ಕೊಪ್ಪಳ: ಶಾಸಕ ಮುಂದೆಯೇ ಕಾಂಗ್ರೆಸ್ ಮತ್ತು ಬಿಜೆಪಿ ಕಾರ್ಯಕರ್ತರು ಮಾರಾಮಾರಿ ನಡೆಸಿದ್ದು, ಈ ಬಗ್ಗೆ ವರದಿ ಮಾಡಲು ತೆರಳಿದ್ದ ವರದಿಗಾರನಿಗೆ ಇಕ್ಬಾಲ್ ಅನ್ಸಾರಿ ಆಪ್ತ ಕೊಲೆ ಬೆದರಿಕೆ ಹಾಕಿದ್ದಾರೆ.
ಕೊಪ್ಪಳದ ಗಂಗಾವತಿಯಲ್ಲಿ ಸೋಮವಾರ ರಾತ್ರಿ 10 ಗಂಟೆ ಸುಮಾರಿಗೆ ಈ ಘಟನೆ ನಡೆದಿದ್ದು, ಮಾರಾಮಾರಿಯಲ್ಲಿ ಬಿಜೆಪಿ ಕಾರ್ಯಕರ್ತರ ಮೇಲೆ ಹಲ್ಲೆ ನಡೆಸಲಾಗಿದೆ. ಗಂಗಾವತಿಯ ಜಯನಗರದಲ್ಲಿ ಬಿಜೆಪಿಯ ಮಹಾಲಿಂಗಪ್ಪ ಬೈಕ್ ಅಲ್ಲಿ ಬರುತ್ತಿರುವಾಗ ಅಡ್ಡಗಟ್ಟಿದ ಕಾಂಗ್ರೆಸ್ ಪಕ್ಷದ ಕೊತ್ವಾಲ್ ನಾಗರಾಜ್ ಮತ್ತು ಸುರೇಶ್ ಕುಮಾರ್ 20 ಜನರನ್ನು ಕರೆದುಕೊಂಡು ಬಂದು ಹಲ್ಲೆ ನಡೆಸಿದ್ದಾರೆ.
ಈ ವೇಳೆ ಗಂಗಾವತಿಯ ಬಿಜೆಪಿ ಶಾಸಕ ಪರಣ್ಣ ಮುನವಳ್ಳಿ ಅವರು ಘಟನಾ ಸ್ಥಳಕ್ಕೆ ಬಂದರೂ ಕ್ಯಾರೆ ಮಾಡದ ಕಾಂಗ್ರೆಸ್ ಕಾರ್ಯಕರ್ತರು, ಶಾಸಕರ ಮುಂದೆಯೇ ಚಪ್ಪಲಿ ಹಿಡಿದು ಬಡಿದಾಡಿದ್ದಾರೆ. ಘಟನೆಯ ಸುದ್ದಿ ತಿಳಿದು ಅಲ್ಲೇ ಇದ್ದ ಮಾಜಿ ಎಂಪಿ ಈಗಿನ ಕಾಂಗ್ರೆಸ್ ಪಕ್ಷದ ಮುಖಂಡ ಶಿವರಾಮೇಗೌಡ ಸ್ಥಳಕ್ಕೆ ಆಗಮಿಸಿ ಮೂಕವಿಸ್ಮಿತರಾದರು.
ಘಟನೆಗೆ ಕಾರಣವೇನು?
ಕೆಲವು ದಿನಗಳ ಹಿಂದೆ ಗಂಗಾವತಿಗೆ ಪೇಜಾವರ ಶ್ರೀಗಳು ಆಗಮಿಸಿದ್ದರು. ಈ ವೇಳೆ ಕಾಂಗ್ರೆಸ್ ಪಕ್ಷದ ಲಿಂಗಾಯತರು ಮತ್ತು ಬಿಜೆಪಿಯ ಮಾಜಿ ಎಂಪಿ ಸಂಗಣ್ಣ ಕರಡಿ ಆಗಮಿಸಿದ್ದರು. ಪೇಜಾವರ ಶ್ರೀಗಳ ಮುಂದೆ ಕಾಂಗ್ರೆಸ್ ಕಾರ್ಯಕರ್ತರು ನಾವೆಲ್ಲರು ಈ ಸಾರಿ ಬಿಜೆಪಿಗೆ ವೋಟ್ ಹಾಕಿರುವುದಾಗಿ ಹೇಳಿದ್ದಾರೆ. ಇದನ್ನು ಖಂಡಿಸಿದ ಬಿಜೆಪಿಯ ಲಿಂಗಾಯತರು, ಇವರು ಹೇಳುತ್ತಿರುವುದು ಸುಳ್ಳು ಇವರು ಕಾಂಗ್ರೆಸ್ಗೆ ವೋಟ್ ಮಾಡಿದ್ದಾರೆ ಎಂದು ಪೇಜಾವರ ಶ್ರೀಗಳ ಎದುರೇ ಮಾತಿನ ಚಕಮಕಿ ನಡೆಸಿದ್ದರು. ಈ ಹಿನ್ನೆಲೆಯಲ್ಲಿ ಅದೇ ಸೇಡನ್ನು ಇಟ್ಟುಕೊಂಡು ಸೋಮವಾರ ರಾತ್ರಿ ಮಾರಾಮಾರಿ ನಡೆದಿದೆ ಎಂದು ಹೇಳಲಾಗುತ್ತಿದೆ.
ಸೋಮವಾರ ಎರಡೂ ಪಕ್ಷಗಳ ನಡುವೆ ನಡೆದ ಮಾರಾಮಾರಿಯ ವರದಿ ಮಾಡಲು ತೆರಳಿದ ಪಬ್ಲಿಕ್ ಟಿವಿ ವರದಿಗಾರನ ಮೇಲೆ ಕಾಂಗ್ರೆಸ್ ಪಕ್ಷದ ಕೊತ್ವಾಲ್ ನಾಗರಾಜ್, ವಿಡಿಯೋ ಮಾಡದಂತೆ ಒತ್ತಾಯಿಸಿ ಜೀವ ಬೆದರಿಕೆ ಹಾಕಿದ್ದಾರೆ. ಅಷ್ಟೇ ಅಲ್ಲ ಈ ಹಿಂದೆ ಕೊತ್ವಾಲ್ ಗಂಗಾವತಿ ಕೋರ್ಟ್ ಆವರಣದಲ್ಲಿ ವರದಿಗಾರನ ಮೇಲೆ ಹಲ್ಲೆ ನಡೆಸಿದ್ದರು. ಪರಿಸ್ಥಿತಿ ಹತೋಟಿ ಮೀರಿ ಹೊಗುತ್ತಿರುವಾಗ ಸ್ಥಳಕ್ಕೆ ಆಗಮಿಸಿದ ಗಂಗಾವತಿ ನಗರ ಠಾಣೆ ಪೊಲೀಸರು ಎಲ್ಲರನ್ನು ಮನೆಗೆ ಕಳುಹಿಸಿ ವಾತಾವರಣ ತಿಳಿಗೊಳಿಸಿದರು.