ಚಿಕ್ಕಮಗಳೂರು: ಬಿಜೆಪಿ (BJP) ಯವರಿಗೆ 40 ಅಂದರೆ ತುಂಬಾ ಪ್ರೀತಿ. ಹಾಗಾಗಿ, ಅವರಿಗೆ ಈ ಬಾರಿ 40 ಸ್ಥಾನಗಳನ್ನಷ್ಟೆ ಕೊಡಿ, ಕಾಂಗ್ರೆಸ್ಸಿಗೆ 150 ಸ್ಥಾನ ಕೊಡಿ ಎಂದು ಎಐಸಿಸಿ ಮಾಜಿ ಅಧ್ಯಕ್ಷ ರಾಹುಲ್ ಗಾಂಧಿ (Rahul Gandhi) ಮತದಾರರಿಗೆ ಮನವಿ ಮಾಡಿದ್ದಾರೆ. ನಗರದ ಹನುಮಂತಪ್ಪ ವೃತ್ತದಿಂದ ಆಜಾದ್ ಪಾರ್ಕ್ ವೃತ್ತದವರೆಗೆ ರೋಡ್ ಶೋ ನಡೆಸಿ ಬಳಿಕ ತೆರದ ವಾಹನದಲ್ಲಿ ಬಹಿರಂಗವಾಗಿ ಭಾಷಣ ಮಾಡಿದ ರಾಹುಲ್ ಗಾಂಧಿ ಕೇಂದ್ರ ಹಾಗೂ ರಾಜ್ಯ ಬಿಜೆಪಿ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
- Advertisement 2
ರಾಹುಲ್ ಭಾಷಣದ ಉದ್ದಕ್ಕೂ ಮೋದಿ (Narendra Modi) ಯವರನ್ನೇ ಟಾರ್ಗೆಟ್ ಮಾಡಿ ಮಾತನಾಡಿದರು. ಪ್ರಧಾನಿ ನರೇಂದ್ರ ಮೋದಿಯವರೇ, ನೀವು ಹೋದಲ್ಲೆಲ್ಲಾ ಬರೀ ನಿಮ್ಮ ಬಗ್ಗೆಯೇ ಹೇಳುತ್ತೀರಾ, ನಿಮ್ಮ ಬಗ್ಗೆ ನೀವೇ ಹೇಳುವುದನ್ನ ಬಿಟ್ಟು ಜನರ ಬಗ್ಗೆ, ಸರ್ಕಾರ ಅಧಿಕಾರಕ್ಕೆ ಬಂದರೆ ಜನರಿಗೆ ಏನು ಕೊಡ್ತೀರಾ ಅದನ್ನ ಹೇಳಿ ಎಂದು ಮೋದಿ ವಿರುದ್ಧ ವ್ಯಂಗ್ಯವಾಡಿದ್ದಾರೆ. ಜಿಲ್ಲೆಯ 5 ವಿಧಾನಸಭಾ ಕ್ಷೇತ್ರದ ಕೈ ಅಭ್ಯರ್ಥಿಗಳ ಪರ ಮತಪ್ರಚಾರ ಮಾಡಿದ ರಾಹುಲ್ ಗಾಂಧಿ ಕೇಂದ್ರ ಹಾಗೂ ರಾಜ್ಯ ಬಿಜೆಪಿ ಸರ್ಕಾರದ ವಿರುದ್ಧ ಆಕ್ರೋಶ ಹೊರಹಾಕಿದ್ದಾರೆ.
- Advertisement 3
- Advertisement 4
ಇದೊಂದು ಕಳ್ಳ ಸರ್ಕಾರ. ಈ ಸರ್ಕಾರ ಜನರ ಆಶೀರ್ವಾದದಿಂದ ಆದ ಸರ್ಕಾರವಲ್ಲ. ಕಳ್ಳತನ ಮಾಡಿದ ಸರ್ಕಾರ ಎಂದು ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ಭ್ರಷ್ಟಾಚಾರದಿಂದ ಮಾಡಿದ ಹಣದಿಂದ ಸರ್ಕಾರ ರಚನೆ ಮಾಡಿದ್ದಾರೆ. ಈಗ ರಾಜ್ಯದಲ್ಲಿ ಯಾರನ್ನೇ ಕೇಳಿ 40 ಅಂದ್ರೆ ಏನೆಂದು, ಎಲ್ಲರೂ ಭ್ರಷ್ಟಾಚಾರ ಅಂತಾರೆ ಎಂದು ವ್ಯಂಗ್ಯವಾಡಿದ್ದಾರೆ. ಈ ಬಾರಿಯೂ ಬಿಜೆಪಿಯವರು ಮತ್ತದೇ ಕಳ್ಳತನ ಸರ್ಕಾರ ಮಾಡಲು ಪ್ರಯತ್ನ ಮಾಡುತ್ತಾರೆ. ಅವರಿಗೆ 40 ಅಂದ್ರೆ ತುಂಬಾ ಪ್ರೀತಿ. ಹಾಗಾಗಿ, ಅವರಿಗೆ 40 ಸ್ಥಾನ ನೀಡಿ ಕಾಂಗ್ರೆಸ್ 150 ಸ್ಥಾನ ನೀಡಿ ಎಂದು ಮನವಿ ಮಾಡಿದ್ದಾರೆ. ಇದನ್ನೂ ಓದಿ: ಸುತ್ತಿಟ್ಟ ಉಡುಪಿ ಸೀರೆಯ ಸೆರಗಿನೊಳಗಿಂದ ಬಿಜೆಪಿ ಪ್ರಣಾಳಿಕೆ ಬಿಡುಗಡೆ ಮಾಡಿದ ನಟಿ ತಾರಾ
ನರೇಂದ್ರ ಮೋದಿಯವರು ಚುನಾವಣೆ ಸಮಯದಲ್ಲಿ ಮಾತ್ರ ರಾಜ್ಯಕ್ಕೆ ಭೇಟಿ ಕೊಡ್ತಾರೆ. ಆದರೆ ಭ್ರಷ್ಟಾಚಾರದ ಬಗ್ಗೆ ಮಾತನಾಡಲ್ಲ. ಮೋದಿಯವರು ಕಂಟ್ರಾಕ್ಟರ್ ಸಂಘದ ಅಧ್ಯಕ್ಷ ಕೆಂಪಣ್ಣನವರ ಪತ್ರಕ್ಕೆ ಉತ್ತರ ಕೊಡಲಿಲ್ಲ ಎಂದು ಲೇವಡಿ ಮಾಡಿದ್ದಾರೆ. ಭಾಷಣದ ವೇಳೆಯೂ ನಾವು ನಮ್ಮ ನಾಯಕರ ಎಲ್ಲರ ಹೆಸರು ಹೇಳುತ್ತೇವೆ. ಆದರೆ ಮೋದಿಯವರು ಯಾರ ಹೆಸರನ್ನೂ ಹೇಳಲ್ಲ. ಬೊಮ್ಮಾಯಿ, ಬಿ.ಎಸ್.ವೈ ಸೇರಿದಂತೆ ಯಾರ ಹೆಸರನ್ನೂ ಹೇಳಲ್ಲ ಎಂದರು. ಬರೀ ಅವರ ಬಗ್ಗೆ ಅವರೇ ಹೇಳಿಕೊಳ್ಳುತ್ತಾರೆ ಇದನ್ನ ನಿಲ್ಲಿಸಬೇಕು ಎಂದ ಅವರು, ಸುಡು ಬಿಸಿಲಿನ ಮಧ್ಯೆಯೂ ರೋಡ್ ಶೋನಲ್ಲಿ ಭಾಗಿಯಾಗಿದ್ದ ಸಾವಿರಾರು ಜನರಿಗೆ ಅಭಿನಂದನೆ ಸಲ್ಲಿಸಿದರು.
1978ರಲ್ಲಿ ನನ್ನ ಅಜ್ಜಿ ಇಲ್ಲಿ ಸ್ಪರ್ಧೆ ಮಾಡಿದ್ದರು. ನನಗೆ ಚಿಕ್ಕಮಗಳೂರಿಗೆ ಬರಲು ಹೆಮ್ಮೆಯಾಗುತ್ತದೆ. ನನ್ನ ಅಜ್ಜಿ ಚಿಕ್ಕಮಗಳೂರು ತುಂಬಾ ಚೆನ್ನಾಗಿದೆ ಎಂದು ಹೇಳಿದ್ದರು. ಇಲ್ಲಿನ ಜನ ತುಂಬಾ ಸುಂದರ ಹಾಗೂ ಒಳ್ಳೆಯವರು ಎಂದು ಗೊತ್ತಾಯ್ತು ಎಂದರು. ಇದು ಪ್ರಧಾನಿ ಚುನಾವಣೆಯಲ್ಲ. ಕರ್ನಾಟಕದ ಮಾತೆಯರು, ಅಕ್ಕತಂಗಿಯರು, ಅಣ್ಣ-ತಮ್ಮಂದಿರು, ರೈತರು, ಶ್ರಮಿಕ ವರ್ಗದ ಚುನಾವಣೆ. ಆದರೆ ಬಿಜೆಪಿ ಹಾಗೂ ಪ್ರಧಾನಿ ಸರ್ಕಾರ ಬಂದರೆ ಇವರಿಗೆಲ್ಲಾ ಏನು ಮಾಡುತ್ತೇವೆ ಎಂದು ಒಂದು ಸಣ್ಣ ಮಾತು ಕೂಡ ಹೇಳಲ್ಲ ಎಂದರು.
ಅವರು ಮಾಡಿರುವ 60% ಕೆಲಸಗಳು ಅರ್ಧಕ್ಕೆ ನಿಂತಿವೆ. ಕಳೆದ ಮೂರು ವರ್ಷದಲ್ಲಿ ಅವರು ಮಾಡಿದ್ದು ಒಂದೇ ಒಂದು. ನಿಮ್ಮ ಸರ್ಕಾರವನ್ನ ಕಳ್ಳತನ ಮಾಡಿದ್ದು ಎಂದು ವ್ಯಂಗ್ಯವಾಡಿದ್ದಾರೆ. ರಾಹುಲ್ ಗಾಂಧಿ ರೋಡ್ ಶೋಗೆ ಬಂದಿದ್ದ ರಾಣಿ ಎಂಬ ಮಹಳೆಯನ್ನ ಮಾತನಾಡಿಸಿ, ದೇಶದಲ್ಲಿ ನಿಮ್ಮಂತಹ ಕೋಟ್ಯಂತರ ರಾಣಿಯರು ಇದ್ದಾರೆ. ತುಂಬಾ ಕಷ್ಟದಲ್ಲಿದ್ದಾರೆ. ಸರ್ಕಾರ ನಿಮಗೆಲ್ಲಾ ಏನೂ ಮಾಡಿಲ್ಲ. ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದರೆ ನಮ್ಮ ಸರ್ಕಾರ ಬಡವರ ಏಳಿಗೆಗೆ ಶ್ರಮಿಸಲಿದೆ ಎಂದರು.