ಹಾಸನ : ಯಾವ ಮಂತ್ರಿಗಳನ್ನು ಮನೆಗೆ ಬನ್ನಿ ಎಂದು ಕರೆಯಲ್ಲ. ಬಂದರೆ ಚೆನ್ನಾಗಿ ನೋಡಿಕೊಳ್ಳುತ್ತೇವೆ. ಬರದೆ ಇದ್ದರೆ ನಮ್ಮಪ್ಪನ ಮನೆ ಗಂಟು ಏನೂ ಹೋಗಲ್ಲ ಎಂದು ಹೆಚ್ಡಿ.ರೇವಣ್ಣ ಹೇಳಿದ್ದಾರೆ.
ಜೆಡಿಎಸ್ ನಾಯಕರ ಮನೆಗೆ ಯಾವ ನಾಯಕರು ಹೋಗಕೂಡದು ಎಂಬ ಶಾಸಕ ಪ್ರೀತಂಗೌಡ ಹೇಳಿಕೆಗೆ ಹೆಚ್ಡಿ.ರೇವಣ್ಣ ತಿರುಗೇಟು ನೀಡಿದ್ದಾರೆ. ಹಾಸನದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಸಿಎಂ ಒಂದು ಪಕ್ಷಕ್ಕೆ ಸೀಮಿತ ಆದವರಲ್ಲ. ಅವರು ಏನೆಂದು ಪ್ರಮಾಣವಚನ ಸ್ವೀಕಾರ ಮಾಡಿರ್ತಾರೆ. ದಯವಿಟ್ಟು ಯಾವ ಸಚಿವರು ವಿಪಕ್ಷ ನಾಯಕರ ಮನೆಗೆ ಹೋಗಬೇಡಿ. ನಾವು ನಮ್ಮ ಹಣ ಖರ್ಚು ಮಾಡಿ ಅವರಿಗೆ ಏಕೆ ಬೈಯ್ಯೋ ಹಾಗೆ ಮಾಡ್ಬೇಕು. ಬಂದ್ರೆ ಒಂದು ಊಟ ಹಾಕ್ತೀವಿ, ಬರದಿದ್ರೆ ಅದೆ ದುಡ್ಡು ಉಳಿತು ಬಿಡಿ ಅಂತೀವಿ ಎಂದು ಹೇಳುವ ಮೂಲಕ ಹೆಸರು ಹೇಳದೇ ಪ್ರೀತಂಗೌಡಗೆ ರೇವಣ್ಣ ತಿರುಗೇಟು ನೀಡಿದ್ದಾರೆ. ಇದನ್ನೂ ಓದಿ: ನೆರೆ ಪೀಡಿತ ಸಂತ್ರಸ್ತರಿಗೆ ತೊಂದರೆಯಾಗದಂತೆ ಅಧಿಕಾರಿಗಳು ಕಾರ್ಯ ನಿರ್ವಹಿಸಿ: ಉಮೇಶ್ ಕತ್ತಿ
ಇದೇ ವೇಳೆ ಚುನಾವಣೆ ಬಗ್ಗೆ ಮಾತನಾಡಿದ ಅವರು, ರಾಜ್ಯದಲ್ಲಿ ಜಿ.ಪಂ, ತಾ.ಪಂ. ಚುನಾವಣೆ ನಡೆಯಬೇಕಿದೆ. ಎರಡೂ ರಾಷ್ಟ್ರೀಯ ಪಕ್ಷಗಳಿಗೆ ಚುನಾವಣೆ ಬೇಕಿಲ್ಲ. ಚುನಾವಣೆ ಆಯೋಗ ಇದನ್ನು ಗಮನಿಸಬೇಕು. ಚುನಾಯಿತ ಪ್ರತಿನಿಧಿಗಳ ಆಳ್ವಿಕೆಗೆ ಅವಕಾಶ ನೀಡಬೇಕು ಎಂದು ಒತ್ತಾಯ ಮಾಡಿದ್ದಾರೆ. ಈ ಚುನಾವಣೆ ನಗರದಲ್ಲಿ ನಡೆಯಲ್ಲ. ಬೇಕಿದ್ದರೆ ಮತಗಟ್ಟೆಗಳನ್ನು ಹೆಚ್ಚು ಮಾಡಿ. ಅಧಿಕಾರಿಗಳ ಕೈಗೆ ಅಧಿಕಾರ ಕೊಡಬೇಡಿ. ಯಾವುದೋ ನೆಪ ಮಾಡಿ ಚುನಾವಣೆ ಪಾವಿತ್ರ್ಯತೆ ಹಾಳು ಮಾಡಬೇಡಿ. ಗ್ರಾಮಾಂತರ ಭಾಗದಲ್ಲಿ ಪಾಸಿಟಿವಿಟಿ ರೇಟ್ ಕಡಿಮೆಯಾಗಿದೆ. ಬೆಳಗಾವಿ, ಹುಬ್ಬಳಿ, ಚಿಕ್ಕಬಳ್ಳಾಪುರದಲ್ಲಿ ಚುನಾವಣೆ ಮಾಡುತ್ತೀರ, ಇಲ್ಲಿ ಚುನಾವಣೆ ಮಾಡೋಕೆ ಏನಾಗಿದೆ ಎಂದು ರೇವಣ್ಣ ಪ್ರಶ್ನೆ ಮಾಡಿದ್ದಾರೆ.