ಉಡುಪಿ: ಈ ಬಾರಿ ಬೇರೆ ಕಾರ್ಯಕ್ರಮಗಳು ನಿಗಧಿಯಾಗಿದ್ದರಿಂದ ಇಫ್ತಾರ್ ಕೂಟ ಏರ್ಪಡಿಸಲು ಸಾಧ್ಯವಾಗಿಲ್ಲ, ಬದಲಾಗಿ ಸ್ನೇಹ ಕೂಟವನ್ನು ಏರ್ಪಡಿಸಬಹುದು ಎಂದು ಪೇಜಾವರ ಶ್ರೀ ತಿಳಿಸಿದ್ದಾರೆ.
ರಂಜಾನ್ ಹಬ್ಬ ಹಿನ್ನೆಲೆಯಲ್ಲಿ ಇಂದು ಮುಸ್ಲಿಂ ಬಾಂಧವರು ಪೇಜಾವರ ಶ್ರೀಗಳನ್ನು ಭೇಟಿಯಾಗಿದ್ದರು. ಈ ವೇಳೆ ಶ್ರೀಗಳು ಹಬ್ಬದ ಶುಭಾಶಯವನ್ನು ಸಲ್ಲಿಸಿ ಫಲ, ಖರ್ಜೂರವನ್ನು ನೀಡಿದರು.
ಈ ವೇಳೇ ಮಾಧ್ಯಮಗಳೊಂದಿಗೆ ಮಾತನಾಡಿದ ಪೇಜಾವರ ಸ್ವಾಮೀಜಿ ಇಫ್ತಾರ್ ಕೂಟವೇ ಆಗಬೇಕಿಲ್ಲ, ಸ್ನೇಹ ಕೂಟ ಯಾವಾಗ ಬೇಕಾದರೂ ಮಾಡಬಹುದು. ಉತ್ತರ ಭಾರತ ಪ್ರವಾಸದಲ್ಲಿದ್ದರಿಂದ ಈ ಭಾರೀ ಅವಕಾಶ ಸಿಕ್ಕಿಲ್ಲ. ಬೇರೆ ಕಾರ್ಯಕ್ರಮಗಳೆಲ್ಲಾ ಫಿಕ್ಸ್ ಆಗಿತ್ತು, ಹೀಗಾಗಿ ರಂಜಾನ್ ಸಮಯದಲ್ಲಿ ಇಫ್ತಾರ್ ಕೂಟ ಮಾಡುವುದಕ್ಕೆ ಸಾಧ್ಯವಾಗಿಲ್ಲ. ಮುಂದಿನ ದಿನಗಳಲ್ಲಿ ಸ್ನೇಹ ಕೂಟ ಮಾಡುತ್ತೇವೆ. ಕ್ರೈಸ್ತರು, ಮುಸಲ್ಮಾನರನ್ನು ಈ ಸ್ನೇಹ ಕೂಟಕ್ಕೆ ಕರೆಯುತ್ತೇವೆ. ಯೋಗ್ಯ ಸಂದರ್ಭ ನೋಡಿ ಸ್ನೇಹ ಕೂಟ ಮಾಡುತ್ತೇವೆ ಎಂದು ತಿಳಿಸಿದರು.
ಇದೇ ವೇಳೆ ಈ ಬಾರಿಯ ಸ್ನೇಹ ಕೂಟಕ್ಕೆ ಯಾರ ವಿರೋಧವು ಇರಲಿಲ್ಲ. ಸಂಘದ ಪ್ರಮುಖರೇ ನಮ್ಮ ವಿರೋಧವಿಲ್ಲ ಎಂದು ಹೇಳಿದ್ದರು. ಆದರೆ ಕಳೆದ ಬಾರಿ ಹಿಂದೂಗಳಲ್ಲೇ ಕೆಲವರು ನೀವು ಮಾಡಿದ್ದು ತಪ್ಪು ಎಂದು ಹೇಳಿದ್ದರು. ಆ ವೇಳೆ ನಮ್ಮ ಪರಮಗುರುಗಳು ಪರ್ಯಾಯ ಪೂರ್ವದಲ್ಲಿ ಹಾಜೀ ಅಬ್ದುಲ್ಲಾ ಅವರಿಂದ ಪಾದ ಪೂಜೆ ಸ್ವೀಕಾರ ಮಾಡಿದ್ದಾರೆ. ನಾವು ಅವರನ್ನು ಕರೆಸಿ ಊಟ ಹಾಕಿದರೆ ಏನು ತಪ್ಪಾಗುತ್ತದೆ ಎಂದು ಹೇಳಿದ್ದೆ ಎಂದು ತಿಳಿಸಿದರು.
ಹಿಂದೂಗಳು ಕೆಲ ಬೇಡಿಕೆ ನಡೆಸಬೇಕು, ಮುಸಲ್ಮಾನರು ನಮ್ಮ ಕೆಲ ಬೇಡಿಕೆ ನಡೆಸಬೇಕು ಹೀಗಾಗಿ ಸ್ನೇಹಕೂಟ, ಮಾತುಕತೆ ನಡೆಯುತ್ತಿದ್ದರೆ ಮತ್ತಷ್ಟು ಸಮನ್ವಯ ಬೆಳೆಯಲು ಅನುಕೂಲ, ನಮ್ಮಲ್ಲಿ ಯಾವುದೇ ರಾಜಕೀಯ ಉದ್ದೇಶ ಇಲ್ಲ. ರಾಜಕಾರಣಿಗಳು ಮಾಡುವುದೆಲ್ಲಾ ಮುಸ್ಲಿಂ ತುಷ್ಟೀಕರಣಕ್ಕೆ, ಓಟಿಗಾಗಿ ಆದರೆ ನಮ್ಮದು ಹಾಗೆ ಅಲ್ಲ ಬರೀ ತುಷ್ಟೀಕರಣ ಅಲ್ಲ. ಎಲ್ಲರ ಜೊತೆ ಸೌಹಾರ್ದ ಇರಬೇಕು ಎಂದು ಹೇಳಿದರು. ಇದೇ ಸಂದರ್ಭ ಮಾತನಾಡಿದ ಮುಸ್ಲಿಂ ಮುಖಂಡ ಅನ್ಸಾರ್ ಅಹಮ್ಮದ್ ಪ್ರತಿವರ್ಷದಂತೆ ಈ ಬಾರಿಯು ರಂಜಾನ್ ದಿನದಂದು ಸ್ವಾಮೀಜಿಗೆ ಫಲ ಸಲ್ಲಿಸಿ ಆಶೀರ್ವಾದ ಪಡೆದಿದ್ದೇವೆ ಎಂದು ಹೇಳಿದರು.