ಬೆಂಗಳೂರು: ಮುಖ್ಯಮಂತ್ರಿ ನಿವಾಸದ ಭದ್ರತೆ ಕರ್ತವ್ಯದಲ್ಲಿದ್ದು ಗಾಂಜಾ ಮಾರಾಟ ಮಾಡುತ್ತಿದ್ದ ಇಬ್ಬರು ಪೊಲೀಸರನ್ನು ಬಂಧಿಸಿದ್ದ ಇನ್ಸ್ಪೆಕ್ಟರ್ರನ್ನೇ ಅಮಾನತು ಮಾಡಲಾಗಿದೆ.
ಇನ್ಸ್ಪೆಕ್ಟರ್ ಅಶ್ವಥ್ ಗೌಡ ಅಮಾನತುಗೊಂಡಿದ್ದಾರೆ. ಸಿಎಂ ಮನೆ ಬಳಿಯ ರಸ್ತೆಯಲ್ಲೇ ಗಾಂಜಾ ಡೀಲಿಂಗ್ ಮಾಡುತ್ತಿದ್ದ ಇಬ್ಬರು ಪೊಲೀಸರನ್ನು ಆರ್.ಟಿ.ನಗರ ಪೊಲೀಸರು ಮಂಗಳವಾರ ಬಂಧಿಸಿದ್ದರು. ಪೊಲೀಸ್ ಕಾನ್ಸ್ಟೇಬಲ್ಗಳ ಜೊತೆ ಇಬ್ಬರು ಪೆಡ್ಲರ್ಗಳೂ ಬಂಧನಕ್ಕೊಳಗಾಗಿದ್ದರು. ಈ ಬಗ್ಗೆ ಟ್ವೀಟ್ ಮಾಡಿ ಕಾಂಗ್ರೆಸ್ ಉಸ್ತುವಾರಿ ಸುರ್ಜೆವಾಲ ಅವರು ವ್ಯಂಗ್ಯವಾಡಿದ್ದರು. ಸಿಎಂ ಮೂಗಿನ ಕೆಳಗೆ ಡ್ರಗ್ ದಂಧೆ ನಡೆಯುತ್ತಿದೆ. ಹಾಗಾದರೆ ಬೆಕ್ಕಿಗೆ ಗಂಟೆ ಕಟ್ಟುವವರು ಯಾರು ಎಂದು ಟ್ವೀಟ್ ಮಾಡಿ ಹರಿಹಾಯ್ದಿದ್ದರು. ಇದನ್ನೂ ಓದಿ: ಸಿಎಂ ಮನೆ ಭದ್ರತೆ ಕರ್ತವ್ಯದಲ್ಲಿದ್ದ ಪೊಲೀಸರಿಂದಲೇ ಗಾಂಜಾ ಮಾರಾಟ – ಅರೆಸ್ಟ್
ಈ ಬೆಳವಣಿಗೆ ಸಾಕಷ್ಟು ಅಪಮಾನಕ್ಕೆ ಕಾರಣವಾಗಿತ್ತು. ಈ ಉದ್ದೇಶಕ್ಕೆ ಹಿರಿಯ ಅಧಿಕಾರಿಗಳು ಇನ್ಸ್ಪೆಕ್ಟರ್ರನ್ನು ಸಸ್ಪೆಂಡ್ ಮಾಡಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಆಗ್ನೇಯ ವಿಭಾಗ ಡಿಸಿಪಿ, ವಿಐಪಿ ಭದ್ರತಾ ಡಿಸಿಪಿಗೆ ನೋಟಿಸ್ ನೀಡಲಾಗಿದೆ. ಡಿಸಿಪಿ ಶ್ರೀನಾಥ್ ಜೋಶಿ, ಮಂಜುನಾಥ್ ಬಾಬುಗೆ ನಗರ ಪೊಲೀಸ್ ಆಯುಕ್ತ ಕಮಲ್ ಪಂತ್ ಮೆಮೊ ಜಾರಿ ಮಾಡಿದ್ದಾರೆ. ಪ್ರಕರಣದಲ್ಲಿ ಬಂಧನಕ್ಕೊಳಗಾಗಿದ್ದ ಕೋರಮಂಗಲ ಸಿಬ್ಬಂದಿಯ ಬಗ್ಗೆ ಸರಿಯಾದ ಮಾಹಿತಿ ಇಲ್ಲದೇ ಇದ್ದ ಕಾರಣ ಮೆಮೊ ನೀಡಿದ್ದಾರೆ.
ನೋಟಿಸ್ ಯಾಕೆ?
ಪ್ರಕರಣದಲ್ಲಿ ಕೋರಮಂಗಲ ಪೊಲೀಸರನ್ನು ಬಂಧನ ಮಾಡಲಾಗಿತ್ತು. ಬಂಧನವಾಗಿದ್ದ ಶಿವಕುಮಾರ್, ಸಂತೋಷ್ ಟ್ರ್ಯಾಕ್ ರೆಕಾರ್ಡ್ ಸಮರ್ಪವಾಗಿ ಇಲ್ಲ. ಇದರ ಬಗ್ಗೆ ಡಿಸಿಪಿ ಶ್ರೀನಾಥ್ ಜೋಷಿಗೆ ಮಾಹಿತಿ ಇದ್ದರೂ ಸಿಎಂ ಮನೆಗೆ ಭದ್ರತೆಗೆ ಕಳಿಸಿಕೊಟ್ಟಿದ್ದರ ಬಗ್ಗೆ ಸ್ಪಷ್ಟನೆ ಕೊಡುವಂತೆ ಆಗ್ನೇಯ ವಿಭಾಗದ ಡಿಸಿಪಿಗೆ ನೋಟಿಸ್ ಕೊಡಲಾಗಿದೆ. ವಿವಿಐಪಿ ಡಿಸಿಪಿ ಮಂಜುನಾಥ್ ಅವರಿಗೆ ವಿವಿಐಪಿಗಳ ಭದ್ರತೆ ಪರಿಶೀಲನೆಯಲ್ಲಿ ಕರ್ತವ್ಯ ಲೋಪ ಎಸಗಿರುವ ಆರೋಪದ ಮೇಲೆ ನೋಟಿಸ್ ಜಾರಿ ಮಾಡಲಾಗಿದೆ. ಇದನ್ನೂ ಓದಿ: ಮಸೀದಿಯನ್ನು ಒಡೆದು ಹಾಕಿ ಎಂದ ಕಾಳಿ ಸ್ವಾಮೀಜಿಗೆ ಷರತ್ತು ಬದ್ಧ ಜಾಮೀನು