ಚಿತ್ರದುರ್ಗ: ದರ್ಗಾದಲ್ಲಿ ಪ್ರಾರ್ಥನೆ ಮುಗಿಸಿ ಮನೆಗೆ ಮರಳುತ್ತಿದ್ದಾಗ ಪತಿಯೇ ಪತ್ನಿಯನ್ನು ಕೊಲೆಗೈದಿರುವ ಘಟನೆ ಜಿಲ್ಲೆಯ ಚಳ್ಳಕೆರೆ ಗೇಟ್ ಬಳಿ ನಡೆದಿದೆ.
ನಗರದ ಬಡಾಮಖಾನ್ ಬಡಾವಣೆಯ ನಿವಾಸಿ ಅಮೀನಾ(30) ಸಾವನ್ನಪ್ಪಿರುವ ದುರ್ದೈವಿಯಾಗಿದ್ದಾರೆ. ಆರೋಪಿ ಪತಿ ಮಹಿಬೂಬ್ ಪಾಶಾನನ್ನು ಪೊಲೀಸರ ವಶಕ್ಕೆ ಪಡೆದಿದ್ದಾರೆ. ಇಂದು ಬೆಳಗ್ಗೆ ಜಿಲ್ಲೆಯ ಚಳ್ಳಕೆರೆ ಪಟ್ಟಣದ ಹೊರವಲಯದಲ್ಲಿರುವ ದರ್ಗಾಕ್ಕೆ ಪತ್ನಿಯನ್ನು ಸ್ಕೂಟಿಯಲ್ಲಿ ಆರೋಪಿ ಕರೆದೊಯ್ದಿದ್ದನು. ಇದನ್ನೂ ಓದಿ: ನಿನ್ನ ವಾಹನದಿಂದ ಬೆಳೆ ಉಳಿಸು- ಗಣಪತಿಗೆ ಜೀವಂತ ಇಲಿ ನೀಡಿ ಬೇಡಿಕೊಂಡ ರೈತ
ಇಬ್ಬರೂ ದರ್ಗಾದಲ್ಲಿ ಪ್ರಾರ್ಥನೆ ಸಲ್ಲಿಸಿ, ಚಳ್ಳಕೆರೆ ನಗರದ ಸಂಬಂಧಿಗಳ ಮನೆಗೆ ತೆರಳಿ, ಅವರೊಂದಿಗೆ ಕೆಲ ಸಮಯ ಕಳೆದು ವಾಪಸ್ ಬರುವಾಗ ಸ್ಕೂಟಿ ಚಾಲನೆ ವೇಳೆಯೇ ಕತ್ತಲಲ್ಲಿ ಪತ್ನಿಯನ್ನು ಕೊಲೆಗೈದಿದ್ದಾನೆ.
ಹಲವು ದಿನಗಳಿಂದ ಇಬ್ಬರ ನಡುವೆ ದಿನನಿತ್ಯ ವಾಗ್ವಾದ ಹಾಗೂ ಗಲಭೆ ನಡೆಯುತ್ತಿತ್ತು. ಕೌಟುಂಬಿಕ ವಿಚಾರವಾಗಿ ಶುರುವಾದ ಗಲಭೆ ಇಂದು ಪತ್ನಿಯ ಸಾವಿನೊಂದಿಗೆ ಅಂತ್ಯವಾಗಿದೆ. ಈಗಾಗಲೇ ಆರೋಪಿ ಪತಿ ಮಹಿಬೂಬ್ ಪಾಶಾನನ್ನು ಬಡಾವಣೆ ಠಾಣೆ ಪೊಲೀಸರು ವಶಕ್ಕೆ ಪಡೆದಿದ್ದಾರೆ. ಘಟನಾ ಸ್ಥಳಕ್ಕೆ ಚಿತ್ರದುರ್ಗ ಎಸ್ಪಿ ರಾಧಿಕಾ, ಎಎಸ್ಪಿ ನಂದಗಾವಿ, ಡಿವೈಎಸ್ಪಿ ಪಾಂಡುರಂಗ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ತನಿಖೆ ಮುಂದುವರೆಸಿದ್ದಾರೆ.