ಚೆನ್ನೈ: ಗುಜರಾತ್ ಟೈಟಾನ್ಸ್ (Gujarat Titans) ವಿರುದ್ಧ ಚೆನ್ನೈ ಸೂಪರ್ ಕಿಂಗ್ಸ್ (Chennai Super Kings) ಗೆದ್ದು ಐಪಿಎಲ್ ಚಾಂಪಿಯನ್ (IPL Champion) ಪಟ್ಟ ಅಲಂಕರಿಸಿದ ಬೆನ್ನಲ್ಲೇ ಈಗ ತಮಿಳುನಾಡು (Tamil Nadu) ರಾಜಕೀಯ ನಾಯಕರು ಇದರಲ್ಲೂ ರಾಜಕೀಯ ಮಾಡಿದ್ದಾರೆ.
ಸಿಎಸ್ಕೆ ಜಯಗಳಿಸಿದ ಬೆನ್ನಲ್ಲೇ ಡಿಎಂಕೆ “ಗುಜರಾತ್ ಮಾದರಿಯ ಮೇಲೆ ದ್ರಾವಿಡ ಮಾದರಿಯ ವಿಜಯ” ಎಂದು ಡಿಎಂಕೆ (DMK) ಸಂದೇಶ ಪ್ರಕಟಿಸಿದೆ. ಇದನ್ನೂ ಓದಿ: IPLನಲ್ಲಿ ದುಡ್ಡೋ ದುಡ್ಡು; ಚಾಂಪಿಯನ್ಸ್ ತಂಡಕ್ಕೆ 20 ಕೋಟಿ, ಲಕ್ಷ ಲಕ್ಷ ಬಾಚಿಕೊಂಡ ಗಿಲ್ – ಯಾರಿಗೆ ಎಷ್ಟೆಷ್ಟು ಲಕ್ಷ?
ಈ ಸಂದೇಶಕ್ಕೆ ಪ್ರತಿಕ್ರಿಯಿಸಿದ ತಮಿಳುನಾಡು ಬಿಜೆಪಿ ರಾಜ್ಯಾಧ್ಯಕ್ಷ ಅಣ್ಣಾಮಲೈ (K Annamalai), ಜಡೇಜಾ ಬಿಜೆಪಿ ಕಾರ್ಯಕರ್ತ ಮತ್ತು ಅವರು ಗುಜರಾತ್ ಮೂಲದವರು. ಅವರ ಪತ್ನಿ ಬಿಜೆಪಿ ಶಾಸಕಿ. ತಮಿಳಿಗನಾಗಿ ನನಗೂ ಹೆಮ್ಮೆ ಇದೆ. ಸಿಎಸ್ಕೆಗಿಂತ ಜಿಟಿಯಲ್ಲಿ ಹೆಚ್ಚು ತಮಿಳು ಆಟಗಾರರಿದ್ದರು ಎಂದು ಹೇಳಿದ್ದಾರೆ.
ರವೀಂದ್ರ ಜಡೇಜಾ (Ravindra Jadeja) ಎಲ್ಲಿಯೂ ಬಿಜೆಪಿಗೆ ಬಹಿರಂಗವಾಗಿಯೇ ಬೆಂಬಲ ಸೂಚಿಸಿಲ್ಲ. ಆದರೆ ಅವರ ಪತ್ನಿ 2019ರಲ್ಲಿ ಬಿಜೆಪಿ ಸೇರ್ಪಡೆಯಾಗಿ 2022ರ ಚುನಾವಣೆಯಲ್ಲಿ ಜಾಮ್ನಗರ ಕ್ಷೇತ್ರದಿಂದ ಸ್ಪರ್ಧಿಸಿ 80 ಸಾವಿರ ಮತಗಳಿಂದ ಜಯಗಳಿಸಿದ್ದರು.
ಟಾಸ್ ಸೋತು ಮೊದಲು ಬ್ಯಾಟ್ ಮಾಡಿದ್ದ ಗುಜರಾತ್ 4 ವಿಕೆಟ್ ನಷ್ಟಕ್ಕೆ 214 ರನ್ ಗಳಿಸಿತ್ತು. ಚೆನ್ನೈ ಬ್ಯಾಟಿಂಗ್ ವೇಳೆ ಭಾರೀ ಮಳೆ ಸುರಿದ ಪರಿಣಾಮ ಚೆನ್ನೈಗೆ ಗೆಲುವಿಗೆ 15 ಓವರ್ಗಳಲ್ಲಿ 171 ರನ್ಗಳ ಟಾರ್ಗೆಟ್ ನೀಡಲಾಗಿತ್ತು.
ಸವಾಲಿನ ಮೊತ್ತವನ್ನು ಬೆನ್ನಟ್ಟಿದ ಚೆನ್ನೈ 15 ಓವರ್ಗಳಲ್ಲಿ 5 ವಿಕೆಟ್ ನಷ್ಟಕ್ಕೆ ಗುರಿಯನ್ನು ತಲುಪಿತು. ಕೊನೆಯ ಎರಡು ಎಸೆತಗಳಲ್ಲಿ 10 ರನ್ ಬೇಕಿತ್ತು. ಮೋಹಿತ್ ಶರ್ಮಾ ಎಸೆದ 15ನೇ ಓವರಿನ 5ನೇ ಎಸೆತದಲ್ಲಿ ಜಡೇಜಾ ಸಿಕ್ಸ್ ಸಿಡಿಸಿದರೆ ಕೊನೆಯ ಎಸೆತವನ್ನು ಬೌಂಡರಿಗೆ ಅಟ್ಟುವ ಮೂಲಕ ಚೆನ್ನೈ ತಂಡಕ್ಕೆ ಗೆಲುವು ತಂದುಕೊಟ್ಟಿದ್ದರು.