ಧಾರವಾಡ: ಸಿಎಂ ಸಿದ್ದರಾಮಯ್ಯ ಅವರು ಆಗಾಗ ಕನ್ನಡ ವ್ಯಾಕರಣದ ಬಗ್ಗೆ ಪಾಠ ಮಾಡುವುದು ನಿಮಗೆ ಗೊತ್ತೆಯಿದೆ. ಆದರೆ ಈಗ ಸಮಾಜ ಕಲ್ಯಾಣ ಸಚಿವ ಹೆಚ್ ಆಂಜನೇಯ ಅವರು ಯುವಜನತೆಗೆ ಲವ್ ಬಗ್ಗೆ ಪಾಠ ಮಾಡಿ ಸುದ್ದಿಯಾಗಿದ್ದಾರೆ.
ಡಾ. ಬಾಬು ಜಗಜೀವನ್ ರಾಮ್ ಅಧ್ಯಯನ, ಸಂಶೋಧನಾ ಮತ್ತು ವಿಸ್ತರಣಾ ಕೇಂದ್ರದ ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿದ ಅವರು, ವಿದ್ಯಾರ್ಥಿಗಳೇ ಲವ್ ಕಡೆ ಗಮನ ಕೊಡದೇ ನೀವೆಲ್ಲರೂ ಚೆನ್ನಾಗಿ ಓದಬೇಕು. ಮೊಬೈಲ್ ಜಾಸ್ತಿ ಉಪಯೋಗಿಸಬೇಡಿ. ಯಾವ ಪೊಲೀಸ್ ಠಾಣೆಯಲ್ಲಿ ಹೋಗಿ ನೋಡಿದರೂ ಹುಡುಗಿ ನಾಪತ್ತೆಯಾಗಿದ್ದಾಳೆ ಎನ್ನುವುದನ್ನೇ ನೋಡುತ್ತೇವೆ. ಆದರೆ ನೀವು ಆ ತರಹ ಮಾಡಬೇಡಿ ಎಂದು ಹೇಳಿದರು.
ಎಲ್ಲಾ ರೀತಿಯ ಪರಿಶ್ರಮಪಟ್ಟು ಪದವಿ ಓದಿ ಕೆಲಸ ಪಡೆದು ಉನ್ನತ ಸ್ಥಾನಕ್ಕೆ ಏರಿ ನಿಮ್ಮ ಜೀವನಕ್ಕೆ ಭದ್ರತೆಯನ್ನು ಒದಗಿಸಿಕೊಳ್ಳಿ. ನಿಮ್ಮ ತಂದೆ ತಾಯಿ ಹೇಳಿದವರನ್ನು ಮದುವೆಯಾಗಿ ಎಂದು ಬುದ್ಧಿಮಾತನ್ನು ಹೇಳಿದರು.
ನಾನು ಮದುವೆಯಾಗಿದ್ದ ಹುಡುಗಿಯನ್ನು ನೋಡಿರಲಿಲ್ಲ. ನಮ್ಮ ಅಮ್ಮ ಈ ಹುಡುಗಿಗೆ ತಾಳಿಕಟ್ಟು ಅಂದರು. ಅವಳು ಸ್ನಾತಕೋತ್ತರ ಪದವಿಧರೆ. ಒಳ್ಳೆಯ ಹುಡುಗಿ ನೀನು ತಾಳಿ ಕಟ್ಟು ಅಂದ್ರು ನಾನು ಕಟ್ಟಿದೆ. ಈಗ ನಾವು ಸಂತೋಷದಿಂದ ಇದ್ದೇವೆ. ನಮ್ಮ ತಂದೆ ತಾಯಿ ನೋಡಿದವರನ್ನು ಮದುವೆಯಾಗಿ ನೆಮ್ಮದಿಯಿಂದ ಇದ್ದೇವೆ. ನೀವು ಇದೆ ರೀತಿ ಇರಬೇಕು ಎಂದು ಅವರು ತಿಳಿಸಿದರು.