ನವದೆಹಲಿ: ಐಎನ್ಎಸ್ ವಿಕ್ರಾಂತ್ ಉಳಿಸಲು ಕ್ರೌಡ್ ಫಂಡಿಂಗ್ ಅಭಿಯಾನಕ್ಕೆ ಸಂಬಂಧಿಸಿದಂತೆ ಶಿವಸೇನೆ ಹಾಗೂ ಬಿಜೆಪಿ ನಡುವೆ ಮಾತಿನ ಚಕಮಕಿ ನಡೆಯುತ್ತಿರುವ ಹೊತ್ತಿನಲ್ಲೇ ಐಎನ್ಎಸ್ ವಿಕ್ರಾಂತ್ ಹೆಸರಲ್ಲಿ ಸಂಗ್ರಹಿಸಿದ್ದ ದೇಣಿಗೆಯನ್ನು ದುರುಪಯೊಗ ಪಡಿಸಿಕೊಂಡ ಆರೋಪದ ಅಡಿಯಲ್ಲಿ ಬಿಜೆಪಿ ಮುಖಂಡ ಕಿರಿತ್ ಸೋಮಯ್ಯ ವಿರುದ್ಧ ಪೊಲೀಸರು ಎಫ್ಐಆರ್ ದಾಖಲಿಸಿದ್ದಾರೆ.
ಮಾಜಿ ಸೇನಾ ಸಿಬ್ಬಂದಿ ಬುಧವಾರ ಸಂಜೆ ಉಪನಗರ ಮನ್ಖುರ್ದ್ ನಲ್ಲಿರುವ ಟ್ರಾಂಬೆ ಪೊಲೀಸ್ ಠಾಣೆಯಲ್ಲಿ ೫೭ ಕೋಟಿ ರೂ.ಗೂ ಹೆಚ್ಚು ಹಣವನ್ನು ದುರುಪಯೋಗ ಮಾಡಿಕೊಂಡಿರುವುದಾಗಿ ಆರೋಪಿಸಿ, ನೀಡಿದ ದೂರಿನ ಆಧಾರದ ಮೇಲೆ ಅವರ ವಿರುದ್ಧ ಪ್ರಕರಣ ದಾಖಲಿಸಲಾಗಿದೆ. ಭಾರತೀಯ ದಂಡ ಸಂಹಿತೆ (ಐಪಿಸಿ) ಸೆಕ್ಷನ್ 406 (ನಂಬಿಕೆಗೆ ವಂಚಿಸಿ ಅಪರಾಧ), 420 (ಆಸ್ತಿ ವಿತರಣೆ ವಂಚನೆ) ಮತ್ತು 34 (ಸಾಮಾನ್ಯ ಉದ್ದೇಶ) ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ ಎಂದು ಟ್ರಾಂಬೆ ಪೊಲೀಸ್ ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ. ಇದನ್ನೂ ಓದಿ: XE ರೂಪಾಂತರಿ ಮುಂಬೈನಲ್ಲಿ ಪತ್ತೆಯಾಗಿಲ್ಲ: ಮಹಾರಾಷ್ಟ್ರ ಸ್ಪಷ್ಟನೆ
1961 ರಲ್ಲಿ ಕಾರ್ಯಾರಂಭ ಮಾಡಿದ ಭಾರತೀಯ ನೌಕಾಪಡೆಯ ಮೆಜೆಸ್ಟಿಕ್-ಕ್ಲಾಸ್ ವಿಮಾನವಾಹಕ ನೌಕೆ ಎಎನ್ಎಸ್ ವಿಕ್ರಾಂತ್, 1971ರ ಭಾರತ-ಪಾಕಿಸ್ತಾನ ಯುದ್ಧದ ಸಮಯದಲ್ಲಿ ಪೂರ್ವ ಪಾಕಿಸ್ತಾನದ ನೌಕಾ ದಿಗ್ಬಂಧನವನ್ನು ಜಾರಿಗೊಳಿಸುವಲ್ಲಿ ಪ್ರಮುಖ ಪಾತ್ರ ವಹಿಸಿದೆ. ಇದನ್ನು 1997ರಲ್ಲಿ ರದ್ದುಗೊಳಿಸಲಾಯಿತು. ಜನವರಿ 2014ರಲ್ಲಿ, ಹಡಗನ್ನು ಆನ್ಲೈನ್ ಹರಾಜಿನ ಮೂಲಕ ಮಾರಾಟ ಮಾಡಲಾಯಿತು ಮತ್ತು ಅದೇ ವರ್ಷದ ನವೆಂಬರ್ನಲ್ಲಿ ರದ್ದುಗೊಳಿಸಲಾಯಿತು. ಆದ್ದರಿಂದ INS ವಿಕ್ರಾಂತ್ ಗೆ ನಿಧಿ ಸಂಗ್ರಹಿಸಲು ಕಿರಿತ್ ಸೋಮಯ್ಯ ಅಭಿಯಾನ ಆರಂಭಿಸಿದ್ದರು ಎಂದು ದೂರುದಾರರು ಉಲ್ಲೇಖಿಸಿದ್ದಾರೆ.
ಹಡಗು ಉಳಿಸಲು ಕಿರಿತ್ ಸೋಮಯ್ಯ ಅವರಿಗೆ ದೇಣಿಗೆ ನೀಡಿದ್ದೇನೆ ಮತ್ತು ಬಿಜೆಪಿ ನಾಯಕರು ಇದೇ ಉದ್ದೇಶಕ್ಕಾಗಿ 57 ಕೋಟಿಗೂ ಹೆಚ್ಚು ಸಂಗ್ರಹಿಸಿದ್ದಾರೆ. ಆದರೆ, ಮೊತ್ತವನ್ನು ಮಹಾರಾಷ್ಟ್ರ ರಾಜಭವನಕ್ಕೆ ಠೇವಣಿ ಮಾಡದೇ ಹಣವನ್ನು ದುರ್ಬಳಕೆ ಮಾಡಿಕೊಂಡಿದ್ದಾರೆ ಎಂದು ದೂರಲಾಗಿದೆ. ಇದನ್ನೂ ಓದಿ: ಭಾರತಕ್ಕೆ ಕಾಲಿಟ್ಟ ಹೊಸ ರೂಪಾಂತರಿ ʼXEʼ – ಮುಂಬೈನಲ್ಲಿ ಮೊದಲ ಪ್ರಕರಣ ಪತ್ತೆ
Mark my words
INS विक्रांत चया नावे 56 कोटी गोळा करून जनतेला देशाला फसवणाऱ्या सोमय्या बाप बेटायाना जेल मध्ये जावेच लागेल. किरीट सोमय्या हा महाराष्ट्र द्रोही तर होताच पण देशद्रोही असल्याचे उघड झाले आहे. लोकांनी आता गप्प बसू नये. जवानांचे शोषण करणाऱ्या bjp ला जाब विचाराच लागेल. pic.twitter.com/juqXvAUa68
— Sanjay Raut (@rautsanjay61) April 7, 2022
ಈ ಆರೋಪವನ್ನು ತಳ್ಳಿಹಾಕಿದ ಕಿರಿತ್ ಸೋಮಯ್ಯ, ವಿಕ್ರಾಂತ್ ನಿಧಿ ಸಂಗ್ರಹದಲ್ಲಿ ಯಾವುದೇ ಹಗರಣ ನಡೆದಿಲ್ಲ, ನಾನು ಯಾವುದೇ ತಪ್ಪು ಮಾಡಿಲ್ಲ. ಸಂಜಯ್ ರಾವತ್ ಆರೋಪ ಮಾಡುತ್ತಿದ್ದಾರೆ, ಆದರೆ ಅವುಗಳನ್ನು ಸಾಬೀತುಪಡಿಸಲು ಪುರಾವೆಗಳನ್ನು ನೀಡಿಲ್ಲ. ಎಫ್ಐಆರ್ ಪ್ರತಿಯನ್ನೂ ನಾನು ಸ್ವೀಕರಿಸಿಲ್ಲ. ನಾನು ತನಿಖೆ ಎದುರಿಸಲು ಸಿದ್ಧನಿದ್ದೇನೆ. ರಾವತ್ ಅವರ ಬಳಿ ಸಾಕ್ಷ್ಯವಿದ್ದರೆ ಅದನ್ನು ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಅವರಿಗೆ ಹಸ್ತಾಂತರಿಸಲಿ ಎಂದು ತಿರುಗೇಟು ನೀಡಿದ್ದಾರೆ.
ಭೂ ಹಗರಣ ಪ್ರಕರಣಕ್ಕೆ ಸಂಬಂಧಿಸಿದಂತೆ ಜಾರಿ ನಿರ್ದೇಶನಾಲಯದಿಂದ (ED) ತನಿಖೆಗೆ ಒಳಪಟ್ಟಿರುವ ಸಂಜಯ್ ರಾವುತ್ ಅವರು ಬುಧವಾರ ಸೋಮಯ್ಯ ಅವರ ವಿರುದ್ಧ ಹಣ ದುರ್ಬಳಕೆ ಮಾಡಿಕೊಂಡಿರುವ ಆರೋಪ ಮಾಡಿದ್ದರು.