ಬೆಂಗಳೂರು : ಹುಸಿ ಬಾಂಬ್ ಕರೆಗಳು (Fake Bomb Call), ಇಮೇಲ್ಗಳನ್ನು (Emails) ಪತ್ತೆ ಹಚ್ಚುವುದು ಕಷ್ಟದ ಕೆಲಸ. ಆದರೂ ಹುಸಿ ಬಾಂಬ್ ಕರೆಗಳ ಬಗ್ಗೆ ಕ್ರಮ ತೆಗೆದುಕೊಳ್ಳಲಾಗುತ್ತಿದೆ ಎಂದು ಗೃಹ ಸಚಿವ ಪ್ರಿಯಾಂಕ್ ಖರ್ಗೆ (Priyank Kharge) ತಿಳಿಸಿದ್ದಾರೆ.
ಇಸ್ರೋಗೆ ಹುಸಿ ಬಾಂಬ್ ಬೆದರಿಕೆ ಬಂದ ವಿಚಾರಕ್ಕೆ ಪ್ರತಿಕ್ರಿಯೆ ನೀಡಿದ ಅವರು, ಆಗಾಗ ಇಂತಹ ಹುಸಿ ಬೆದರಿಕೆಗಳು ಬರುತ್ತದೆ. ವಿಮಾನ ನಿಲ್ದಾಣ (Air Port) ಇರಬಹುದು, ಥರ್ಮಲ್ ಪವರ್ ಪ್ಲ್ಯಾಂಟ್ ಇರಬಹುದು. ಎಚ್ಚೆತ್ತುಕೊಂಡು ಸೂಕ್ತ ಕ್ರಮ ತೆಗೆದುಕೊಂಡಿದ್ದೇವೆ ಎಂದರು.
ನಿರಂತರವಾಗಿ ಸೈಬರ್ ದಾಳಿ (Cyber Attack), ಹುಸಿ ಕರೆಗಳು ಇದಕ್ಕೆ ಅಗತ್ಯ ಸಿಬ್ಬಂದಿ ಮತ್ತು ತಂತ್ರಜ್ಞಾನವನ್ನು ಅಳವಡಿಕೆ ಮಾಡಿಕೊಂಡಿದ್ದೇವೆ. ಮತ್ತಷ್ಟು ನಿಗಾ ಇಡುವ ಕೆಲಸ ಮುಂದುವರೆಸುತ್ತೇವೆ. ಹುಸಿ ಕರೆ, ಇಮೇಲ್ ಗಳನ್ನ ಪತ್ತೆ ಹಚ್ಚೋದು ಕಷ್ಟ. ಐಪಿ ಅಡ್ರೆಸ್ ಬೇರೆ ಬೇರೆ ದೇಶದಲ್ಲಿ ಇರುವುದರಿಂದ ಮ್ಯಾಪ್ ಮಾಡಲು ಕಷ್ಟ ಆಗುತ್ತದೆ. ಆದರೆ ಇದನ್ನು ತಡೆ ಹಿಡಿಯೋದು ನಮ್ಮ ಜವಾಬ್ದಾರಿ ಎಂದರು.
ಮೂಲ ಕಂಡು ಹಿಡಿಯುವುದು ಕಷ್ಟ. ಆದರೂ ಪ್ರಯತ್ನ ಮಾಡ್ತೀವಿ. ಅಂತಾರಾಷ್ಟ್ರೀಯ ಸಂಸ್ಥೆಗಳ ಜೊತೆಗೂ ನಮ್ಮ ಒಪ್ಪಂದ ಇದೆ. ಅಂತಹದ್ದು ಏನಾದರೂ ಇದ್ದರೆ ಕೇಂದ್ರದ ಸಹಾಯ ಪಡೆಯುತ್ತೇವೆ ಎಂದು ತಿಳಿಸಿದರು. ಇದನ್ನೂ ಓದಿ: ಮಸೀದಿಗಳಲ್ಲಿ SIR ಮಾಡಿ ಅಕ್ರಮ ಬಾಂಗ್ಲಾದೇಶಿಯರ ಸಕ್ರಮಕ್ಕೆ ಕಾಂಗ್ರೆಸ್ ಸಂಚು: ಕರಂದ್ಲಾಜೆ
ಸುಪ್ರೀಂ ಆದೇಶದಂತೆ ಯೋಜನೆ:
ಮೇಕೆದಾಟು ಯೋಜನೆಗೆ(Mekedatu Project) ಅವಕಾಶ ಕೊಡೊಲ್ಲ ಎಂಬ ತಮಿಳುನಾಡು ಕಾಂಗ್ರೆಸ್ ಅಧ್ಯಕ್ಷ ಹೇಳಿಕೆ ವಿಚಾರಕ್ಕೆ ಬೆಂಗಳೂರಿನಲ್ಲಿ ಪ್ರತಿಕ್ರಿಯೆ ನೀಡಿದ ಅವರು, ನಾನಾಗಲಿ ಬೇರೆಯವರಾಗಲಿ ಯಾರೇ ಆಗಲಿ ಸುಪ್ರೀಂಕೋರ್ಟ್ ಆದೇಶದಂತೆ ಹೋಗಬೇಕು. ಸಮುದ್ರಕ್ಕೆ ಹೋಗುವ ಹೆಚ್ಚುವರಿ ನೀರನ್ನು ಬಳಕೆ ಮಾಡಿಕೊಳ್ಳಬಹುದು ಎಂದು ಸುಪ್ರೀಂಕೋರ್ಟ್ ಹೇಳಿದೆ. ಅದರ ಪ್ರಕಾರ ನಾವು ಕ್ರಮ ತೆಗೆದುಕೊಳ್ಳುತ್ತೇವೆ ಎಂದರು.
ಮೇಕೆದಾಟು ವಿಚಾರದಲ್ಲಿ ವೈಯಕ್ತಿಕ ಹೇಳಿಕೆ ಲೆಕ್ಕಕ್ಕೆ ಬರುವುದಿಲ್ಲ. ನಮಗೆ ನಮ್ಮ ರೈತರಿಗೆ ಏನು ಒಳ್ಳೆಯದು ಆಗಬೇಕು, ಬೆಂಗಳೂರು ನಗರಕ್ಕೆ ಕುಡಿಯುವ ನೀರಿಗೆ ಬರುತ್ತದೆ. ಕೇವಲ ಒಂದು ಬೆಳೆ ಪ್ರಶ್ನೆ ಅಲ್ಲ. ಇದರಲ್ಲಿ ಆರ್ಥಿಕ ಚಟುವಟಿಕೆಯೂ ಇದೆ ಎಂದು ಹೇಳಿದರು.
