ಮಂಗಳೂರು: ಮತಾಂಧರಿಂದ ಹತ್ಯೆಗೀಡಾಗಿದ್ದ ಬಿಜೆಪಿ ಕಾರ್ಯಕರ್ತ ಪ್ರವೀಣ್ ನೆಟ್ಟಾರು (Praveen Nettaru) ಮನೆಗೆ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ ನಡ್ಡಾ (JP Nadda) ಭೇಟಿ ನೀಡಿ ಕುಶಲೋಪರಿ ವಿಚಾರಿಸಿದರು.
ದಕ್ಷಿಣ ಕನ್ನಡ (Dakshina Kannada) ಜಿಲ್ಲೆಯ ಸುಳ್ಯ ತಾಲೂಕಿನ ಬೆಳ್ಳಾರೆಯ ದಿ. ಪ್ರವೀಣ್ ನೆಟ್ಟಾರು ಮನೆಗೆ ನಡ್ಡಾ ಭೇಟಿ ನೀಡಿ ಮನೆಯ ಮುಂಭಾಗದಲ್ಲಿದ್ದ ಪ್ರವೀಣ್ ಭಾವಚಿತ್ರಕ್ಕೆ ಜೆ.ಪಿ.ನಡ್ಡಾ ಪುಷ್ಪಾರ್ಚನೆ ಮಾಡಿದರು. ನಂತರ ಕೆಲಕಾಲ ಪ್ರವೀಣ್ ಪೋಷಕರು ಹಾಗೂ ಪತ್ನಿ ನೂತನ ಜೊತೆ ಮಾತುಕತೆ ನಡೆಸಿದ್ದಾರೆ.
ಈ ವೇಳೆ ನಡ್ಡಾ, ಇಡೀ ದೇಶ ಮತ್ತು ಪಕ್ಷ ನಿಮ್ಮ ಜೊತೆ ಇದೆ ಎಂದು ಪೋಷಕರಿಗೆ ಭರವಸೆ ನೀಡಿದರು. ಬಳಿಕ ಮನೆಯಲ್ಲಿ ಪಾನೀಯ ಸೇವಿಸಿ ಕುಟುಂಬಸ್ಥರ ಪರಿಚಯ ಮಾಡಿಕೊಂಡರು. ಪ್ರವೀಣ್ ಪೋಷಕರು ಹಾಗೂ ಆತನ ಪತ್ನಿ ನಡ್ಡಾಗೆ ಹೂ ಗುಚ್ಛ ನೀಡಿ ಶಾಲು ಹೊದಿಸಿ ಸ್ವಾಗತಿಸಿದ್ದಾರೆ. ಈ ವೇಳೆ ಬಿಜೆಪಿ (BJP) ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಸಾಥ್ ನೀಡಿದರು.
ಈ ವೇಳೆ ಮಾಧ್ಯಮದವರೊಂದಿಗೆ ಮಾತನಾಡಿದ ನಡ್ಡಾ, ಪ್ರವೀಣ್ ನೆಟ್ಟಾರು ಮನೆಗೆ ಭೇಟಿ ಕುಟುಂಬಕ್ಕೆ ಸಾಂತ್ವನ ಹೇಳಿದ್ದೇನೆ. ತುಂಬಾ ದುಃಖದಾಯಕ ಘಟನೆ ನಡೆದು ಹೋಗಿತ್ತು. ಎಸ್ಡಿಪಿಐ (SDPI) ಮತ್ತು ಪಿಎಫ್ಐ (PFI) ಈ ಹತ್ಯೆಯ ಹಿಂದಿದ್ದು, ಇದು ಖಂಡನೀಯ. ಈ ಘಟನೆ ನಂತರ ಆ ಸಂಘಟನೆಯನ್ನು ನಿಷೇಧ ಮಾಡಲಾಯ್ತು. ನಮ್ಮ ಸರ್ಕಾರ ನಿಷೇಧ ಮಾಡಿ ಎನ್ಐಎ ತನಿಖೆ ಮಾಡ್ತಿದೆ. ಪ್ರವೀಣ್ ನೆಟ್ಟಾರು ಹತ್ಯೆಗೆ ನ್ಯಾಯ ಸಿಗೋವರೆಗೂ ವಿರಮಿಸಲ್ಲ ಎಂದು ಹೇಳಿದರು. ಇದನ್ನೂ ಓದಿ: ಮೈಸೂರಿನಲ್ಲಿ ಮೋದಿ ಮೇನಿಯಾ – 4 ಕಿ.ಮೀ. ಭರ್ಜರಿ ರೋಡ್ ಶೋಗೆ ಜನಸಾಗರ
ಪ್ರವೀಣ್ ಬಲಿದಾನ ಎಂದಿಗೂ ವ್ಯರ್ಥ ಆಗಲ್ಲ. ಪ್ರವೀಣ್ ಅವರ ಕುಟುಂಬಕ್ಕೆ ಸಂವೇದನಾಶೀಲ ಸರ್ಕಾರ ಎಲ್ಲವನ್ನೂ ಮಾಡಿದೆ. ಇಂಥಹ ಮಾನಸಿಕತೆ ವಿರುದ್ಧ ನಮ್ಮ ಹೋರಾಟ ನಿರ್ಣಾಯಕ ಘಟ್ಟದವರೆಗೂ ಮುಂದುವರಿಯಲಿದೆ. ಪ್ರವೀಣ್ಗೆ ನ್ಯಾಯ ಸಿಗೋವರೆಗೂ ಹೋರಾಟ ಇರಲಿದೆ. ಅವರ ಕುಟುಂಬ ಸದಸ್ಯರ ಜೊತೆ ನಮ್ಮ ಸರ್ಕಾರ ಇರಲಿದೆ. ನಾನು ಅವರಿಗೆ ಶ್ರದ್ಧಾಂಜಲಿ ಅರ್ಪಿಸಿ ಕುಟುಂಬಕ್ಕೆ ಸಾಂತ್ವನ ಹೇಳಿದ್ದೇನೆ ಎಂದರು. ಇದನ್ನೂ ಓದಿ: ಮೋದಿ ನೋಡಲು 6 ತಿಂಗಳ ಮಗುವಿನೊಂದಿಗೆ ಬೆಂಗಳೂರಿನಿಂದ ಬಂದ ಮಹಿಳೆ
ಇತ್ತೀಚೆಗಷ್ಟೇ ಬೆಳ್ಳಾರೆಯ ನೆಟ್ಟಾರಿನ ಹಳೆ ಮನೆಯ ಆವರಣದಲ್ಲೇ ಹೊಸ ಮನೆ ನಿರ್ಮಾಣವನ್ನು ಬಿಜೆಪಿ ವತಿಯಿಂದ ಮಾಡಿದ್ದಾರೆ. ಜೊತೆಗೆ ಮನೆ ಮುಂಭಾಗದಲ್ಲಿ ಪ್ರವೀಣ್ ಸ್ಮಾರಕ ನಿರ್ಮಿಸಲಾಗಿದೆ. ಪ್ರವೀಣ್ ಸ್ಮಾರಕವನ್ನು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ (Nalinkumar Kateel) ಅವರು ಏ.27ರಂದು ಲೋಕಾರ್ಪಣೆ ಮಾಡದರು.