ಉಡುಪಿ: 3 ದಿನಗಳಿಂದ ಸುರಿದ ಮಳೆಗೆ ಉಡುಪಿಯಲ್ಲಿ ಜನಜೀವನ ಅಸ್ತವ್ಯಸ್ತಗೊಂಡಿದೆ. ತಗ್ಗು ಪ್ರದೇಶಗಳಲ್ಲಿ ನೆರೆ ನೀರು ನಿಂತಿದ್ದು ವಾರಾಂತ್ಯಕ್ಕೆ ಜನಜೀವನ ಇನ್ನೂ ಸುಧಾರಣೆಯಾಗಿಲ್ಲ. ನೆರೆ ನೀರಿನ ಸಮಸ್ಯೆ ಮೃತ ಶರೀರದ ಸಾಗಾಟಕ್ಕೂ ಸಮಸ್ಯೆ ತಂದೊಡ್ಡಿದೆ. ಹೀಗಾಗಿ ಕುಟುಂಬವೊಂದು ಪಾರ್ಥಿವ ಶರೀರದ ದಹನಕ್ಕೂ ಪರದಾಟ ನಡೆಸಿದೆ.
ಸೇಸಿ ಪೂಜಾರ್ತಿ ಎಂಬವರು ಸಾವನ್ನಪ್ಪಿದ್ದರು. ಸೇಸಿ ಪೂಜಾರ್ತಿ ಕಂಬಳಕಟ್ಟೆ ನಿವಾಸಿ. ಆದರೆ ನೆರೆಯ ಕಾರಣದಿಂದಾಗಿ ಕಟಪಾಡಿ ಪಳ್ಳಿಗುಡ್ಡೆ ರುದ್ರ ಭೂಮಿಗೆ ಮೃತದೇಹ ತೆಗೆದುಕೊಂಡು ಹೋಗಲು ಪರದಾಟ ನಡೆಸಬೇಕಾಯಿತು. ಕೊನೆಗೆ ಟ್ಯೂಬ್, ಟಯರ್ ಗಳನ್ನು ಕಟ್ಟಿ ಸೇಸಿಯವರ ಮೃತದೇಹ ಸಾಗಿಸಲಾಯ್ತು. ನಂತರ ಅಂತ್ಯ ಸಂಸ್ಕಾರ ನಡೆಸಲಾಯ್ತು.
ಶನಿವಾರದಿಂದ ಸುರಿಯುತ್ತಿರುವ ಭಾರೀ ಮಳೆಗೆ ಇಂತಹ ಅನೇಕ ಅವಾಂತರಗಳ ಸರಮಾಲೆಯೇ ಜಿಲ್ಲೆಯಾದ್ಯಂತ ನಡೆಯುತ್ತಿವೆ. ನೆರೆಯಿಂದ ಜಲಾವೃತಗೊಂಡ ಮನೆಯಿಂದ ಶನಿವಾರ ಗರ್ಭಿಣಿಯೋರ್ವರನ್ನು ಅಗ್ನಿಶಾಮಕ ದಳದವರು ರಕ್ಷಿಸಿ ಬೇರೆಡೆ ಸ್ಥಳಾಂತರಿಸಲಾಗಿತ್ತು.