ಬೆಂಗಳೂರು: ಕೇರಳದ ಸೋಲಾರ್ ಹಗರಣ ಹಾಗು ಅತ್ಯಾಚಾರ ಪ್ರಕರಣದ ಬಗ್ಗೆ ರಾಜ್ಯ ಕಾಂಗ್ರೆಸ್ ಉಸ್ತುವಾರಿ ಕೆ.ಸಿ. ವೇಣುಗೋಪಾಲ್ ಸ್ಪಷ್ಟನೆ ನೀಡಿದ್ದಾರೆ.
ನ್ಯಾಯಾಂಗ ತನಿಖಾ ವರದಿಯಲ್ಲಿ ನನ್ನ ವಿರುದ್ಧ ಯಾವುದೇ ಆರೋಪಗಳಿಲ್ಲ. ರಾಜಕೀಯವಾಗಿ ಕಾಂಗ್ರೆಸ್ ನಾಯಕರನ್ನು ಹಣಿಯಲು ಎಲ್ಡಿಎಫ್ ಸರ್ಕಾರ ನಕಲಿ ದಾಖಲೆಗಳನ್ನು ಸೃಷ್ಟಿಸುತ್ತಿದೆ ಎಂದು ಆರೋಪಿಸಿದ್ದಾರೆ.
ಪ್ರಕರಣದ ಕೇಂದ್ರ ಬಿಂದು ಸರಿತಾ ನಾಯರ್ 2013ರಲ್ಲಿ ಬರೆದಿದ್ದಾರೆ ಎನ್ನಲಾದ ಪತ್ರದಲ್ಲಿ ನನ್ನ ಹೆಸರಿದೆ ಎಂದು ತನಿಖಾ ಸಮಿತಿ ಹೇಳುತ್ತಿದೆ. ಆ ಪತ್ರದಲ್ಲಿ ಹೆಸರಿರುವ ಎಲ್ಲರ ವಿರುದ್ಧ ಎಫ್ಐಆರ್ ದಾಖಲಿಸುವುದಾಗಿ ಹೇಳಿದ್ದ ಸರ್ಕಾರ ಈಗ ಯೂ ಟರ್ನ್ ಹೊಡೆದಿದೆ ಅಂತ ತಿರುಗೇಟು ಕೊಟ್ಟಿದ್ದಾರೆ.
ನನ್ನ ಇಮೇಜ್ಗೆ ಧಕ್ಕೆ ತರಲು ದೂರುದಾರರ ಜೊತೆ ಸೇರಿ ಷಡ್ಯಂತ್ರ ರೂಪಿಸಿದೆ. ಸರಿತಾ ನಾಯರ್ ಕ್ರಿಮಿನಲ್ ಹಿನ್ನಲೆಯವರಾಗಿದ್ದು, ಆಕೆಯ ವಿರುದ್ಧ 34 ವಂಚನೆ ಕೇಸುಗಳು ದಾಖಲಾಗಿದೆ. ಹಲವು ಕೇಸುಗಳಲ್ಲಿ ಜೈಲು ಶಿಕ್ಷೆಗೆ ಗುರಿಯಾಗಿದ್ದಾರೆ. ಇದೆಲ್ಲದರ ಹೊರತಾಗಿ ನನ್ನ ವಿರುದ್ಧ ದೂರು ನೀಡಲು ಆಕೆಗೆ 10 ಕೋಟಿಯ ರೂ. ಆಮಿಷ ನೀಡಲಾಗಿತ್ತು ಎಂಬುದನ್ನು ಸ್ವತಃ ಆಕೆಯೇ ಈ ಹಿಂದೆ ಹೇಳಿದ್ರು ಅಂತ ಹೊಸ ಬಾಂಬ್ ಹಾಕಿದ್ದಾರೆ.
ಇದನ್ನೂ ಓದಿ: ಕರ್ನಾಟಕ ಉಸ್ತುವಾರಿಯ ‘ಕೈ’ಚಳಕಕ್ಕೆ ಸರಿತಾಗೆ 5 ದಿನ ನಡೆಯೋಕೂ ಸಾಧ್ಯವಾಗಿಲ್ವಂತೆ!
ಜೊತೆಗೆ ಕೆಲ ಮಾಧ್ಯಮಗಳ ವಿರುದ್ಧ ಎರ್ನಾಕುಲಂನ ಸಿಜೆಎಂ ನ್ಯಾಯಾಲಯದಲ್ಲಿ ಮಾನನಷ್ಟ ಮೊಕದ್ದಮೆ ದಾಖಲಿಸಿದ್ದೇನೆ ಎಂದು ವೇಣುಗೋಪಾಲ್ ಹೇಳಿದ್ದಾರೆ. 2013ರಲ್ಲಿ ಸೋಲಾರ್ ಪ್ಯಾನಲ್ ಉದ್ಘಾಟನೆಗೆ ಹೋದಾಗ ನನ್ನ ಜೊತೆ ಅನುಚಿತವಾಗಿ ವರ್ತಿಸಿದ್ರು. ರಾತ್ರಿ ಹೊತ್ತು ಫೋನ್ ಮಾಡಿ ಕಾಟ ಕೊಡ್ತಿದ್ರು ಅಂತ ಸರಿತಾ ಆರೋಪಿಸಿದ್ರು.