ಬೆಂಗಳೂರು: ದೋಸ್ತಿ ಸರ್ಕಾರಕ್ಕೆ ಸಂಕಷ್ಟದ ಮೇಲೆ ಕಷ್ಟಗಳು ಎದುರಾಗುತ್ತಿವೆ. ಈಗಾಗಲೇ ಕಾಂಗ್ರೆಸ್ ಟ್ರಬಲ್ ಶೂಟರ್ ಡಿ.ಕೆ.ಶಿವಕುಮಾರ್ ಅತೃಪ್ತರೊಂದಿಗೆ ಒಂದು ಸುತ್ತಿನ ಮಾತುಕತೆ ನಡೆಸಿ ವಿಫಲವಾಗಿದ್ದಾರೆ. ಶನಿವಾರ ಮತ್ತು ಭಾನುವಾರ ಸಹ ಅತೃಪ್ತರ ಗುಂಪಿನಲ್ಲಿ ಕಾಣಿಸಿಕೊಂಡಿದ್ದ ಸಚಿವ ಎಂಟಿಬಿ ನಾಗರಾಜ್ ವಿಶೇಷ ವಿಮಾನದ ಮೂಲಕ ಮುಂಬೈ ತಲುಪಿದ್ದಾರೆ.
ಮೇಲ್ನೋಟಕ್ಕೆ ಸರ್ಕಾರ ಪತನದಂಚಿಗೆ ತಲುಪಿದ್ದರೂ, ಸಿಎಂ ಮಾತ್ರ ಭರವಸೆ ವ್ಯಕ್ತಪಡಿಸುತ್ತಿದ್ದಾರೆ. ರಾಜೀನಾಮೆ ನೀಡಿದ ಬಳಿಕ ಬೆಂಗಳೂರಿನಲ್ಲಿರುವ ರಾಮಲಿಂಗಾ ರೆಡ್ಡಿ ಯಾವ ಸಂಧಾನಕ್ಕೂ ರಾಜಿ ಆಗುತ್ತಿಲ್ಲ. ಇತ್ತ ರಾಜೀನಾಮೆ ವಾಪಾಸ್ ಪಡೆಯುತ್ತೇನೆ ಎಂದು ಹೇಳಿದ್ದ ಎಂಟಿಬಿ ನಾಗರಾಜ್ ದಿಢೀರ್ ಅಂತ ಭಾನುವಾರ ಮುಂಬೈನ ಹೋಟೆಲ್ ಸೇರಿಕೊಂಡಿದ್ದಾರೆ. ರಾಜೀನಾಮೆ ಬಳಿಕ ವಿಮಾನ ಹತ್ತಿದ ಶಾಸಕ ಕೆ.ಸುಧಾಕರ್ ಮಾತ್ರ ಯಾರ ಸಂಪರ್ಕಕ್ಕೂ ಸಿಗುತ್ತಿಲ್ಲ.
ಶತಾಯಗತಾಯ ಸರ್ಕಾರ ಉಳಸಿಕೊಳ್ಳಲೇಬೇಕು ಎಂದುಕೊಂಡ ದೋಸ್ತಿ ನಾಯಕರಿಗೆ ಸರ್ಕಾರ ಉಳಿಸಿಕೊಳ್ಳಲು ನೂರೆಂಟು ವಿಘ್ನಗಳು ಎದುರಾಗುತ್ತಿವೆ. ನೂರೆಂಟು ವಿಘ್ನಗಳ ನಡುವೆಯು ಈ ಮೂವರು ಶಾಸಕರುಗಳು ದೋಸ್ತಿ ನಾಯಕರ ಪಾಲಿಗೆ ಆಪತ್ಭಾಂದವರಾಗಬಹುದು ಎಂದು ಕೊಳ್ಳಲಾಗಿತ್ತು. ಆದರೆ ಆ ನಿರೀಕ್ಷೆ ಸದ್ಯಕ್ಕೆ ಹುಸಿಯಾಗಿದೆ.