ಬೆಂಗಳೂರು: ಶಾಸಕ ಕೆ.ಎಸ್ ಪುಟ್ಟಣ್ಣಯ್ಯ ಕರ್ನಾಟಕ ರೈತ ಸಂಘ ಕಂಡಂತಹ ಧೀಮಂತ ಹೋರಾಟಗಾರ. ರಾಜಕಾರಣಿಯಾಗಿದ್ದರೂ ಸರಳ ಜೀವಿಯಾಗಿ ಬದುಕನ್ನು ಸವೆಸಿದವರು. ಸ್ವತಃ ಕಬಡ್ಡಿ ಆಟಗಾರರಾಗಿದ್ದ ಪುಟ್ಟಣ್ಣಯ್ಯ ಅದನ್ನೇ ನೋಡುತ್ತಾ ಕೊನೆಯುಸಿರೆಳೆದಿದ್ದಾರೆ. ಅವರ ಬದುಕಿನ ಪುಟಗಳು ಇಲ್ಲಿದೆ.
ರೈತ ಚಳವಳಿಯ ಕೊಂಡಿಯೊಂದು ಅಸ್ತಂಗತವಾಗಿದೆ. ಶಾಸಕನಾಗಿದ್ದರೂ ಸರಳಜೀವಿಯಾಗಿಯೇ ಬದುಕ ಸವೆಸಿದ ಮಾಣಿಕ್ಯವೊಂದು ನಮ್ಮನ್ನಗಲಿದೆ. ರೈತ ನಾಯಕನೆಂದೇ ಚಿರಪರಿಚಿತವಾಗಿದ್ದ ಪುಟ್ಟಣ್ಣಯ್ಯ, ಮಂಡ್ಯದ ಕ್ಯಾತನಹಳ್ಳಿಯಲ್ಲಿ ಜನಿಸಿದ್ರು. ಹುಟ್ಟೂರಿನಲ್ಲಿಯೇ ಎಸ್.ಎಸ್.ಎಲ್.ಸಿ. ವಿದ್ಯಾಭ್ಯಾಸ ಪಡೆದ ಬಳಿಕ ಮೈಸೂರಿನಲ್ಲಿರುವ ಸೆಂಟ್ ಫಿಲೋಮಿನಾ ಶಾಲೆಯಲ್ಲಿ ಪದವಿ ಪೂರ್ವ ಶಿಕ್ಷಣ, ಮೈಸೂರಿನ ಡಿ. ಬನುಮಯ್ಯ ಕಾಲೇಜಿನಲ್ಲಿ ಬಿ.ಎ. ಪದವಿ ಪಡೆದರು.
ರೈತರ ಬಗ್ಗೆ ಕಾಳಜಿಯಳ್ಳವರಾಗಿದ್ದ ಪುಟ್ಟಣ್ಣಯ್ಯ, ಎಸ್.ಡಿ. ಜಯರಾಂರ ಮಾರ್ಗದರ್ಶನದಲ್ಲಿ 1983ರಲ್ಲಿ ಕರ್ನಾಟಕ ರಾಜ್ಯ ರೈತ ಸಂಘದ ಸಾಮಾನ್ಯ ಕಾರ್ಯಕರ್ತನಾಗಿ ಪಾದಾರ್ಪಣೆ ಮಾಡಿದರು. ಬಳಿಕ ಪಾಂಡವಪುರ ತಾಲೂಕು ರೈತ ಸಂಘದ ಅಧ್ಯಕ್ಷರಾಗಿ, ಮಂಡ್ಯ ಜಿಲ್ಲಾ ರೈತ ಸಂಘದ ಅಧ್ಯಕ್ಷರಾಗಿ ಹಾಗೂ ಮೈಸೂರು ವಿಭಾಗ ಮಟ್ಟದ ಸಂಘಟನಾ ಕಾರ್ಯದರ್ಶಿಗಳಾಗಿ ಆಯ್ಕೆಯಾದ್ರು. ನಂತರ 1999 ರಿಂದ 2012ರವರೆಗೆ ಕರ್ನಾಟಕ ರಾಜ್ಯ ರೈತ ಸಂಘದ ಅಧ್ಯಕ್ಷರಾಗಿ ದುಡಿದರು. ಬಳಿಕ `ಸರ್ವೋದಯ ಕರ್ನಾಟಕ ಪಕ್ಷ’ದಿಂದ ಪಾಂಡವಪುರ ಶಾಸಕರಾಗಿ ಆಯ್ಕೆಯಾದರು.
ಪ್ರೊಫೆಸರ್ ನಂಜುಂಡಸ್ವಾಮಿಯ ಚಿಂತನೆಗಳು ಕೆ.ಎಸ್. ಪುಟ್ಟಣ್ಣಯ್ಯರನ್ನು ಆಕರ್ಷಿಸಿತ್ತು. ಇನ್ನು ಏಕಾಏಕಿ ಸಾಲಗಾರರ ಮನೆಗಳನ್ನು ಜಪ್ತಿಮಾಡುವ ಪ್ರಕ್ರಿಯೆಗೆ ನಿರ್ಬಂಧ, ಕಬ್ಬಿಗೆ ಬೆಂಬಲ ಬೆಲೆ, ಕಾವೇರಿ ಹೋರಾಟದಲ್ಲೂ ಪುಟ್ಟಣ್ಣಯ್ಯ ಮುಂಚೂಣಿಯಲ್ಲಿ ಗುರುತಿಸಿಕೊಂಡಿದ್ದರು. ಪುಟ್ಟಣ್ಣಯ್ಯ ರೈತ ನಾಯಕ ಮಾತ್ರವಲ್ಲದೇ ಉತ್ತಮ ಕಬಡ್ಡಿ, ಕುಸ್ತಿಪಟುವಾಗಿದ್ದರು. ಇನ್ನು ಶಾಸಕರಾಗಿ ಎಲ್ಲರೂ ಆಡಂಬರದ ಓಡಾಟ ಇಟ್ಟುಕೊಂಡಿದ್ದರೆ, ಪುಟ್ಟಣ್ಣಯ್ಯ ಮಾತ್ರ ರಾಜ್ಯದೆಲ್ಲೆಡೆ ಮಾತ್ರವಲ್ಲದೇ ವಿಧಾನಸಭೆಯೊಳಗೆ ಹಸಿರು ಶಾಲು ಧರಿಸಿಕೊಂಡೇ ಓಡಾಡುತ್ತಿದ್ದರು. ಕಾರ್ಯಕರ್ತರು, ರೈತರ ಮನೆಗೆ ಭೇಟಿ ನೀಡಿದರೆ ಸಾಮಾನ್ಯರಂತೆ ಮಜ್ಜಿಗೆ ಕುಡಿದು ತೆರಳುತ್ತಿದ್ದ ಆದರ್ಶ ರಾಜಕಾರಣಿಯಾಗಿದ್ದರು. ಇಂತಹ ರೈತ ನಾಯಕ ಇಹಲೋಕ ತ್ಯಜಿಸಿದ್ದು, ಅನ್ನದಾತರೇ ಒಂಟಿಯಾದಂತಾಗಿದೆ.
https://www.youtube.com/watch?v=TuaPJAz2Uyw&feature=youtu.be
https://www.youtube.com/watch?v=9Mk5JbCzl0I&feature=youtu.be