ಜೈಪುರ: ಉದಯಪುರ ಟೈಲರ್ ಕೊಲೆ ಪ್ರಕರಣದ ತನಿಖೆಯ ಆಳಕ್ಕೆ ಇಳಿದಂತೆಲ್ಲಾ ಸ್ಫೋಟಕ ಮತ್ತು ಆತಂಕಕಾರಿ ವಿಚಾರಗಳು ಬಯಲಾಗಿವೆ. ಈ ಕೊಲೆಗಡುಕರು ಮುಂದಿನ ವರ್ಷದ ಮಾರ್ಚ್ ಒಳಗಾಗಿ ಜೈಪುರದಲ್ಲಿ ಸರಣಿ ಬಾಂಬ್ ಸ್ಫೋಟಕ್ಕೆ ಸ್ಕೆಚ್ ಹಾಕಿದ್ದರು ಎಂಬ ಆತಂಕಕಾರಿ ವಿಚಾರ ಬಯಲಾಗಿದೆ.
ರಾಜಸ್ಥಾನದ ಉದಯಪುರದಲ್ಲಿ ಹಿಂದೂ ಟೈಲರ್ ಕನ್ಹಯ್ಯ ಲಾಲ್ನನ್ನು ಹತ್ಯೆ ಮಾಡಿದ್ದ ಪಾತಕಿಗಳು ಅರೆಸ್ಟ್ ಆಗದೇ ಹೋಗಿದ್ದಲ್ಲಿ ಇನ್ನೊಬ್ಬ ವ್ಯಾಪಾರಿಯ ಶಿರಚ್ಛೆದವಾಗುತ್ತಿತ್ತೇನೋ ಎಂಬ ಭೀತಿ ವ್ಯಕ್ತವಾಗಿದೆ. ಈ ಪಾತಕಿಗಳಿಗೆ ಐಸಿಸ್ ಪ್ರೇರಿತ ಪಾಕಿಸ್ತಾನ ಮೂಲದ ಭಯೋತ್ಪಾದಕ ಸಂಸ್ಥೆ ದಾವತ್ ಇ ಇಸ್ಲಾಮಿಯ ಅಂಗಸಂಸ್ಥೆ ಅಲ್ ಸುಫಾ ಸಂಘಟನೆಯ ಜೊತೆ ಈ ಸಂಬಂಧ ಇತ್ತು ಎಂದು ವರದಿಯಾಗಿದೆ. ಇದನ್ನೂ ಓದಿ: ದೇಶೀಯ ಭಯೋತ್ಪಾದನೆಗೆ ಮದರಸಾಗಳೇ ಕಾರಣ – ಹಿಂದೂ ಜಾಗರಣಾ ವೇದಿಕೆ ಕಿಡಿ
ಕೋಮು ದ್ವೇಷ ಹಬ್ಬಿಸುವುದರಲ್ಲಿ ಮಹ್ಮದ್ ಗೌಸ್ ಎಕ್ಸ್ಪರ್ಟ್ ಆಗಿದ್ದ ಎನ್ನಲಾಗಿದ್ದು, ಅವನೊಂದಿಗೆ ಜೊತೆಗೂಡಿ ಇನ್ನಷ್ಟು ಕ್ರೌರ್ಯ ಎಸಗಲು ರಿಯಾಜ್ ಸ್ಕೆಚ್ ಹಾಕಿದ್ದ ಎಂಬುದು ತಿಳಿದುಬಂದಿದೆ. ಮಹ್ಮದ್ ಗೌಸ್ ಪಾಕಿಸ್ತಾನದ ದಾವತ್ ಎ ಇಸ್ಲಾಮಿಯಲ್ಲಿ ಭಯೋತ್ಪಾದನೆಗೆ ಟ್ರೈನಿಂಗ್ ಪಡೆದಿದ್ದು, 2014ರಲ್ಲಿ ಜೋಧ್ಪುರದಿಂದ ರಾಂಚಿಗೆ 30 ಮಂದಿ ತೆರಳಿದ್ದರು ಎಂಬುದು ತಿಳಿದುಬಂದಿದೆ.
ಇವರಿಬ್ಬರೂ ಪಾಕಿಸ್ತಾನದ ಸಂಘಟನೆ ಜೊತೆ ನಿರಂತರ ಸಂಪರ್ಕ ಹೊಂದಿದ್ದು, ಪಾಕಿಸ್ತಾನದ 8 ಫೋನ್ ನಂಬರ್ಗಳ ಜೊತೆ ಲಿಂಕ್ ಹೊಂದಿದ್ದರು. ರಿಯಾಜ್ ಸ್ಲೀಪರ್ ಸೆಲ್ ಅಲ್ಸುಫಾ ಮುಖ್ಯಸ್ಥನೂ ಆಗಿದ್ದು, ಟೋಂಕ್ನಲ್ಲಿ ಸಿಕ್ಕಿಬಿದ್ದ ಐಸಿಸ್ ಉಗ್ರ ಮುಜೀಬ್ ಜೊತೆಯೂ ಸಂಪರ್ಕ ಹೊಂದಿದ್ದರು. ಕನ್ಹಯ್ಯಾ ಹತ್ಯೆಗೆ ಐಸಿಸ್ ಉಗ್ರರ ಪ್ರೇರಣೆ ಇದ್ದು, ಪದೇ ಪದೇ ಐಸಿಸ್ ವೀಡಿಯೋಗಳನ್ನು ನೋಡುತ್ತಿದ್ದರು ಎನ್ನಲಾಗಿದೆ. ಇದೀಗ ಪಾತಕಿಗಳನ್ನು ದೆಹಲಿಗೆ ಕರೆತಂದು ಇನ್ನಷ್ಟು ಮಾಹಿತಿಯನ್ನು ಬಾಯಿಬಿಡಿಸಲು ಎನ್ಐಎ ಸಿದ್ಧತೆ ನಡೆಸಿದೆ. ಇದನ್ನೂ ಓದಿ: ಕನ್ಹಯ್ಯ ಲಾಲ್ ಕುಟುಂಬಕ್ಕೆ ನೆರವು – 24 ಗಂಟೆಯಲ್ಲಿ ಬಂತು 1 ಕೋಟಿ
ಉದಯಪುರ ಘಟನೆಯನ್ನು ಪಾಕಿಸ್ತಾನದ ತೆಹ್ರೀಕ್ ಇ ಲಬ್ದೇಕ್ ಸೇರಿದಂತೆ ಹಲವು ಮತಾಂಧ ಸಂಸ್ಥೆಗಳು ಶ್ಲಾಘಿಸಿವೆ. ಧರ್ಮಾಂಧ ಹಂತಕರನ್ನು ಅಭಿನಂದಿಸಿವೆ. ಸರಣಿ ಟ್ವೀಟ್ ಮೂಲಕ ಖುಷಿ ಹಂಚಿಕೊಂಡಿವೆ. ಇದಕ್ಕೆ ಭಾರತದ ಹಿಂದೂ ಸಂಘಟನೆಗಳು ಭಾರೀ ಆಕ್ರೋಶ ವ್ಯಕ್ತಪಡಿಸಿವೆ.
ಇಂದು ಕನ್ಹಯ್ಯ ಲಾಲ್ ನಿವಾಸಕ್ಕೆ ಭೇಟಿ ನೀಡಿದ ರಾಜಸ್ಥಾನದ ಸಿಎಂ ಅಶೋಕ್ ಗೆಹ್ಲೋಟ್, ಮೃತರ ಕುಟುಂಬಕ್ಕೆ ಸಾಂತ್ವನ ಹೇಳಿ, 50 ಲಕ್ಷ ರೂ. ಪರಿಹಾರ ನೀಡಿದ್ದಾರೆ. ಇತ್ತ ಬಿಜೆಪಿ ಕರೆಗೆ ಓಗೊಟ್ಟ ದೇಶದ ಜನತೆ 1 ಕೊಟಿ ರೂ.ಗೂ ಹೆಚ್ಚು ನೆರವನ್ನು ಸಂಗ್ರಹಿಸಿ, ಕನ್ಹಯ್ಯ ಕುಟುಂಬಕ್ಕೆ ನೀಡಿದೆ. ಜೈಪುರ, ಉದಯಪುರದಲ್ಲಿ ಭಾರೀ ಪ್ರತಿಭಟನೆಗಳು ಮುಂದುವರೆದಿವೆ.