ಕೋಲಾರ: ಅಕ್ರಮ ಸಂಬಂಧ ಹಿನ್ನೆಲೆ ತನ್ನ ಎರಡನೇ ಹೆಂಡತಿಯ ತಲೆ ಕಡಿದು, ರುಂಡದೊಂದಿಗೆ ಪತಿ ಪೊಲೀಸರಿಗೆ ಶರಣಾಗಿರುವ ಘಟನೆ ಜಿಲ್ಲೆಯ ಶ್ರೀನಿವಾಸಪುರ ಪಟ್ಟಣದಲ್ಲಿ ನಡೆದಿದೆ.
ಬೆಂಗಳೂರಿನ ನೀಲಸಂದ್ರ ನಿವಾಸಿ ರೋಷಿಣಿ ಖಾನಂ ಕೊಲೆಯಾದ ಪತ್ನಿಯಾಗಿದ್ದಾಳೆ. ಸುಮಾರು 27 ವರ್ಷದ ಸದ್ದಾಂ ಹುಸೇನ್ ಅಲಿಯಾಸ್ ಅಜೀಜ್ ಪೊಲೀಸರಿಗೆ ಶರಣಾದ ಪತಿ. ಮೂಲತಃ ಶ್ರೀನಿವಾಸಪುರ ಪಟ್ಟಣದ ಗಫರ್ ಖಾನ್ ಮೊಹಲ್ಲಾದ ನಿವಾಸಿಯಾಗಿರುವ ಅಜೀಜ್ ತನ್ನ 2ನೇ ಹೆಂಡತಿಯ ಅಕ್ರಮ ಸಂಬಂಧದ ಹಿನ್ನೆಲೆಯಲ್ಲಿ ಕೊಲೆ ಮಾಡಿದ್ದಾನೆ ಎನ್ನಲಾಗಿದೆ.
ಅಕ್ರಮ ಸಂಬಂಧ ಹೊಂದಿದ್ದ ಪತ್ನಿಯನ್ನು ಮುಗಿಸಬೇಕೆಂದು ಮೊದಲೇ ಸಂಚು ರೂಪಿಸಿದ್ದ ಅಜೀಜ್, ಗುರುವಾರ ಚಿಕ್ಕಬಳ್ಳಾಪುರ ಜಿಲ್ಲೆಯ ಚಿಂತಾಮಣಿ ತಾಲೂಕಿನ ಮುರುಗಮುಲ್ಲಕ್ಕೆ ಹೆಂಡತಿಯನ್ನು ಬೈಕಿನಲ್ಲಿ ಕರೆದುಕೊಂಡು ಬಂದಿದ್ದಾನೆ. ಬಳಿಕ ಪತ್ನಿ ರೋಷಿಣಿ ಖಾನಂಗೆ ಪ್ರಜ್ಞೆ ತಪ್ಪಿಸಿ ಬರ್ಬರವಾಗಿ ಕತ್ತು ಕೊಯ್ದು ಹತ್ಯೆ ಮಾಡಿದ್ದಾನೆ.
ನಂತರ ಹೆಂಡತಿಯ ತಲೆಯನ್ನು ತೆಗೆದುಕೊಂಡು ಬಂದು ಶ್ರೀನಿವಾಸಪುರ ಪೊಲೀಸ್ ಠಾಣೆಗೆ ಶರಣಾಗಿದ್ದಾನೆ. ಅಲ್ಲದೆ ಠಾಣೆಯಲ್ಲೇ ಪತ್ನಿಯ ರುಂಡವನ್ನು ಹಿಡಿದು ಕೊಂಡು ಚಿನ್ನಾ, ರನ್ನಾ ಎನ್ನುತ್ತಾ ಮುದ್ದಾಡಿದ್ದಾನೆ. ಪೊಲೀಸರು ಆರೋಪಿಯನ್ನು ವಶಕ್ಕೆ ಪಡೆದು, ಕೃತ್ಯಕ್ಕೆ ಬಳಸಿದ್ದ ಕತ್ತಿ ಹಾಗೂ ಮಹಿಳೆಯ ರುಂಡವನ್ನು ವಶಪಡಿಸಿಕೊಂಡಿದ್ದಾರೆ.
ಆರೋಪಿ ಅಜೀಜ್ನನ್ನು ವಿಚಾರಣೆಗೆ ಒಳಪಡಿಸಿದ್ದಾರೆ. ಅಲ್ಲದೇ ಪ್ರಕರಣವು ಚಿಕ್ಕಬಳ್ಳಾಪುರ ಜಿಲ್ಲೆಯ ಚಿಂತಾಮಣಿ ವ್ಯಾಪ್ತಿಯಲ್ಲಿ ಜರುಗಿದ್ದರಿಂದ ಪೊಲೀಸರು ಕೆಂಚಾರಲಹಳ್ಳಿ ಪೊಲೀಸ್ ಠಾಣೆಗೆ ಆರೋಪಿಯನ್ನು ಒಪ್ಪಿಸಿದ್ದಾರೆ. ಘಟನೆ ಸಂಬಂಧ ಕೆಂಚಾರಲಹಳ್ಳಿಯಲ್ಲಿ ಪ್ರಕರಣ ದಾಖಲಾಗಿದೆ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv