– ತಂಡವನ್ನು ಗೆಲುವಿನ ದಡ ಸೇರಿಸುವುದು ನನ್ನ ಗುರಿ
ನವದೆಹಲಿ: ನನಗೆ ಡೇವಿಡ್ ವಾರ್ನರ್ ಅಥವಾ ವೀರೇಂದ್ರ ಸೆಹ್ವಾಗ್ ರೀತಿಯಲ್ಲಿ ಬ್ಯಾಟ್ ಬೀಸಲು ಬರಲ್ಲ ಎಂದು ಭಾರತದ ಟೆಸ್ಟ್ ಬ್ಯಾಟ್ಸ್ ಮ್ಯಾನ್ ಚೆತೇಶ್ವರ ಪೂಜಾರ ಅವರು ಹೇಳಿದ್ದಾರೆ.
ಕಳೆದ ಕೆಲವು ವರ್ಷಗಳಿಂದ ಚೆತೇಶ್ವರ ಪೂಜಾರ ಟೆಸ್ಟ್ನಲ್ಲಿ ಭಾರತದ ಬ್ಯಾಟಿಂಗ್ನ ಮುಖ್ಯ ಆಧಾರವಾಗಿದ್ದಾರೆ. ಟೆಸ್ಟ್ನಲ್ಲಿ ಮೂರನೇ ಆಟಗಾರನಾಗಿ ಬ್ಯಾಟಿಂಗ್ ಬರುವ ಪೂಜಾರ 48.7 ಸರಾಸರಿಯಲ್ಲಿ ಬ್ಯಾಟ್ ಬೀಸಿ 18 ಶತಕಗಳನ್ನು ಸಿಡಿಸಿದ್ದಾರೆ. ಇದರ ಜೊತೆಗೆ ಇದುವರೆಗೆ ಆಡಿರುವ 77 ಟೆಸ್ಟ್ ಪಂದ್ಯಗಳಲ್ಲಿ 5,840 ರನ್ ಗಳಿಸಿದ್ದಾರೆ.
ಟೆಸ್ಟ್ ಮಾದರಿಯಲ್ಲಿ ಒಳ್ಳೆಯ ದಾಖಲೆಯನ್ನು ಹೊಂದಿರುವ ಪೂಜಾರ ಅವರನ್ನು ಇತ್ತೀಚೆಗೆ ಅವರ ಮಂದಗತಿಯ ಬ್ಯಾಟಿಂಗ್ ವಿಚಾರವಾಗಿ ಪ್ರಶ್ನೆ ಮಾಡಲಾಗಿತ್ತು. ಇತ್ತೀಚೆಗೆ ನಡೆದ ರಣಜಿ ಟ್ರೋಫಿಯ ಫೈನಲ್ ಪಂದ್ಯದಲ್ಲಿ ಪೂಜಾರ ಅವರು ಬರೋಬ್ಬರಿ 237 ಎಸೆತಗಳಲ್ಲಿ ಕೇವಲ 66 ರನ್ ಸಿಡಿಸಿದ್ದರು. ಈ ವಿಚಾರವಾಗಿ ಅವರನ್ನು ಪ್ರಶ್ನೆ ಮಾಡಿದಾಗ ನನಗೆ ಡೇವಿಡ್ ವಾರ್ನರ್ ಅಥವಾ ವೀರೇಂದ್ರ ಸೆಹ್ವಾಗ್ ರೀತಿಯಲ್ಲಿ ಬ್ಯಾಟ್ ಬಿಸಲು ಬರುವುದಿಲ್ಲ. ನನ್ನ ತಂಡಕ್ಕೆ ಹೇಗೆ ಬೇಕು ಹಾಗೇ ಆಡುತ್ತೇನೆ ಎಂದು ಹೇಳಿದ್ದಾರೆ.
ನನ್ನ ಬ್ಯಾಟಿಂಗ್ ಬಗ್ಗೆ ಮೀಡಿಯಾದಲ್ಲಿ ಬಹಳ ಚರ್ಚೆ ನಡೆಯುತ್ತಿದೆ ಎಂಬುದು ನನಗೆ ಗೊತ್ತು. ಆದರೆ ನಾನು ಅದರ ಬಗ್ಗೆ ಯೋಚನೆ ಮಾಡುವುದಿಲ್ಲ. ನನ್ನ ಮಂದಗತಿಯ ಬ್ಯಾಟಿಂಗ್ ಅನ್ನು ಹೊರಗೆ ಬೇರೆ ರೀತಿಯಲ್ಲಿ ವರ್ಣಿಸಲಾಗುತ್ತಿದೆ. ಆದರೆ ತಂಡದ ಆಡಳಿತ ಮಂಡಳಿ ಈ ವಿಚಾರದಲ್ಲಿ ನನ್ನ ಸಹಾಯಕ್ಕೆ ನಿಂತಿದೆ. ನನ್ನ ಸ್ಟ್ರೈಕ್ ರೇಟ್ ವಿಚಾರದಲ್ಲಿ ನನ್ನ ತಂಡದ ಕೋಚ್ ಆಗಲಿ ಅಥವಾ ಕ್ಯಾಪ್ಟನ್ ಅಗಲಿ ಯಾವುದೇ ರೀತಿಯ ಒತ್ತಡ ಹಾಕಿಲ್ಲ ಎಂದು ಪೂಜಾರ ತಿಳಿಸಿದ್ದಾರೆ.
ನನಗೆ ನನ್ನ ಸ್ಟ್ರೈಕ್ ರೇಟ್ ಮುಖ್ಯವಲ್ಲ, ನನ್ನ ಪ್ರಾಥಮಿಕ ಕಾಳಜಿ ಮತ್ತು ಕಲಸವೆಂದರೆ ಪ್ರತಿ ಬಾರಿಯೂ ತನ್ನ ತಂಡವನ್ನು ಗೆಲುವಿನ ದಡ ಸೇರಿಸುವುದು ನನ್ನ ಜವಾಬ್ದಾರಿ. ಆದ್ದರಿಂದ ನನ್ನ ನಿಧಾನಗತಿಯ ಬ್ಯಾಟಿಂಗ್ ಶೈಲಿ ಮತ್ತು ಸ್ಟ್ರೈಕ್ ರೇಟ್ ಈ ಎಲ್ಲವುದರಿಂದ ನಾನು ಸ್ವೀಕರಿಸುತ್ತಿರುವ ಟೀಕೆಗಳ ಬಗ್ಗೆ ನಾನು ತಲೆಕೆಡಿಸಿಕೊಳ್ಳಲ್ಲ ಎಂದು ಪೂಜಾರ ಸ್ಪಷ್ಟಪಡಿಸಿದ್ದಾರೆ.
ನನ್ನ ತಂಡದ ಆಡಳಿತ ಮಂಡಳಿ ಮತ್ತು ಆಟಗಾರರು ನನ್ನ ಬ್ಯಾಟಿಂಗ್ ಶೈಲಿಯನ್ನು ಅರ್ಥಮಾಡಿಕೊಂಡಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ರಣಜಿ ಟ್ರೋಫಿ ಫೈನಲ್ನಲ್ಲಿ ಯಾಕೆ ರನ್ ಗಳಿಸಲು ಪೂಜಾರ ಅಷ್ಟೊಂದು ಎಸೆತಗಳನ್ನು ತೆಗೆದುಕೊಂಡರು ಎಂಬ ಪ್ರಶ್ನೆ ಎದ್ದಿದೆ. ಅದರ ಬಗ್ಗೆ ನಾನು ಯಾವಗಲೂ ಗಮನ ಕೊಡುವುದಿಲ್ಲ. ನನ್ನ ಕೆಲಸ ನನ್ನ ತಂಡ ಎಲ್ಲ ಸಮಯದಲ್ಲೂ ಗೆಲ್ಲುವಂತೆ ಮಾಡುವುದು. ಅದನ್ನು ನಾನು ಮಾಡಲು ಪ್ರಯತ್ನ ಪಡುತ್ತೇನೆ ಎಂದು ಪೂಜಾರ ಹೇಳಿದ್ದಾರೆ.
ಈಗ ಬರುತ್ತಿರುವ ಯುವ ಆಟಗಾರರು ಟೆಸ್ಟ್ ಕ್ರಿಕೆಟ್ನಲ್ಲಿ ಹೆಚ್ಚು ಆಸಕ್ತಿ ಹೊಂದಿರುವುದಿಲ್ಲ, ಬದಲಿಗೆ ಅವರು ಏಕದಿನ ಮತ್ತು ಟಿ-20 ಮಾದರಿಯಲ್ಲಿ ಹೆಚ್ಚು ಆಸಕ್ತಿ ಬೆಳೆಸಿಕೊಂಡಿರುತ್ತಾರೆ. ನಾನು ಇದನ್ನು ತಪ್ಪು ಎಂದು ಹೇಳುವುದಿಲ್ಲ. ಯಾಕೆಂದರೆ ಬಿಳಿ ಬಾಲಿನಲ್ಲಿ ಹೆಚ್ಚು ಪಂದ್ಯಗಳನ್ನು ಇತ್ತೀಚೆಗೆ ಆಡಿಸುತ್ತಾರೆ ಹಾಗೂ ಆ ಪಂದ್ಯಗಳು ಆರ್ಥಿಕವಾಗಿ ಉತ್ತಮವಾಗಿ ಇರುತ್ತವೆ. ಆದರೆ ನಿಜವಾದ ಆಟ ಇರುವುದು ಟೆಸ್ಟ್ ಕ್ರಿಕೆಟ್ನಲ್ಲಿ ಎಂದು ಪೂಜಾರ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.