ಭೋಪಾಲ್: ಮಧ್ಯಪ್ರದೇಶದಲ್ಲಿ ನಾಪತ್ತೆಯಾಗಿದ್ದ 65 ವರ್ಷದ ಮಾನಸಿಕ ಅಸ್ವಸ್ಥನೊಬ್ಬ ಶವವಾಗಿ ಪತ್ತೆಯಾಗಿದ್ದು, ಬಳಿಕ ಅದನ್ನು ಕೊಲೆ ಎಂದು ಪ್ರಕರಣ ದಾಖಲಿಸಲಾಗಿದೆ.
ಶವವಾಗಿ ಪತ್ತೆಯಾದ ಮಾನಸಿಕ ಅಸ್ವಸ್ಥನಿಗೆ ವ್ಯಕ್ತಿಯೊಬ್ಬ ಮನಬಂದಂತೆ ಹಲ್ಲೆ ನಡೆಸಿರುವ ವೀಡಿಯೋವೊಂದು ದೊರಕಿದ್ದು, ಈ ಮೂಲಕ ಇದು ಕೊಲೆ ಎಂಬುದು ತಿಳಿದುಬಂದಿದೆ.
ನಿನ್ನ ಹೆಸರು ಮೊಹಮ್ಮದ್? ಎಂದು ವ್ಯಕ್ತಿಯೊಬ್ಬ ಮಾನಸಿಕ ಅಸ್ವಸ್ಥನಿಗೆ ಪ್ರಶ್ನಿಸಿ, ಆತನಿಗೆ ಉತ್ತರಿಸಲೂ ಅವಕಾಶವನ್ನೂ ನೀಡದೇ ಪದೇ ಪದೇ ಹಲ್ಲೆ ನಡೆಸಿದ್ದಾನೆ. ನೀಮಚ್ ಜಿಲ್ಲೆಯಲ್ಲಿ ಈ ಬಗ್ಗೆ ಪ್ರಕರಣ ದಾಖಲಾಗಿದ್ದು, ಹಲ್ಲೆ ನಡೆಸಿದ ವ್ಯಕ್ತಿ ಬಿಜೆಪಿ ಮಾಜಿ ಕಾರ್ಪೋರೇಟರ್ ಪತಿ ದಿನೇಶ್ ಕುಶ್ವಾ ಎಂದು ಪತ್ತೆಹಚ್ಚಲಾಗಿದೆ.
ಕೊಲೆಯಾದ ವೃದ್ಧ ಭನ್ವರ್ಲಾಲ್ ಜೈನ್ ರತ್ಲಾಮ್ ಜಿಲ್ಲೆಯ ಸರ್ಸಿಯದವರು. ಧಾರ್ಮಿಕ ಕೆಲಸಕ್ಕಾಗಿ ರಾಜಸ್ಥಾನಕ್ಕೆ ತೆರಳಿದ್ದ ವೃದ್ಧ ಮೇ 15ರಂದು ನಾಪತ್ತೆಯಾಗಿದ್ದರು. ಬಳಿಕ ಅವರ ಕುಟುಂಬಸ್ಥರು ಪೊಲೀಸರಿಗೆ ದೂರು ನೀಡಿದ್ದು, ಶುಕ್ರವಾರ ಅವರ ಮೃತದೇಹ ನೀಮಚ್ ಜಿಲ್ಲೆಯ ರಸ್ತೆ ಬಳಿ ಪತ್ತೆಯಾಗಿದೆ. ಇದನ್ನೂ ಓದಿ: ಓಮಿಕ್ರಾನ್ ಉಪತಳಿ BA-4 ಮತ್ತೊಂದು ಪ್ರಕರಣ ತಮಿಳುನಾಡಿನಲ್ಲಿ ಪತ್ತೆ
ಭನ್ವರ್ಲಾಲ್ ಮೃತದೇಹದ ಅಂತ್ಯಸಂಸ್ಕಾರವನ್ನು ನೆರವೇರಿಸಿದ ಬಳಿಕ, ಕುಟುಂಬದವರಿಗೆ ವೀಡಿಯೋವೊಂದು ದೊರಕಿದೆ. ಅದರಲ್ಲಿ ದಿನೇಶ್ ಕುಶ್ವಾ ಭನ್ವರ್ಲಾಲ್ಗೆ ನಿನ್ನ ಹೆಸರೇನು? ಮೊಹಮ್ಮದ್? ಎಂದು ಪ್ರಶ್ನಿಸಿ, ಥಳಿಸಿದ್ದಾನೆ. ನಿನ್ನ ಹೆಸರನ್ನು ಸರಿಯಾಗಿ ಹೇಳು, ನಿನ್ನ ಆಧಾರ್ ಕಾರ್ಡ್ ತೋರಿಸು ಎಂದು ಬಲವಂತಪಡಿಸಿ, ಹಲ್ಲೆ ನಡೆಸಿದ್ದಾನೆ.
ವೀಡಿಯೋ ನೋಡಿ ತಬ್ಬಿಬ್ಬಾದ ಜೈನ್ ಕುಟುಂಬ ಸದಸ್ಯರು ಪೊಲೀಸರಿಗೆ ಈ ಬಗ್ಗೆ ಮಾಹಿತಿ ನೀಡಿದ್ದಾರೆ. ತಕ್ಷಣ ಹಲ್ಲೆ ನಡೆಸಿರುವ ವ್ಯಕ್ತಿಯನ್ನು ಬಂಧಿಸುವಂತೆ ಒತ್ತಾಯಿಸಿದ್ದಾರೆ. ತಕ್ಷಣ ಎಫ್ಐಆರ್ ದಾಖಲಿಸಿಕೊಂಡ ಪೊಲೀಸರು ಈ ವೀಡಿಯೋವನ್ನು ಗುರುವಾರ ಚಿತ್ರೀಕರಿಸಲಾಗಿದೆ ಎಂದು ತಿಳಿಸಿದ್ದಾರೆ. ಇದನ್ನೂ ಓದಿ: ತಾಯಿ ಶವದೊಂದಿಗೆ 10 ದಿನ ಮನೆಯಲ್ಲೇ ಕಾಲ ಕಳೆದ ಮಗಳು
ವೀಡಿಯೋ ಹೊರ ಬೀಳುತ್ತಿದ್ದಂತೆ ಪ್ರತಿಪಕ್ಷಗಳು ಬಿಜೆಪಿ ವಿರುದ್ಧ ತೀವ್ರ ವಾಗ್ದಾಳಿ ನಡೆಸಿವೆ. ಹತ್ಯೆ ಹಾಗೂ ನಿರ್ಲಕ್ಷ್ಯದ ಸಾವಿನ ಸೆಕ್ಷನ್ಗಳ ಅಡಿಯಲ್ಲಿ ಪ್ರಕರಣ ದಾಖಲಾಗಿದೆ ಎಂದು ರಾಜ್ಯ ಗೃಹ ಸಚಿವ ನರೋತ್ತಮ್ ಮಿಶ್ರಾ ತಿಳಿಸಿದ್ದಾರೆ.