– ಎಳನೀರು, ತಂಪು ಪಾನೀಯಗಳ ಮೊರೆ ಹೋದ ಜನ..!
ಬೆಂಗಳೂರು: ಕರ್ನಾಟಕದಲ್ಲಿ (Karnataka) ಬಿಸಿಲ ಬೇಗೆ ತೀವ್ರವಾಗಿದೆ, ಉತ್ತರ ಒಳನಾಡು ಮತ್ತು ಕರಾವಳಿಯ ಹಲವು ಜಿಲ್ಲೆಗಳಲ್ಲಿ ತಾಪಮಾನ 44 ಡಿಗ್ರಿ ಸೆಲ್ಸಿಯಸ್ವರೆಗೆ ಏರಿಕೆಯಾಗುವ ಸಾಧ್ಯತೆಯಿದೆ. ರಾಯಚೂರು, ಕೊಪ್ಪಳ, ಬೆಳಗಾವಿ, ಬೀದರ್ ಮತ್ತು ವಿಜಯಪುರ ಸೇರಿದಂತೆ ಹಲವು ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ ಘೋಷಿಸಲಾಗಿದೆ.
ಬಿಸಲ ಬೇಗೆ ತಾಳಲಾಗದೇ ಜನರು ತಂಪುಪಾನೀಯಗಳ ಮೊರೆ ಹೋಗ್ತಿದ್ದಾರೆ. ಮತ್ತೊಂದು ಕಡೆ ಕೆಆರ್ಎಸ್ನಲ್ಲಿ ನೀರು (KRS Water) ಆತಂಕಕಾರಿ ಮಟ್ಟಕ್ಕೆ ತಲುಪಿದೆ. ಜೂನ್ನಲ್ಲಿ ಸರಿಯಾಗಿ ಮಳೆ ಆಗದಿದ್ರೆ ಕುಡಿಯುವ ನೀರಿಗೂ ಹಾಹಾಕಾರ ಎದುರಾಗಲಿದೆ.

ಅಯ್ಯೋ ರಾಮ ಏನ್ ಬಿಸಿಲು ಗುರು ಇದು, ಹೊರೆಗೆ ಹೋಗೋದಕ್ಕೆ ಆಗ್ತಿಲ್ಲ, ನೆತ್ತಿ ಸುಟ್ಟು ಹೋಗ್ತಿದೆ. ಅಷ್ಟೇ ಅಲ್ಲ ಬಿಸಿ ಗಾಳಿ ಬೇರೆ, ಯಾವ ವರ್ಷನೂ ಸೂರ್ಯ ಈ ಮಟ್ಟಕ್ಕೆ ಸುಡ್ತಿರಿಲಿಲ್ಲ ಅನ್ನೋ ಮಾತುಗಳು ಈಗ ಸಾಮಾನ್ಯವಾಗಿ ಬಿಟ್ಟಿದೆ. ಜನ್ರೂ ಕೂಡ ಬಿಸಿಲಿನಿಂದ ತಪ್ಪಿಸಿಕೊಳ್ಳೋಕೆ ಎಳನೀರು, ಕಲ್ಲಂಗಡಿ, ಮಜ್ಜಿಗೆ ಸೇರಿದಂತೆ ತಂಪು ಪಾನೀಯಗಳ ಮೊರೆ ಹೋಗಿದ್ದಾರೆ.
ಹೌದು. ಹವಾಮಾನ ಇಲಾಖೆ ರಾಜ್ಯದಲ್ಲಿ ಹೀಟ್ ವೇವ್ ಅಲರ್ಟ್ ನೀಡಿದೆ. ಮುಂದಿನ ಐದು ದಿನಗಳಲ್ಲಿ ಮೂರು ದಿನ ರಾಜ್ಯದ ಹಲವೆಡೆ ವಾಡಿಕೆಗಿಂತ ಮೂರು ಡಿಗ್ರಿ ಉಷ್ಣಾಂಶ ಹೆಚ್ಚಾಗಲಿದ್ದು, ಬಿಸಿಗಾಳಿ ಎಚ್ಚರಿಕೆಯನ್ನ ಹವಾಮಾನ ಇಲಾಖೆ ನೀಡಿದೆ. ಉತ್ತರ ಒಳನಾಡು ಹಾಗೂ ಕರಾವಳಿ ಭಾಗದ ಜಿಲ್ಲೆಗಳಲ್ಲಿ ಹೀಟ್ ವೇವ್ ಉಂಟಾಗಲಿದೆ. ಇದ್ರಿಂದಾಗ ಜನರು ಮತ್ತಷ್ಟು ಕಂಗೆಟ್ಟು ಹೋಗಿದ್ದಾರೆ. ಈ ಬಿಸಿಲನ್ನೇ ತಡೆಯೋಕೆ ಆಗ್ತಿಲ್ಲ. ಇನ್ನು ಹೆಚ್ಚಿನ ಬಿಸಿಲು ಅಂದ್ರೆ ಹೇಗಪ್ಪಾ ತಡೆದುಕೊಳ್ಳೋದು ಅಂತ ಆತಂಕಕ್ಕೆ ಒಳಗಾಗಿದ್ದಾರೆ.

ಮಕ್ಕಳು, ವೃದ್ಧರಲ್ಲಿ ನಿರ್ಜಲೀಕರಣ ಸಮಸ್ಯೆ..!
ಬೆಂಗಳೂರಲ್ಲೇ ಈ ಪಾಟಿ ಬಿಲು ಅಂದ್ರೆ.. ಇನ್ನು ಜಿಲ್ಲೆಗಳ ಸ್ಥಿತಿ ಹೇಗಿರಬೇಡ ಹೇಳಿ. ಇಂದು ಮತ್ತು ನಾಳೆ ಬೀದರ್, ಕಲಬುರಗಿ, ವಿಜಯಪುರ, ಬಾಗಲಕೋಟೆ, ಉಡುಪಿ, ದಕ್ಷಿಣ ಕನ್ನಡ ಹಾಗೂ ಉತ್ತರ ಕನ್ನಡ ಜಿಲ್ಲೆಗಳಲ್ಲಿ ಉಷ್ಣ ಅಲೆ ಎಚ್ಚರಿಕೆಯನ್ನ ಸಹ ನೀಡಲಾಗಿದೆ. ಭಾನುವಾರ ಕರಾವಳಿ ಭಾಗದ ಜಿಲ್ಲೆಗಳಲ್ಲಿ ಬಿಸಿಗಾಳಿಯ ಪ್ರಮಾಣ ಹೆಚ್ಚಾಗಲಿದ್ದು, 11 ರಿಂದ ಸಂಜೆ 4 ರ ವರಗೆ ಬಿಸಿಲಿನ ತಾಪ ಹೆಚ್ಚಾಗಿ ಜನರಿಗೆ ಹಿಟ್ ಶಾಕ್ ನೀಡಲಿದೆ. ಮನೆಯಿಂದ ಹೊರ ಬರುವವರು ಕೊಡೆ, ಟೋಪಿಯನ್ನ ಕ್ಯಾರಿ ಮಾಡಿದ್ರೆ ಒಳ್ಳೆಯದು.

ಯಾವ ಜಿಲ್ಲೆಯ ತಾಪಮಾನ ಎಷ್ಟಿದೆ?
ಕಲಬುರಗಿ – 44 ಡಿಗ್ರಿ ಸೆಲ್ಸಿಯಸ್ ಉಷ್ಣಾಂಶ
ರಾಯಚೂರು – 41 ಡಿಗ್ರಿ ಸೆಲ್ಸಿಯಸ್ ಉಷ್ಣಾಂಶ
ಬೀದರ್ – 41 ಡಿಗ್ರಿ ಸೆಲ್ಸಿಯಸ್ ಉಷ್ಣಾಂಶ
ಕೊಪ್ಪಳ – 40 ಡಿಗ್ರಿ ಸೆಲ್ಸಿಯಸ್ ಉಷ್ಣಾಂಶ
ವಿಜಯಪುರ – 40 ಡಿಗ್ರಿ ಸೆಲ್ಸಿಯಸ್ ಉಷ್ಣಾಂಶ
ಬಳ್ಳಾರಿ – 39 ಡಿಗ್ರಿ ಸೆಲ್ಸಿಯಸ್ ಉಷ್ಣಾಂಶ
ಗದಗ – 39 ಡಿಗ್ರಿ ಸೆಲ್ಸಿಯಸ್ ಉಷ್ಣಾಂಶ
ಹಾವೇರಿ – 38 ಡಿಗ್ರಿ ಸೆಲ್ಸಿಯಸ್ ಉಷ್ಣಾಂಶ
ಚಿಕ್ಕಬಳ್ಳಾಪುರ – 38 ಡಿಗ್ರಿ ಸೆಲ್ಸಿಯಸ್ ಉಷ್ಣಾಂಶ
ಚಿತ್ರದುರ್ಗ- 38 ಡಿಗ್ರಿ ಸೆಲ್ಸಿಯಸ್ ಉಷ್ಣಾಂಶ
ಧಾರವಾಡ – 38 ಡಿಗ್ರಿ ಸೆಲ್ಸಿಯಸ್ ಉಷ್ಣಾಂಶ
ಮೈಸೂರು – 37 ಡಿಗ್ರಿ ಸೆಲ್ಸಿಯಸ್ ಉಷ್ಣಾಂಶ
ಕೋಲಾರ – 37 ಡಿಗ್ರಿ ಸೆಲ್ಸಿಯಸ್ ಉಷ್ಣಾಂಶ
ದಾವಣಗೆರೆ – 37 ಡಿಗ್ರಿ ಸೆಲ್ಸಿಯಸ್ ಉಷ್ಣಾಂಶ
ಶಿವಮೊಗ್ಗ – 37 ಡಿಗ್ರಿ ಸೆಲ್ಸಿಯಸ್ ಉಷ್ಣಾಂಶ
ಬೆಳಗಾವಿ – 37 ಡಿಗ್ರಿ ಸೆಲ್ಸಿಯಸ್ ಉಷ್ಣಾಂಶ
ಮಂಡ್ಯ – 36 ಡಿಗ್ರಿ ಸೆಲ್ಸಿಯಸ್ ಉಷ್ಣಾಂಶ
ಉತ್ತರ ಕನ್ನಡ – 36 ಡಿಗ್ರಿ ಸೆಲ್ಸಿಯಸ್ ಉಷ್ಣಾಂಶ
ದಕ್ಷಿಣ ಕನ್ನಡ – 35 ಡಿಗ್ರಿ ಸೆಲ್ಸಿಯಸ್ ಉಷ್ಣಾಂಶ ದಾಖಲಾಗಿದೆ.
ಇನ್ನು ಭಾಸ್ಕರನ ಪ್ರತಾಪಕ್ಕೆ ಉತ್ತರ ಕರ್ನಾಟಕ ಅಕ್ಷರಶಃ ತತ್ತರಿ ಹೋಗಿದೆ. ಮಧ್ಯಾಹ್ನ ವೇಳೆ ಮನೆಯಿಂದ ಹೊರಬರಲು ಸಾರ್ವಜನಿಕರಿಗೆ ಆತಂಕ ಶುರುವಾಗಿದೆ. ಸಾಕಷ್ಟು ಜನರು ಜ್ಯೂಸ್, ಎಳನೀರಿನ ಮೊರೆ ಹೋಗ್ತಿದ್ದಾರೆ. ಈ ನಡುವೆ ಬಿಸಲ ಬೇಗೆಯಿಂದಾಗಿ ಮಕ್ಕಳು ಹಾಗೂ ವಯೋವೃದ್ಧರಲ್ಲಿ ನಿರ್ಜಲೀಕರಣ ಸಮಸ್ಯೆ ಹೆಚ್ಚಾಗುತ್ತಿದ್ದು ಆಸ್ಪತ್ರೆಗೆ ಸೇರುವಂತಾಗಿದೆ.
ಬೇಸಿಗೆ ಆರಂಭದಲ್ಲೇ ಬೆಂಗಳೂರಿಗೆ ಜಲಕ್ಷಾಮನಾ?
ಮಂಡ್ಯ ಜಿಲ್ಲೆಯ ಶ್ರೀರಂಗಪಟ್ಟಣ ತಾಲೂಕಿನಲ್ಲಿರುವ ಕನ್ನಂಬಾಡಿ ಕಟ್ಟೆ ಜಲಾಶಯದಲ್ಲಿ ನೀರಿನ ಮಟ್ಟ ಆತಂಕಕಾರಿ ಮಟ್ಟಕ್ಕೆ ಕುಸಿದಿದೆ. ಜಲಾಶಯದ ಇಂದಿನ ನೀರಿನ ಮಟ್ಟ 100 ಅಡಿಗಿಂತ ಕೆಳಕ್ಕೆ ಅಂದರೆ 99 ಅಡಿಗೆ ಕುಸಿದಿದ್ದು, ಮಳೆಗಾಲ ವಿಳಂಬವಾದರೆ ಕುಡಿಯುವ ನೀರಿಗಾಗಿ ದೊಡ್ಡ ಮಟ್ಟದ ಹಾಹಾಕಾರ ಎದುರಾಗುವ ಭೀತಿ ಆವರಿಸಿದೆ. ಬೆಂಗಳೂರಿನ ಹಲವೆಡೆ ಈಗಾಗಲೇ ನೀರಿನ ಸಮಸ್ಯೆ ಶುರುವಾಗಿದ್ದು, ಕೆಆರ್ಎಸ್ ಜಲಾಶಯದಲ್ಲಿ ನೀರಿನ ಮಟ್ಟ ಇಳಿಕೆಯಾಗಿರುವುದು ಇನ್ನಷ್ಟು ಸಮಸ್ಯೆಗೆ ಕಾರಣವಾಗಲಿದೆ.
ಮತ್ತೊಂದೆಡೆ ದಾವಣಗೆರೆ ತಾಲ್ಲೂಕಿನಲ್ಲಿ ಗುಡಾಳ್ ಗ್ರಾಮದಲ್ಲಿ ನೀರಿಗಾಗಿ ಹಾಹಾಕಾರ ಶುರುವಾಗಿದೆ. ಕೂಲಿಗೆ ಹೋಗೋದು ಬಿಟ್ಟು ನೀರು ಹಿಡಿಯುವುದೇ ಕೆಲಸವಾಗಿ ಬಿಟ್ಟಿದೆ. 1,500 ಕ್ಕೂ ಹೆಚ್ಚು ಮನೆಗಳಿರುವ ಗ್ರಾಮಕ್ಕೆ ಒಂದೇ ಬೋರ್ ವೆಲ್ ನಿಂದ ನೀರು ಪೂರೈಕೆ ಮಾಡಲಾಗುತ್ತಿದ್ದು ನೀರಿಗಾಗಿ ಇಡೀ ದಿನ ಕಾಯುವ ಪರಿಸ್ಥಿತಿ ಗ್ರಾಮಸ್ಥರದ್ದು.

