ಲಕ್ನೋ: ತಮ್ಮನ್ನು ತಾವು ರಕ್ಷಿಸಿಕೊಳ್ಳಲು ಅಂಗಡಿಗಳಲ್ಲಿ ಕಲ್ಲುಗಳು, ಸಲಿಕೆಗಳು ಮತ್ತು ಪಿಸ್ತೂಲ್ಗಳನ್ನು ಇಟ್ಟುಕೊಳ್ಳಬೇಕು ಎಂದು ವ್ಯಾಪಾರಿಗಳಿಗೆ ಸಲಹೆ ನೀಡುವ ಮೂಲಕ ಉತ್ತರ ಪ್ರದೇಶದ ಮುಜಾಫರ್ನಗರದ ಖತೌಲಿ ಕ್ಷೇತ್ರದ ಬಿಜೆಪಿ ಶಾಸಕ ವಿಕ್ರಮ್ ಸೈನಿ ಅವರು ಹೊಸ ವಿವಾದ ಸೃಷ್ಟಿಸಿದ್ದಾರೆ.
ಶನಿವಾರ ಜನಸತ್ ತಹಸಿಲ್ ಪ್ರದೇಶದ ವಾಜಿದ್ಪುರ ಕವಾಲಿ ಗ್ರಾಮದಲ್ಲಿ ಖತೌಲಿ ಶಾಸಕರು ಈ ಪ್ರಚೋದನಕಾರಿ ಹೇಳಿಕೆ ನೀಡಿದ್ದಾರೆ. ಉತ್ತರ ಪ್ರದೇಶ ವಿಧಾನಸಭಾ ಚುನಾವಣೆಯಲ್ಲಿ ಭರ್ಜರಿ ಬಹುಮತದೊಂದಿಗೆ ಗೆಲುವು ಸಾಧಿಸಿದ್ದಕ್ಕಾಗಿ ಕೇಂದ್ರ ರಾಜ್ಯ ಸಚಿವ ಸಂಜೀವ್ ಬಲ್ಯಾನ್ ಮತ್ತು ಬಿಜೆಪಿ ಶಾಸಕ ವಿಕ್ರಮ್ ಸೈನಿ ಅವರಿಗೆ ಸನ್ಮಾನ ಸಮಾರಂಭವನ್ನು ಆಯೋಜಿಸಲಾಗಿತ್ತು. ಇದನ್ನೂ ಓದಿ: ಮಂಗಳೂರಿನಲ್ಲಿ ಅಲೆಗಳ ಹೊಡೆತಕ್ಕೆ ಕೊಚ್ಚಿಕೊಂಡು ಹೋದ ರಸ್ತೆ!
ಈ ವೇಳೆ ಗ್ರಾಮಸ್ಥರನ್ನುದ್ದೇಶಿಸಿ ಮಾತನಾಡಿದ ವಿಕ್ರಮ್ ಸೈನಿ ಅವರು, ಪೊಲೀಸರು ಎಷ್ಟು ದಿನ ಅಂತ ಕೆಲಸ ಮಾಡುತ್ತಾರೆ? ಪೊಲೀಸರು ಬರುವಷ್ಟರಲ್ಲಿ ನಿಮ್ಮ ಅಂಗಡಿಗಳಿಗೆ ಬೆಂಕಿ ಹಚ್ಚಿಬಿಟ್ಟಿರುತ್ತಾರೆ. ಹೀಗಾಗಿ ನೀವು ಸುರಕ್ಷಿತವಾಗಿರಬೇಕೆಂದರೆ ನಿಮ್ಮ ಅಂಗಡಿಗಳಲ್ಲಿ ಕಲ್ಲು, ಸಲಿಕೆ, ಪಿಸ್ತೂಲ್ ಇಟ್ಟುಕೊಳ್ಳಬೇಕು ಎಂದು ವ್ಯಾಪಾರಿಗಳಿಗೆ ಸಲಹೆ ನೀಡುವ ಮೂಲಕ ವಿಕ್ರಮ್ ಸೈನಿ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.
ವೇದಿಕೆಯಲ್ಲಿದ್ದ ಮುಖಂಡರ ಈ ಹೇಳಿಕೆಯನ್ನು ತಡೆಯಲು ಮುಂದಾದಾಗ ವಿಕ್ರಮ್ ಸೈನಿ ಅವರು, ಇಂದು ನನಗೆ ಮಾತನಾಡಲು ಅವಕಾಶ ನೀಡಿ. ಇದನ್ನು ಪತ್ರಿಕೆಯಲ್ಲಿ ಮುದ್ರಿಸಿ ಅಥವಾ ಟಿವಿಯಲ್ಲಿ ತೋರಿಸಿ, ಆದರೆ 5 ವರ್ಷಗಳವರೆಗೆ ನನ್ನನ್ನು ಯಾರೂ ತೆಗೆದುಹಾಕಲು ಸಾಧ್ಯವಿಲ್ಲ ಮತ್ತು ನನಗೆ ಯಾವುದೇ ಆಸೆ ಇಲ್ಲ ಎಂದಿದ್ದಾರೆ. ಇದನ್ನೂ ಓದಿ: ಮಳೆಯ ಆರ್ಭಟ: ಹಳಿ ತಪ್ಪುವ ಆತಂಕದಿಂದ 165 ರೈಲುಗಳ ಸಂಚಾರ ಸಂಪೂರ್ಣ ರದ್ದು
ಉದಯ್ಪುರ ಘಟನೆ ಕುರಿತು ಮಾತನಾಡಿದ ಅವರು, ನೂಪುರ್ ಶರ್ಮಾ ತನಗೆ ಮಾತನಾಡಲು ಪ್ರಜಾಸತ್ತಾತ್ಮಕ ಹಕ್ಕಿದೆ ಎಂದು ಹೇಳಿದ್ದಾರೆ. ಹಿಂದೂ ದೇವತೆಗಳ ವಿರುದ್ಧ ಮಾತನಾಡಲು ಕೂಡ ಜನರಿಗೆ ಹಕ್ಕಿದೆ. ಆದರೆ ಯಾರಾದರೂ ತಲೆ ಕತ್ತರಿಸುತ್ತೇವೆ ಎಂದು ಅವರ ವಿರುದ್ಧವಾಗಿ ಹೇಳಿಕೆ ನೀಡಿದರೆ, ಅವರನ್ನು ಉಳಿಸಲು ಎಲ್ಲರೂ ಒಂದಾಗಬೇಕು ಎಂದು ಹೇಳಿದ್ದಾರೆ.