ಹೈದರಾಬಾದ್: ಪ್ರಧಾನಿ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿ ನಡೆದ ನೀತಿ ಆಯೋಗದ ಸಭೆಯನ್ನು ಬಹಿಷ್ಕರಿಸಿದ ತೆಲಂಗಾಣ ಮುಖ್ಯಮಂತ್ರಿ ಕೆ.ಚಂದ್ರಶೇಖರ ರಾವ್ ವಿರುದ್ಧ ಕೇಂದ್ರ ಸಚಿವ ಪೀಯೂಷ್ ಗೋಯಲ್ ವಾಗ್ದಾಳಿ ನಡೆಸಿದ್ದಾರೆ.
ಕೆಸಿಆರ್ ಅವರು ತನಗೆ ತಾನು ಮತ್ತೊಬ್ಬ ನಿಜಾಮ ಎಂದುಕೊಂಡಿದ್ದಾರೆ. ರಾಷ್ಟ್ರದ ಪ್ರಗತಿಗಾಗಿ ಪ್ರತಿಯೊಂದು ರಾಜ್ಯವೂ ಅಭಿವೃದ್ಧಿ ಹೊಂದಬೇಕು ಎಂಬುದನ್ನು ಅವರು ಮರೆಯುತ್ತಾರೆ. ಪ್ರತಿಯೊಂದು ರಾಜ್ಯಗಳ ಅಭಿವೃದ್ಧಿ ಪ್ರಧಾನಿ ಮೋದಿಯವರ ಕನಸು. ಕೇಂದ್ರವು ನೀತಿ ಆಯೋಗ ಮತ್ತು ರಾಜ್ಯಗಳೊಂದಿಗೆ ಕಲ್ಯಾಣ ಯೋಜನೆಗಳನ್ನು ರೂಪಿಸಲು ಕೆಲಸ ಮಾಡುತ್ತಿದೆ. ಕೆಸಿಆರ್ ತೆಲಂಗಾಣದ ಅಭಿವೃದ್ಧಿಯಲ್ಲಿ ಆಸಕ್ತಿ ಹೊಂದಿಲ್ಲ. ಇದು ರಾಜ್ಯ ಸರ್ಕಾರದಿಂದ ಸ್ಪಷ್ಟವಾಗಿದೆ ಎಂದು ಟೀಕಿಸಿದ್ದಾರೆ. ಇದನ್ನೂ ಓದಿ: ಭಾರತದ ಜಲಗಡಿಗೆ ಬಂದಿದ್ದ ಪಾಕ್ ಯದ್ಧನೌಕೆಯನ್ನು ಓಡಿಸಿದ ಡಾರ್ನಿಯರ್
ರಾಜ್ಯಗಳ ಬಗ್ಗೆ ಕೇಂದ್ರದ ತಾರತಮ್ಯ ಧೋರಣೆ ಹಾಗೂ ರಾಜ್ಯಗಳನ್ನು ಸಮಾನ ಪಾಲುದಾರರನ್ನಾಗಿ ಪರಿಗಣಿಸುತ್ತಿಲ್ಲ. ಹೀಗಾಗಿ ನೀತಿ ಆಯೋಗದ ಸಭೆಯನ್ನು ಬಹಿಷ್ಕರಿಸುವ ನಿರ್ಧಾರ ಮಾಡಲಾಗಿದೆ ಎಂದು ಪ್ರಧಾನಿ ಮೋದಿಗೆ ಕೆಸಿಆರ್ ಪತ್ರ ಬರೆದಿದ್ದರು.
ರಾಷ್ಟ್ರಪತಿ ಭವನದ ಸಾಂಸ್ಕೃತಿಕ ಕೇಂದ್ರದಲ್ಲಿ ನೀತಿ ಆಯೋಗದ ಸಭೆ ನಡೆಯಿತು. ಈ ಸಭೆಗೆ ಬಿಹಾರ್ ಮುಖ್ಯಮಂತ್ರಿ ನಿತೀಶ್ ಕುಮಾರ್ ಸಹ ಗೈರಾಗಿದ್ದರು. ನಿತೀಶ್ ಕುಮಾರ್ ಅವರು ಕೋವಿಡ್ ಕಾರಣಗಳಿಂದಾಗಿ ಸಭೆಗೆ ಗೈರಾಗಿದ್ದರು ಎನ್ನಲಾಗಿತ್ತು. ಇದನ್ನೂ ಓದಿ: ಪತ್ರಾ ಚಾವ್ಲ್ ಭೂಹಗರಣ: ಸಂಜಯ್ ರಾವತ್ಗೆ ಆ.22ರವರೆಗೆ ನ್ಯಾಯಾಂಗ ಬಂಧನ
ನೀತಿ ಆಯೋಗ ಸಭೆಯ ಕಾರ್ಯಸೂಚಿಯು ಬೆಳೆ ವೈವಿಧ್ಯೀಕರಣ ಮತ್ತು ಎಣ್ಣೆಕಾಳು, ಬೇಳೆ ಕಾಳು, ಕೃಷಿ ಸಮುದಾಯದಲ್ಲಿ ಸ್ವಾವಲಂಬನೆ ಸಾಧಿಸುವುದು, ರಾಷ್ಟ್ರೀಯ ಶಿಕ್ಷಣ ನೀತಿ ಅನುಷ್ಠಾನ ಒಳಗೊಂಡಿತ್ತು.