ಚಿಕ್ಕೋಡಿ : ಲಕ್ಷ್ಮಣ ಸವದಿ (Laxman Savadi) ಪಕ್ಷ ಬಿಟ್ಟು ಹೋಗಿದ್ದು ಪೀಡೆ ತೊಲಗಿದಂತಾಗಿದೆ ಎಂದು ಸವದಿ ವಿರುದ್ಧ ಮಾಜಿ ಸಚಿವ ರಮೇಶ್ ಜಾರಕಿಹೊಳಿ (Ramesh Jarkiholi) ಏಕವಚನದಲ್ಲಿ ಕಿಡಿಕಾರಿದರು.
ಬೆಳಗಾವಿ (Belagavi) ಜಿಲ್ಲೆಯ ಅಥಣಿಯಲ್ಲಿ (Athani) ಬಿಜೆಪಿ (BJP) ಕಾರ್ಯಕರ್ತರ ಸಭೆ ಉದ್ದೇಶಿಸಿ ಮಾತಾನಾಡಿದ ಅವರು, ಸೋತವರನ್ನು ಪಕ್ಷ ಡಿಸಿಎಂ ಮಾಡಿತ್ತು. ಆದರೆ ಅವನು ಪಕ್ಷ ನಿಷ್ಠೆ ತೋರಿಸಿಲ್ಲ. ಬದಲಾಗಿ ಇಂದು ನಮ್ಮನ್ನು ಬಿಟ್ಟು ಹೋಗಿದ್ದಾನೆ, ನಮಗೆ ಒಳ್ಳೆದಾಗಿದೆ. ರಮೇಶ್ ಜಾರಕಿಹೊಳಿ ಮತ್ತೆ ಕಾಂಗ್ರೆಸ್ (Congress) ಹೋಗುತ್ತಾನೆ ಎಂಬ ಯೋಚನೆ ಸವದಿ ತಲೆಯಲ್ಲಿ ಇತ್ತು. ಆದರೆ ನನಗೆ ಮಂತ್ರಿ ಸ್ಥಾನವಿಲ್ಲದಿದ್ದರೂ ನಾನು ಪಕ್ಷದಲ್ಲೇ ಇದ್ದೇನೆ, ಉದ್ದ ಅಂಗಿ ಹಾಕಿರುವವನು ಪಕ್ಷದಿಂದ ಹೊರಗೆ ಹೋಗಿರುವುದು ನನಗೆ ಸಂತೋಷ ತಂದಿದೆ ಎಂದರು.
ಒಂದೂವರೆ ವರ್ಷ ಸವದಿ ಮಂತ್ರಿ ಇದ್ದರೂ ಅಥಣಿ ಕ್ಷೇತ್ರದಲ್ಲಿ ಯಾವುದೇ ಅಭಿವೃದ್ಧಿ ಕೆಲಸಗಳಾಗಲಿಲ್ಲ. ಸವದಿಯನ್ನು ವಿಶೇಷ ವಿಮಾನದಲ್ಲಿ ಡಿಕೆಶಿ ಕರೆದುಕೊಂಡು ಹೋಗಿದ್ದಾನೆ. ಡಿಕೆಶಿ ಕುತಂತ್ರಿ ಎಂದು ವಾಗ್ದಾಳಿ ನಡೆಸಿದರು.
ಮಹೇಶ್ ಕುಮಠಳ್ಳಿ ಅವರನ್ನು ಕ್ಷೇತ್ರದ ಜನರು ಗೆಲ್ಲಿಸಬೇಕು. ಲಕ್ಷ್ಮಣ ಸವದಿ ಸೋಲಬೇಕು. ನಾನು ಅಥಣಿಯಲ್ಲಿ ಇರುತ್ತೇನೆ. ಹಾಗೂ ಬೆಳಗಾವಿ ಗ್ರಾಮೀಣ ಭಾಗದಲ್ಲಿ ಇರುತ್ತೇನೆ. ನೀವು ನನಗೆ ಶಕ್ತಿ ಆಗಬೇಕು. ಬಿಜೆಪಿ ವರಿಷ್ಠರು ನನ್ನ ಮೇಲೆ ತುಂಬಾ ವಿಶ್ವಾಸ ಇಟ್ಟಿದ್ದಾರೆ. ರಾಜ್ಯ ಮತ್ತು ರಾಷ್ಟ್ರ ವರಿಷ್ಠರು ನನ್ನ ಮೇಲೆ ತುಂಬಾ ವಿಶ್ವಾಸ ಇಟ್ಟಿದ್ದಾರೆ. ಯಾವುದೇ ದಬ್ಬಾಳಿಕೆಗೆ ಹೆದರಬೇಡಿ. ಅಥಣಿ ಕ್ಷೇತ್ರದಲ್ಲಿ ನಾನು ಬರುತ್ತೇನೆ. ಇಷ್ಟು ದಿನ ಲಕ್ಷ್ಮಣ ಸವದಿ ನಮ್ಮ ಪಕ್ಷದಲ್ಲಿ ಇದ್ದರು ಎಂದು ನಾನು ಸುಮ್ಮನೆ ಇದ್ದೆ. ಇನ್ನು ಮೇಲೆ ನಾನು ಇಲ್ಲೇ ಇರುತ್ತೇನೆ ಎಂದು ಭರವಸೆ ನೀಡಿದರು. ಇದನ್ನೂ ಓದಿ: ಸಿಬಿಐ ವಿಚಾರಣೆಗೆ ಹಾಜರಾಗುವಂತೆ ಕೇಜ್ರಿವಾಲ್ಗೆ ಸಮನ್ಸ್
ಕೆಲವು ಸಹಕಾರಿ ಸೊಸೈಟಿಯಲ್ಲಿ ಅಕ್ರಮವಾಗಿದೆ. ನಾವು ಅಧಿಕಾರಕ್ಕೆ ಬಂದು ಪರಿಶೀಲನೆ ಮಾಡಲಾಗುವುದು. ರೈತರು ನೀವು ಯಾವುದಕ್ಕೂ ಹೆದರಬೇಡಿ. ನಿಮ್ಮ ಜೊತೆ ನಾನು ಯಾವತ್ತೂ ಇರುತ್ತೇನೆ. ಕೃಷ್ಣಾ ನದಿಯಲ್ಲಿ ನೀರು ಬಿಡುವಂತೆ ನೋಡಿಕೊಳ್ಳಲಾಗುವುದು. ಎರಡು ಟಿಎಂಸಿ ನೀರು ಪ್ರತಿ ಬೇಸಿಗೆಯಲ್ಲಿ ನೀರು ಬಿಡುಗಡೆ ಮಾಡಲಾಗುವುದು. ವಿದ್ಯುತ್ ಸಮಸ್ಯೆ ಹೋಗಲಾಡಿಸಲಾಗುವದು. ಉಪ ಚುನಾವಣೆ ಸಮಯದಲ್ಲಿ ನಾಟಕ ಮಾಡಿದ್ದಾನೆ. ಆದರೆ ಈ ಬಾರಿ ಏನು ನಡೆಯುವುದಿಲ್ಲ. ಅಥಣಿ ಹಾಗೂ ಕಾಗವಾಡ ಅಭ್ಯರ್ಥಿ ಗೆಲ್ಲಬೇಕು ಎಂದು ಹೇಳಿದರು. ಇದನ್ನೂ ಓದಿ: ಮದುವೆಗಳಲ್ಲಿ ಓಪನ್ ಬಾರ್ಗೆ ಅನುಮತಿ ನೀಡಿ – ಚುನಾವಣಾ ಆಯೋಗಕ್ಕೆ ಕೊಡಗಿನ ಜನ ಮನವಿ