ಬೆಂಗಳೂರು: ಇನ್ಫೋಸಿಸ್ ಕಂಪನಿಯ ಸಹ ಸಂಸ್ಥಾಪಕರಾದ ಕೆ.ದಿನೇಶ್ ಅವರು ಆಶ್ರಯ ಹಸ್ತ ಟ್ರಸ್ಟ್ವತಿಯಿಂದ ಗಡಿ ಕಾಶ್ಮೀರದಲ್ಲಿರುವ ಮಚಲ್ ಪ್ರದೇಶ ಸೈನಿಕರಿಗೆ ಮತ್ತು ಜನರಿಗೆ ತುರ್ತು ವೈದ್ಯಕೀಯ ಚಿಕಿತ್ಸೆಗೆಂದು ಉಚಿತ 10 ಲಕ್ಷ ರೂ. ಮೌಲ್ಯದ ವೈದ್ಯಕೀಯ ಸಲಕರಣೆ ರವಾನೆ ಮಾಡಿದರು.
ಆಶ್ರಯ ಹಸ್ತ ಟ್ರಸ್ಟ್ ಜಯನಗರ ವತಿಯಿಂದ ಭಾರತ ಗಡಿ ಪ್ರದೇಶ ಮಚಲ್ ಪ್ರದೇಶಕ್ಕೆ 10 ಲಕ್ಷ ರೂ. ಮೌಲ್ಯದ ಉಚಿತ ವೈದ್ಯಕೀಯ ಸಲಕರಣೆಗಳಾದ ಆಕ್ಸಿಜನ್ ಕಾನ್ಸೆಂಟ್ರೇಟರ್, ಡಿಜಿಟಲ್ ಸ್ಟೆತೊಸ್ಕೋಪ್, ಅಮ್ಲಜನಕ ಸಿಲಿಂಡರ್ ಹಾಗೂ ಮತ್ತಿತರ ವೈದ್ಯಕೀಯ ಉಪಕರಣಗಳನ್ನು ಇಂದು ಬೆಂಗಳೂರಿನಿಂದ ವಿಮಾನದ ಮೂಲಕ ತಲುಪಿಸುವ ಕಾರ್ಯಕ್ರಮ ನಡೆಯಿತು. ಆಶ್ರಯ ಹಸ್ತ ಟ್ರಸ್ಟ್ ಸಂಸ್ಥಾಪಕರು ಹಾಗೂ ಇನ್ಫೋಸಿಸ್ ಕಂಪನಿಯ ಸಹ ಸಂಸ್ಥಾಪಕರಾದ ಕೆ.ದಿನೇಶ್ ಅವರು ಧ್ವಜಾ ತೋರುವ ಮೂಲಕ ಚಾಲನೆ ನೀಡಿದರು. ಇದನ್ನೂ ಓದಿ: ಪಿಎಸ್ಐ ನೇಮಕಾತಿ ಆದೇಶ ಕೈ ಸೇರುವ ಮುನ್ನವೇ ಯೂನಿಫಾರ್ಮ್ ಹಾಕ್ಕೊಂಡು ಬಿಲ್ಡಪ್
ಕೊವಿಡ್-19 ಸಾಂಕ್ರಮಿಕ ರೋಗದ ಎರಡು ಲಾಕ್ಡೌನ್ ಸಮಯದಲ್ಲಿ ಜನಸಾಮಾನ್ಯರು ಸಂಕಷ್ಟದಲ್ಲಿ ಇರುವಾಗ ಆಶ್ರಯ ಹಸ್ತ ಟ್ರಸ್ಟ್ ವತಿಯಿಂದ ಊಟದ ಪ್ಯಾಕೆಟ್ ಮತ್ತು ದಿನಸಿ ಕಿಟ್ಗಳನ್ನು ವಿತರಿಸಲಾಗಿತ್ತು. ಸಾರ್ವಜನಿಕರಿಗೆ ಕೊವಿಡ್-19ರ ಜನಜಾಗೃತಿ ಅಭಿಯಾನ ಕೈಗೊಳ್ಳಲಾಯಿತು. ಮಾಸ್ಕ್, ಸ್ಯಾನಿಟೈಸರ್ ಮತ್ತು ಕೋವಿಡ್ ಸೋಂಕಿತರಿಗೆ ವೈದ್ಯಕೀಯ ಸಹಾಯ, ಆಸ್ಪತ್ರೆಗೆ ದಾಖಲಿಸಲು ಆಶ್ರಯ ಹಸ್ತ ಟ್ರಸ್ಟ್ ಜನ ಸೇವೆಗೆ ಹಗಲಿರುಳು ಶ್ರಮಿಸಿದರು.
ಇದೀಗ ಭಾರತದ ಗಡಿಭಾಗ ಕಾಶ್ಮೀರದಲ್ಲಿ ಸತತ ಗುಂಡಿನ ಸುರಿಮಳೆಯಾಗುತ್ತಿದೆ. ಅಲ್ಲಿ ಆಸ್ಪತ್ರೆ ಸಹ ಸಮೀಪದಲ್ಲಿ ಇಲ್ಲ, ಇದು ಕನಿಷ್ಠ ನಾಲ್ಕು ಕಿಲೋ ಮೀಟರ್ ದೂರದಲ್ಲಿದೆ. ಈ ಹಿನ್ನೆಲೆ ಸೈನಿಕರಿಗೆ ಮತ್ತು ಮಚಲ್ ಪ್ರದೇಶದ ಮಕ್ಕಳು, ಹಿರಿಯರು ಮತ್ತು ಗರ್ಭಿಣಿಯರು, ಆನಾರೋಗ್ಯ ಪೀಡಿತರಾಗಿ ತುರ್ತು ವೈದ್ಯಕೀಯ ಸೌಲಭ್ಯ ಲಭಿಸಲಿ ಎಂದು ಉಚಿತವಾಗಿ ವೈದ್ಯಕೀಯ ಸಲಕರಣೆಗಳನ್ನು ತಲುಪಿಸಲಾಗುತ್ತಿದೆ ಎಂದು ಹೇಳಿದರು.
ಮುಖ್ಯವಾಗಿ ಆಶ್ರಯ ಹಸ್ತ ಟ್ರಸ್ಟ್ ಕೋವಿಡ್ ಸಂದರ್ಭದಲ್ಲಿ ಅಂಡಮಾನ್, ಮಣಿಪುರ್, ನಾಗಾಲ್ಯಾಂಡ್ ಹಾಗೂ ಅಸ್ಸಾಂ ಗಡಿಯಲ್ಲಿ ಇರುವ ಪ್ರಾಥಮಿಕ ಆರೋಗ್ಯ ಕೇಂದ್ರಗಳಿಗೆ ವೈದ್ಯಕೀಯ ಉಪಕರಣಗಳನ್ನು ನೀಡಿದ್ದರಿಂದ ಗಡಿಭಾಗದಲ್ಲಿ ಅನೇಕ ಸೈನಿಕರು ಮತ್ತು ಜನಸಾಮಾನ್ಯರ ಜೀವ ಉಳಿಸಲು ಸಾಧ್ಯವಾಗಿತ್ತು ಎಂದು ತಿಳಿಸಿದರು. ಇದನ್ನೂ ಓದಿ: ಕರ್ನಾಟಕದಲ್ಲಿ ಶಾಂತಿ ದೃಷ್ಟಿಯಿಂದ ಬುಲ್ಡೋಜರ್ ಕ್ರಮ ಅವಶ್ಯ: ಮುತಾಲಿಕ್
ಆಶ್ರಯ ಹಸ್ತ ಟ್ರಸ್ಟ್ ಬೆಂಗಳೂರಿನ ಮಂತ್ರ ಫಾರ್ ಚೇಂಜ್ ಹಾಗೂ ಸೂರ್ಯ ಫೌಂಡೇಶನ್ ಸಹಯೋಗದಲ್ಲಿ ಈ ಕಾರ್ಯಗಳನ್ನು ನಡೆಸುತ್ತಿದೆ.