳಲುತ್ತಿದ್ದ ಬಾಲಕನೊಬ್ಬ ಚಿಕಿತ್ಸೆಗೆ ಹಣವಿಲ್ಲದೆ ಸಹಾಯ ಕೋರಿ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರಿಗೆ ಪತ್ರ ಬರೆದಿದ್ದಾನೆ.
ಕೊಪ್ಪಳ ತಾಲೂಕಿನ ಬೋಚನಳ್ಳಿ ಗ್ರಾಮದ ಭೀಮಪ್ಪ, ಪ್ರಧಾನಿಗೆ ಪತ್ರ ಬರೆದು ತನ್ನ ಹೃದಯ ಚಿಕಿತ್ಸೆಗೆ ಸಹಾಯ ಕೋರಿದ್ದಾನೆ. ಕಡು ಬಡವರಾಗಿರುವ ಭೀಮಪ್ಪ ಕುಟುಂಬ ಕೂಲಿ ನಾಲಿ ಮಾಡಿಕೊಂಡೆ ಜೀವನ ನಡೆಸುತ್ತಿದೆ.
ಭೀಮಪ್ಪ ಒಂದು ವರ್ಷ ಇರುವಾಗಲೇ ಹೃದಯ ಸಂಬಂಧಿ ಕಾಯಿಲೆ ಕಾಣಿಸಿಕೊಂಡಿದೆ. ಈಗಾಗಲೇ ಭೀಮಪ್ಪ ತಂದೆ-ತಾಯಿ ಸಾಕಷ್ಟು ಹಣ ಖರ್ಚು ಮಾಡಿದ್ದಾರೆ. ಅಲ್ಲದೆ ತಮ್ಮ ಬಳಿ ಇದ್ದ ಜಮೀನು ಮಾರಿಕೊಂಡಿದ್ದಾರೆ. ಜೊತೆಗೆ ಲಕ್ಷಾಂತರ ರೂಪಾಯಿ ಸಾಲ ಮಾಡಿಕೊಂಡಿದ್ದಾರೆ.
ಇನ್ನೂ ಭೀಮಪ್ಪ ಹೃದಯ ಚಿಕಿತ್ಸೆಗೆ 31 ಲಕ್ಷ ಹಣ ಬೇಕಾಗಿದೆ. ಹೃದಯ ಬದಲಾವಣೆ ಮಾಡಬೇಕು ಎಂದು ವೈದ್ಯರು ತಿಳಿಸಿದ್ದು ಅದಕ್ಕಾಗಿ 31 ಲಕ್ಷ ಖರ್ಚಾಗುತ್ತೆ. ಆದರೆ ಚಿಕಿತ್ಸೆಗೆ ಹಣ ಇಲ್ಲದೆ ಭೀಮಣ್ಣ ಕುಟುಂಬಸ್ಥರು ಕಂಗಾಲಾಗಿದ್ದಾರೆ.
ಹಾಗಾಗಿ ಭೀಮಪ್ಪ ತನ್ನ ಚಿಕಿತ್ಸೆಗೆ ಸಹಾಯ ಕೋರಿ ಪ್ರಧಾನಿಗೆ ಪತ್ರ ಬರೆದು ಸ್ಪಂದಿಸುವಂತೆ ಮನವಿ ಮಾಡಿಕೊಂಡಿದ್ದಾನೆ.