ನವದೆಹಲಿ: ರಾಜ್ಯದಲ್ಲಿ ಕಾಂಗ್ರೆಸ್ (Congress) ಗ್ಯಾರೆಂಟಿ ಜಾರಿ ಮಾಡಿ ಸುಭದ್ರ ಆಡಳಿತ ಕೊಡುವುದೇ ನಮ್ಮ ಮೊದಲ ಆದ್ಯತೆ ಎಂದು ಭಾಲ್ಕಿ ಶಾಸಕ ಈಶ್ವರ್ ಖಂಡ್ರೆ (Eshwar Khandre) ಹೇಳಿದ್ದಾರೆ.
ಸಚಿವ ಸಂಪುಟದಲ್ಲಿ ಲಿಂಗಾಯತರಿಗೆ ಹೆಚ್ಚಿನ ಆದ್ಯತೆ ನೀಡುವ ವಿಚಾರದ ಕುರಿತು ದೆಹಲಿಯಲ್ಲಿ (New Delhi) ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಲಿಂಗಾಯತ (Lingayat) ವೀರಶೈವ ಸಮಾಜದಲ್ಲಿ ಸರ್ವರಿಗೂ ಸಾಮಾಜಿಕ ನ್ಯಾಯವನ್ನು ಇಡೀ ಜಗತ್ತಿಗೆ ಪ್ರತಿಪಾದನೆ ಮಾಡಿದವರು ಬಸವಣ್ಣನವರು. ಹೀಗಾಗಿ ಲಿಂಗಾಯತ ಸಮಾಜದವರು ಹೆಚ್ಚಿನ ಸಂಖ್ಯೆಯಲ್ಲಿ ಕಾಂಗ್ರೆಸ್ ಪಕ್ಷಕ್ಕೆ ತಮ್ಮ ಬೆಂಬಲವನ್ನು ಸೂಚಿಸಿದ್ದಾರೆ. 34 ಜನ ಲಿಂಗಾಯತ ಶಾಸಕರು ಕಾಂಗ್ರೆಸ್ ಪಕ್ಷದಿಂದ ಗೆದ್ದಿದ್ದಾರೆ. ಸಹಜವಾಗಿ ಆ ಸಮುದಾಯಕ್ಕೆ ಇನ್ನೂ ಹೆಚ್ಚಿನ ಸ್ಥಾನಮಾನ ಹಾಗೂ ಪ್ರಾತಿನಿಧ್ಯ ಸಿಗಬೇಕು ಎಂಬ ಅಪೇಕ್ಷೆ ಇರುತ್ತದೆ. ಆ ದೃಷ್ಟಿಯಿಂದ ಮುಂದೆ ರಚಿಸುವ ಸಚಿವ ಸಂಪುಟದಲ್ಲೂ ಹೆಚ್ಚಿನ ಪ್ರಾತಿನಿಧ್ಯ ಮತ್ತು ಉನ್ನತ ಖಾತೆಗಳನ್ನು ಲಿಂಗಾಯತ ಸಮುದಾಯಕ್ಕೆ ವರಿಷ್ಠರು ಕೊಡುತ್ತಾರೆ ಎಂಬ ವಿಶ್ವಾಸವಿದೆ ಎಂದರು. ಇದನ್ನೂ ಓದಿ: ಮೊದಲ ಕ್ಯಾಬಿನೆಟ್ನಲ್ಲಿ ಗ್ಯಾರಂಟಿ ಜಾರಿ – ಕೊಟ್ಟ ಮಾತು ಉಳಿಸಿಕೊಳ್ತೀವಿ: ಡಿಕೆಶಿ
ನಾನು ಕಾರ್ಯಾಧ್ಯಕ್ಷನಾಗಿ 5 ವರ್ಷದಿಂದ ರಾಜ್ಯಾದ್ಯಂತ ಸುತ್ತಾಡಿ ಪಕ್ಷ ಸಂಘಟನೆಯನ್ನು ಮಾಡಿದ್ದೇನೆ. ಅಲ್ಲದೇ ಪಕ್ಷಕ್ಕಾಗಿ ದುಡಿದಿದ್ದೇನೆ. ಪಕ್ಷ ಯಾವುದೇ ಹುದ್ದೆ ಕೊಟ್ಟರೂ ಅದನ್ನು ಸಮರ್ಥವಾಗಿ ನಿಭಾಯಿಸುವ ಶಕ್ತಿ ನನಗಿದೆ. ಹೀಗಾಗಿ ಪಕ್ಷ ಕೊಟ್ಟ ಜವಾಬ್ದಾರಿಯನ್ನು ನಿಭಾಯಿಸುತ್ತೇನೆ ಎಂದು ವಿಶ್ವಾಸ ವ್ಯಕ್ತಪಡಿಸಿದರು. ಇದನ್ನೂ ಓದಿ: ಮೇ 20, 21 ರಂದು ಸಿಇಟಿ ಪರೀಕ್ಷೆ – ಪ್ರಮಾಣವಚನ ಹಿನ್ನೆಲೆ ಟ್ರಾಫಿಕ್ ಆತಂಕ
ಇಂದು ರಾಜ್ಯಾದ್ಯಂತ ಒಂದು ಹರ್ಷೋಲ್ಲಾಸವಿದೆ. ಅತಿಯಾದ ಉತ್ಸಾಹ ಹಾಗೂ ನಿರೀಕ್ಷೆಗಳಿವೆ. ಅವೆಲ್ಲಾ ನಿರೀಕ್ಷೆಗಳನ್ನು ಪೂರ್ತಿ ಮಾಡುವಂತಹ ಕೆಲಸವನ್ನು ನಾವು ಮಾಡುತ್ತೇವೆ. ಇಂದು ನಿಯೋಜಿತ ಮುಖ್ಯಮಂತ್ರಿ ಸಿದ್ದರಾಮಯ್ಯ, ನಿಯೋಜಿತ ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಹಾಗೂ ಸುರ್ಜೇವಾಲ ಅವರು ದೆಹಲಿಗೆ ಆಗಮಿಸಿ ಶನಿವಾರ ನಡೆಯಲಿರುವ ಪ್ರಮಾಣ ವಚನ ಸ್ವೀಕಾರದ ಬಗ್ಗೆ ಹಾಗೂ ನೂತನ ಸಚಿವ ಸಂಪುಟ ರಚನೆ ಬಗ್ಗೆ ವರಿಷ್ಠರ ಜೊತೆ ಚರ್ಚೆ ಮಾಡಲಿದ್ದಾರೆ. ನಾಳೆ (ಶನಿವಾರ) ಯಿಂದ ಕ್ಯಾಬಿನೆಟ್ ರಚನೆ ಆಗುತ್ತದೆ. ಕರ್ನಾಟಕ ರಾಜ್ಯದ ಜನತೆಗೆ ನಾವೇನು ಭರವಸೆಯನ್ನು ಕೊಟ್ಟಿದ್ದೆವೋ ಅವೆಲ್ಲವನ್ನೂ ಈಡೇರಿಸಿ ಉತ್ತಮವಾದ ಆಡಳಿತವನ್ನು ಕೊಡುತ್ತೇವೆ ಎಂದು ಸ್ಪಷ್ಟನೆ ನೀಡಿದರು. ಇದನ್ನೂ ಓದಿ: ಇದೇ 28ರಂದು ಹೊಸ ಸಂಸತ್ ಭವನ ಉದ್ಘಾಟಿಸಲಿದ್ದಾರೆ ಮೋದಿ