ರಾಂಚಿ: ದೇಶದಲ್ಲಿ ಭ್ರೂಣದ ಲಿಂಗ ಪತ್ತೆಗೆ ನಿಷೇಧವಿದ್ದರೂ ಕಳಂಕವೆಂಬಂತೆ ಕೆಲ ವೈದ್ಯರು ತೆರೆಮರೆಯಲ್ಲಿ ಹಣಕ್ಕಾಗಿ ಭ್ರೂಣ ಲಿಂಗ ಪತ್ತೆ ಮಾಡುತ್ತಾರೆ ಎಂಬ ಆರೋಪಗಳು ಸಾರ್ವಜನಿಕ ವಲಯದಲ್ಲಿ ಕೇಳಿಬರುತ್ತಿರುತ್ತೇವೆ. ಅಂತಹದ್ದೆ ಒಂದು ಪ್ರಕರಣ ಜಾರ್ಖಂಡ್ ರಾಜ್ಯದಲ್ಲಿ ಬೆಳಕಿಗೆ ಬಂದಿದೆ.
ವೈದ್ಯನೊಬ್ಬ ಮಗು ಜನನಕ್ಕೂ ಮುನ್ನ ಗರ್ಭದಲ್ಲಿ ಹೆಣ್ಣು ಭ್ರೂಣವಿದೆ ಅಂತಾ ತಾಯಿಗೆ ಹೇಳಿದ್ದಾನೆ. ಆದ್ರೆ ಮಹಿಳೆ ಗಂಡು ಮಗುವಿಗೆ ಜನ್ಮ ನೀಡಿದ್ದರಿಂದ ತನ್ನ ಮಾತು ಸುಳ್ಳಾಗುತ್ತದೆ ಎಂದು ತಿಳಿದು ಕಂದಮ್ಮನ ಮರ್ಮಾಂಗವನ್ನೇ ಕಟ್ ಮಾಡಿದ್ದಾನೆ. ಡಾಕ್ಟರ್ನ ನೀಚ ಕೃತ್ಯದಿಂದ ಕೊನೆಗೆ ಮಗುವೇ ಸಾವನ್ನಪ್ಪಿದೆ.
ಜಾರ್ಖಂಡ್ ರಾಜ್ಯದ ರಾಜಧಾನಿ ರಾಂಚಿಯಿಂದ 140 ಕಿ.ಮೀ.ದೂರದಲ್ಲಿರುವ ಚತರಾ ಜಿಲ್ಲೆಯ ಇಟಖೋರಿ ಎಂಬಲ್ಲಿ ಈ ಘಟನೆ ನಡೆದಿದೆ. ಇಟಖೋರಿಯ ಪರವಾನಿಗೆ ಪಡೆಯದ ಆಸ್ಪತ್ರೆಯ ವೈದ್ಯರಾದ ಡಾ.ಅನುಜ್ ಕುಮಾರ್ ಮತ್ತು ಡಾ.ಅರುಣ್ ಕುಮಾರ್ ಎಂಬ ಇಬ್ಬರೂ ತಮ್ಮ ತಪ್ಪನ್ನು ಮುಚ್ಚಿ ಹಾಕುವುದಕ್ಕಾಗಿ ನವಜಾತ ಶಿಶುವನ್ನೇ ಕೊಂದಿದ್ದಾರೆ.
ಆಸ್ಪತ್ರೆಗೆ ಪರವಾನಿಗೆ ಇಲ್ಲದಿದ್ರೂ, ಇಬ್ಬರೂ ವೈದ್ಯರು ಅಲ್ಟ್ರಾ ಸೌಂಡ್ ಮಶೀನ್ ಸಹ ಇಟ್ಟುಕೊಂಡಿದ್ರು. ಸುತ್ತಲಿನ ಗ್ರಾಮಸ್ಥರಿಗೆ ಇದೇ ಯಂತ್ರದಲ್ಲಿ ಸ್ಕ್ಯಾನಿಂಗ್ ಮಾಡಿ ಚಿಕಿತ್ಸೆ ನೀಡುತ್ತಿದ್ದರು.
ಬಲಿಯಾ ಗ್ರಾಮದ 8 ತಿಂಗಳು ಗರ್ಭಿಣಿ ಗುಡ್ಡಿ ದೇವಿ ಹೊಟ್ಟೆ ನೋವಿನಿಂದಾಗಿ ಆಸ್ಪತ್ರೆಗೆ ದಾಖಲಾಗಿದ್ರು. ಈ ವೇಳೆ ಗುಡ್ಡಿದೇವಿ ಅವರಿಗೆ ಅಲ್ಟ್ರಾ ಸೌಂಡ್ ಸ್ಕ್ಯಾನಿಂಗ್ ಮಾಡಿ ನಿಮಗೆ ಹೆಣ್ಣು ಮಗು ಹುಟ್ಟಲಿದೆ ಅಂತಾ ತಿಳಿಸಿದ್ದಾರೆ. ಆದ್ರೆ ಮಗು ಜನಿಸಿದ ನಂತರ ವೈದ್ಯರ ಮಾತು ಸುಳ್ಳಾಗಿದ್ದರಿಂದ ಇಬ್ಬರೂ ಮಗುವಿನ ಮರ್ಮಾಂಗವನ್ನೇ ಕಟ್ ಮಾಡಿದ್ದಾರೆ.
ಈ ಸಂಬಂಧ ವೈದ್ಯರಿಬ್ಬರ ವಿರುದ್ಧ ಇಟಖೋರಿ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದೆ. ಘಟನೆಗೆ ಸಂಬಂಧಿಸಿದಂತೆ ತನಿಖೆ ನಡೆಸಲು ಸಂಬಂಧಪಟ್ಟ ಅಧಿಕಾರಿಗಳಿಗೆ ಜಾರ್ಖಂಡ್ ಆರೋಗ್ಯ ಸಚಿವ ರಾಮಚಂದ್ರ ಚಂದ್ರವಂಶಿ ಆದೇಶಿಸಿದ್ದಾರೆ.