ಬೆಂಗಳೂರು: ನಾರಾಯಣಗೌಡರನ್ನು (Narayana Gowda) ಸರಿಯಾಗಿ ನಡೆಸಿಕೊಳ್ಳೋದು ಅಂದರೆ ಹೇಗೆ? ಪೊಲೀಸರು ಹೇಗೆ ನಡೆಸಿಕೊಳ್ಳಬೇಕು ಎಂದು ಅವರನ್ನೇ ಕೇಳುತ್ತೇನೆ ಹೇಳಲಿ. ಹೀಗೆ ಕಾನೂನು ಕೈಗೆತ್ತಿಕೊಂಡರೆ ಸುಮ್ಮನೆ ಇರೋದಕ್ಕೆ ಆಗುತ್ತಾ? ಪ್ರತಿಭಟನೆಗೆ ಅರ್ಧಗಂಟೆ ಸಮಯ ಕೊಡಬಹುದು. ಆದರೆ ರಸ್ತೆಯಲ್ಲಿ ಇದ್ದರೆ ಏನು ಮಾಡಬಹುದು ಎಂದು ಕರವೇ (Karnataka Rakshana Vedike) ನಾರಾಯಣಗೌಡ ವಿರುದ್ಧ ಗೃಹ ಸಚಿವ ಪರಮೇಶ್ವರ್ (G Parameshwar) ಗರಂ ಆಗಿದ್ದಾರೆ.
ಈ ಕುರಿತು ಬೆಂಗಳೂರಿನಲ್ಲಿ (Bengaluru) ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕರವೇ ಹೋರಾಟಗಾರರು ಬಲವಂತವಾಗಿ ಬೋರ್ಡ್ ತೆಗೆಯೋದು, ಒಡೆದು ಹಾಕುವುದು ಮಾಡಿದ್ದಾರೆ. ಪೊಲೀಸರು ಸುಮ್ಮನೆ ಇರೋದಕ್ಕೆ ಆಗಲ್ಲ. ಕರವೇ ಹೋರಾಟಗಾರರು ಸಾರ್ವಜನಿಕರಿಗೆ ಧಕ್ಕೆ ತರುವ ಕೆಲಸ ಮಾಡಬಾರದಾಗಿತ್ತು. ಅದಕ್ಕೆ ಪೊಲೀಸರು ಸುಮ್ಮನೆ ಇರಲು ಆಗಲ್ಲ. ಕನ್ನಡ ನಾಮಫಲಕ ಕಡ್ಡಾಯ ಮಾಡೋದಕ್ಕೆ ಬಿಬಿಎಂಪಿಯವರು ಫೆಬ್ರವರಿ 28ರ ಗಡುವು ನೀಡಿದ್ದಾರೆ. ಸ್ವಲ್ಪ ಸಂಯಮ ಇರಬೇಕಲ್ವಾ? ಕಾನೂನಿನ ಉಲ್ಲಂಘನೆ ಮಾಡಿದರೆ ಸುಮ್ಮನಿರೋಕೆ ಆಗಲ್ಲ. ಇದನ್ನು ಸರ್ಕಾರ ಸಹಿಸಲ್ಲ ಎಂದು ಎಚ್ಚರಿಕೆ ಕೊಟ್ಟರು. ಇದನ್ನೂ ಓದಿ: ಆರ್ಎಸ್ಎಸ್ಗೂ ರಾಮಮಂದಿರಕ್ಕೂ ಏನೂ ಸಂಬಂಧವಿಲ್ಲ: ಡಿಕೆಶಿ
ನಾವು ಯಾರ ಪರವೂ ಇಲ್ಲ, ವಿರೋಧವೂ ಇಲ್ಲ. ಕಾನೂನನ್ನು ಯಾರೇ ಉಲ್ಲಂಘಿಸಿದ್ದರೂ ಸುಮ್ಮನಿರಲ್ಲ. ಸಾರ್ವಜನಿಕರಿಗೆ ತೊಂದರೆ ಆಗುತ್ತಿದ್ದರೆ ಪೊಲೀಸರು ಸುಮ್ಮನೆ ಕೂರಬೇಕಾ? ಇಡೀ ವಿಶ್ವಕ್ಕೆ ಬೆಂಗಳೂರು ಮಾದರಿ ನಗರ. ವಿಶ್ವದಿಂದ ಜನ ಬರುತ್ತಾರೆ. ಅವರಿಗೆಲ್ಲ ಏನು ಸಂದೇಶ ಕೊಟ್ಟ ಹಾಗೆ ಆಗುತ್ತದೆ? ಅದಕ್ಕೆ ಪೊಲೀಸರು ಕ್ರಮ ಕೈಗೊಂಡಿದ್ದಾರೆ. ಸರ್ಕಾರದ ಗಮನಕ್ಕೆ ತರಬೇಕು, ಬಿಬಿಎಂಪಿ ಗಮನಕ್ಕೆ ತರಬೇಕಿತ್ತು. ಪ್ರತಿಭಟನೆ ಕಾನೂನಿನ ಅಡಿಯಲ್ಲಿ ಮಾಡಬೇಕಿತ್ತು. ಸಾರ್ವಜನಿಕ ಆಸ್ತಿಪಾಸ್ತಿ ನಷ್ಟ ಆಗುವುದನ್ನು ನೋಡಿಕೊಂಡು ಸುಮ್ಮನೆ ಕೂರಬೇಕು ಅಂದರೆ ಆಗಲ್ಲ. ಮಾಲ್ಗಳ ಮುಂದೆ ಹೋಗಿ ಗಲಾಟೆ ಮಾಡಿದರೆ ಅವರು ರಕ್ಷಣೆ ನೀಡಿ ಎಂದು ಕೇಳುತ್ತಾರೆ, ಅದಕ್ಕೆ ಪೊಲೀಸರು ಕ್ರಮ ಕೈಗೊಂಡಿದ್ದಾರೆ ಎಂದು ಹೇಳಿದರು. ಇದನ್ನೂ ಓದಿ: ಯತ್ನಾಳ್ ವಿರುದ್ಧ ಹೈಕಮಾಂಡ್ಗೆ ದೂರು – ಬಿಜೆಪಿ ಸಭೆಯ ನಿರ್ಣಯಗಳೇನು?
ಕನ್ನಡ (Kannada) ರಕ್ಷಣೆ ವಿಚಾರದಲ್ಲಿ ಕನ್ನಡದ ಪರವಾಗಿ ಸರ್ಕಾರ ನಿಂತಿದೆ. ಕನ್ನಡದಲ್ಲಿ ಆಡಳಿತ ತೀರ್ಮಾನ ಮಾಡಿದ್ದೇವೆ, ಅನುಷ್ಠಾನ ಮಾಡುತ್ತಿದ್ದೇವೆ. ಕನ್ನಡ ನಾಮಫಲಕ ಹಾಕುವ ಬಗ್ಗೆ ಟ್ರೇಡ್ ಲೈಸೆನ್ಸ್ ಕೊಡುವಾಗಲೂ ಸರ್ಕಾರ ಸೂಚನೆ ಕೊಡುತ್ತಿದೆ. ಈ ನಡುವೆ ಕರವೇ ಕನ್ನಡ ನಾಮಫಲಕ ಹಾಕಬೇಕು ಎಂದು ಒತ್ತಾಯಪೂರ್ವಕವಾಗಿ ಕಾನೂನು ಕೈಗೆತ್ತಿಕೊಂಡಿದ್ದಾರೆ. ಇದು ಅವಶ್ಯಕತೆ ಇರಲಿಲ್ಲ. ಹಾಗಾಗಿ ಪೊಲೀಸರು ಕ್ರಮ ಕೈಗೊಂಡಿದ್ದಾರೆ ಎಂದು ಕರವೇ ಕಾರ್ಯಕರ್ತರ ಬಂಧನವನ್ನು ಸಮರ್ಥನೆ ಮಾಡಿಕೊಂಡರು. ಇದನ್ನೂ ಓದಿ: ಚುನಾವಣಾ ರಣತಂತ್ರದ ಮಾರ್ಗಸೂಚಿ ಬಗ್ಗೆ ಚರ್ಚೆಯಾಗಿದೆ: ಸಿ.ಟಿ.ರವಿ