ಹಾಸನ: ಮನೆಯಲ್ಲೇ ನೇಣು ಬಿಗಿದ ಸ್ಥಿತಿಯಲ್ಲಿ ಗೃಹಿಣಿಯೊಬ್ಬಳ ಶವ ಪತ್ತೆಯಾದ ಘಟನೆ ಹಾಸನ ಜಿಲ್ಲೆಯ ದೊಡ್ಡ ಮಂಡಿಗನಹಳ್ಳಿ ಗ್ರಾಮದಲ್ಲಿ ನಡೆದಿದೆ.
ತೇಜಸ್ವಿನಿ(28) ಮೃತ ಮಹಿಳೆ. ನಗರದ ದೊಡ್ಡ ಮಂಡಿಗನಹಳ್ಳಿ ಗ್ರಾಮದಲ್ಲಿ ತೇಜಸ್ವಿನಿ ಎಂಬ ಗೃಹಿಣಿಯ ಶವ ನಿನ್ನೆ ಮನೆಯಲ್ಲೇ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿತ್ತು. ಇದೀಗ ಈಕೆಯ ಪತಿ ಮಧು ಮತ್ತು ಮನೆಯವರ ವಿರುದ್ಧ ಕೊಲೆ ಆರೋಪ ಕೇಳಿ ಬಂದಿದೆ.
ಕ್ರಿಕೆಟ್ ಬೆಟ್ಟಿಂಗ್ಗೆ ದಾಸನಾಗಿದ್ದ ಗಂಡ ಮಧು ಲಕ್ಷಾಂತರ ಹಣ ಕಳೆದುಕೊಂಡಿದ್ದ. ಗಂಡನ ಬೆಟ್ಟಿಂಗ್ ಚಟ ಪ್ರಶ್ನೆ ಮಾಡಿದ್ದಕ್ಕೆ ಹಲ್ಲೆ ಮಾಡಿ ಕೊಂದು, ನೇಣು ಹಾಕಿದ್ದಾನೆ ಎಂದು ಮೃತ ತೇಜಸ್ವಿನಿ ಕುಟುಂಬದ ಸದಸ್ಯರು ಆರೋಪ ಮಾಡಿದ್ದಾರೆ.
ಈ ಬಗ್ಗೆ ಮಾಹಿತಿ ನೀಡಿದ ಹಾಸನ ಎಸ್ಪಿ ಹರಿರಾಮ್ ಶಂಕರ್ ಅವರು, ದೊಡ್ಡಮಂಡಿಗನಹಳ್ಳಿಯ ತೇಜಸ್ವಿನಿ ಅವರ ದೇಹ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದೆ. ಮೃತಳ ತಾಯಿ ಬೆಟ್ಟಿಂಗ್ನಿಂದ ಹಣ ಕಳೆದುಕೊಂಡ ಗಂಡನೇ ಕೊಲೆ ಮಾಡಿದ್ದಾನೆ. ಬೆಂಗಳೂರಿನಲ್ಲಿ ಕೆಲಸ ಮಾಡಿಕೊಂಡಿದ್ದ ಮಧು, ದುಡಿದ ಹಣವನ್ನು ಅಲ್ಲೇ ಕಳೆದುಕೊಂಡಿದ್ದಾರೆ. ಈ ಹಿನ್ನೆಲೆಯಲ್ಲಿ ಜಗಳ ಆಗಿ ಕೊಲೆ ಆಗಿದೆ ಎಂದು ಮೃತಳ ಮನೆಯವರು ಆರೋಪಿಸಿದ್ದಾರೆ. ಇದನ್ನೂ ಓದಿ: ಸಮಯ ಸಂದರ್ಭ ಬಂದಾಗ ಏನು ಬೇಕಾದರೂ ಆಗಬಹುದು ಉ.ಕ ಪ್ರತ್ಯೇಕ ರಾಜ್ಯ ಕೂಗಿಗೆ ದನಿಗೂಡಿಸಿದ ಬಿಸಿ.ಪಾಟೀಲ್
ತೇಜಸ್ವಿನಿ ಮನೆಯವರ ಆರೋಪಗಳನ್ನು ಅಲ್ಲಗಳೆದಿರುವ ಗಂಡನ ಮನೆಯವರು, ತೇಜಸ್ವಿನಿ ಖಾಸಗಿ ಕಂಪೆನಿಯಲ್ಲಿ ಕೆಲಸ ಮಾಡಿಕೊಂಡಿದ್ದಳು. ಆದರೆ ಗಂಡ ಕೆಲಸ ಬಿಡಿಸಿದ್ದ. ಈ ಹಿನ್ನೆಲೆಯಲ್ಲಿ ಆತ್ಮಹತ್ಯೆ ಮಾಡಿಕೊಂಡಿರಬಹುದು ಎಂದು ಹೇಳುತ್ತಿದ್ದಾರೆ. ಈ ಎಲ್ಲ ಆರೋಪಕ್ಕೆ ಪೋಸ್ಟ್ಮಾರ್ಟಂ ವರದಿ ಬಂದ ನಂತರ ಉತ್ತರ ಸಿಗಲಿದೆ ಎಂದು ಎಸ್.ಪಿ ಹರಿರಾಮ್ ಶಂಕರ್ ತಿಳಿಸಿದ್ದಾರೆ. ಇದನ್ನೂ ಓದಿ: ಅಬ್ಬರದ ಮಳೆ – ಮನೆಯ ಮೇಲೆ ಮರ ಬಿದ್ದು 6 ಜನರಿಗೆ ಗಾಯ