ಬೆಂಗಳೂರು: ಅಲ್ಖೈದಾ ಅಂತಹ ಉಗ್ರ ಸಂಘಟನೆಗಳ ಸಪೋರ್ಟ್ ನಮಗೆ ಬೇಡ. ಅವರು ಈ ವಿಚಾರಕ್ಕೆ ಎಂಟ್ರಿಯಾದರೆ ನಮ್ಮ ಕೈಗೆ ಸರ್ಕಾರ ಗನ್ ಕೊಡಲಿ ನಾವೇ ಅವರನ್ನು ಒದ್ದೋಡಿಸುತ್ತೇವೆ ಎಂದು ಮುಸ್ಲಿಂ ಮುಖಂಡ ಉಮರ್ ಷರೀಫ್ ತಿಳಿಸಿದರು.
ಹಿಜಬ್ ವಿಚಾರವಾಗಿ ಅಲ್ಕೈದಾದ ನಾಯಕ ಅಯ್ಮಾನ್ ಅಲ್ ಜವಾಹಿರಿ ಬೆಂಬಲದ ಮಾತುಗಳನ್ನಾಡಿದ್ದರು. ಇದಕ್ಕೆ ಪ್ರತಿಕ್ರಿಯಿಸಿ ಪಬ್ಲಿಕ್ ಟಿವಿ ಜೊತೆ ಮಾತನಾಡಿದ ಅವರು, ಅಲ್ ಖೈದಾ ಭಯೋತ್ಪಾದಕರು ವಿಷದ ಕ್ರಿಮಿಗಳು. ಉಗ್ರರ ಹೋರಾಟ ನಮಗೆ ಬೇಕಾಗಿಲ್ಲ. ಮುಸ್ಲಿಮ್ ಭಯೋತ್ಪಾದಕರನ್ನು ಸೈತಾನಿಗಳು ಎನ್ನುತ್ತೇವೆ. ಹಿಜಬ್ ವಿಚಾರದಲ್ಲಿ ಯಾರೂ ನಮಗೆ ಸಪೋರ್ಟ್ ಮಾಡುವುದು ಬೇಕಾಗಿಲ್ಲ. ನಮ್ಮ ದೇಶದ ಆಂತರಿಕ ವಿಷಯದಲ್ಲಿ ಬೇರೆಯವರು ಹಸ್ತಕ್ಷೇಪ ಮಾಡುವ ಅಗತ್ಯವಿಲ್ಲ ಎಂದರು.
ಧ್ವನಿವರ್ಧಕದ ಬಗ್ಗೆ ಪ್ರಮೋದ್ ಮುತಾಲಿಕ್ ನೀಡಿರುವ ಎಚ್ಚರಿಕೆಗೆ ಪ್ರತಿಕ್ರಿಯಿಸಿ, ಮುತಾಲಿಕ್ ಕರ್ನಾಟಕದ ಸಿಎಂ ಅಲ್ಲ. ಬೊಮ್ಮಾಯಿ ಕರ್ನಾಟಕದ ಸಿಎಂ. ಅಜಾನ್ ನಿಲ್ಲಿಸೋಕೆ ಹೇಳೋಕೆ ಇವರು ಯಾರು. ನಿರ್ದಿಷ್ಟ ಡೆಸಿಬಲ್ ಮೀರಿದರೆ ಕ್ರಮ ಕೈಗೊಳ್ಳಲಿ. ಸರ್ಕಾರದ ಜೊತೆಗೆ ನಾವಿದ್ದೇವೆ ಎಂದು ಹೇಳಿದರು. ಇದನ್ನೂ ಓದಿ: ಮಂಡ್ಯದ ಮುಸ್ಕಾನ್ ಖಾನ್ನನ್ನು ಹೊಗಳಿದ ಮೋಸ್ಟ್ ವಾಂಟೆಡ್ ಅಲ್ ಖೈದಾ ಉಗ್ರ
ಮಾವಿನ ವ್ಯಾಪಾರದಲ್ಲೂ ಧರ್ಮದ ವಿಚಾರ ತಂದಿದ್ದು ಸರಿಯಲ್ಲ. ಇದನ್ನು ಇಲ್ಲಿಗೆ ನಿಲ್ಲಿಸಬೇಕು. ನಿಜವಾದ ಹಿಂದೂಗಳು ಈ ರೀತಿಯಲ್ಲಿ ಧರ್ಮ ರಾಜಕಾರಣ ಮಾಡಲ್ಲ. ಇದು ಸಂವಿಧಾನ ವಿರೋಧವಾಗಿದೆ. ಹಿಂದೂಗಳ ಹೆಸರನ್ನು ಕೆಡಿಸಲು ಈ ರೀತಿ ಮಾಡುತ್ತಿದ್ದಾರೆ. ನೀವು ವ್ಯಾಪಾರ ಮಾಡಿ ನಾವು ವ್ಯಾಪಾರ ಮಾಡುತ್ತೇವೆ ಎಂದು ಮನವಿ ಮಾಡಿದರು. ಇದನ್ನೂ ಓದಿ: ಉರ್ದು ವಿಚಾರಕ್ಕೆ ಚಂದ್ರು ಕೊಲೆ ನಡೆದಿಲ್ಲ – ಅರ್ಧ ಗಂಟೆಯಲ್ಲೇ ಉಲ್ಟಾ ಹೊಡೆದ ಆರಗ