ಹಾವೇರಿ: ಪತ್ನಿಯ ಶೀಲ ಶಂಕಿಸಿ ಪತ್ನಿಯ ಮೇಲೆ ಕಲ್ಲು ಎತ್ತಿ ಹಾಕಿದ್ದ ಪಾಪಿ ಪತಿಯನ್ನು ರಾಣೆಬೆನ್ನೂರು ಗ್ರಾಮೀಣ ಠಾಣೆಯ ಪೊಲೀಸರು ಬಂಧಿಸಿದ್ದಾರೆ.
ರಾಣೆಬೆನ್ನೂರು ನಗರದ ಅಡವಿ ಆಂಜನೇಯ ಬಡಾವಣೆಯ ನಿವಾಸಿ ದುರಗಮ್ಮ ಕೊರವರ (55) ಮೃತ ದುರ್ದೈವಿ. ವಿರೂಪಾಕ್ಷಪ್ಪ ಕೊರವರ (58) ಕೊಲೆಗೈದ ಪಾಪಿ ಪತಿ.
ದುರಗಮ್ಮ ಹಾಗೂ ವಿರೂಪಾಕ್ಷಪ್ಪ ದಂಪತಿ ಮಧ್ಯೆ ಫೆಬ್ರುವರಿ 23ರಂದು ಜಗಳವಾಗಿತ್ತು. ಈ ವೇಳೆ ಪಾಪಿ ಪತಿ ದುರಗಮ್ಮ ಅವರ ಮೇಲೆ ಕಲ್ಲು ಎತ್ತಿ ಹಾಕಿ ಕೊಲೆಗೆ ಯತ್ನಿಸಿದ್ದ. ಗಂಭೀರವಾಗಿ ಗಾಯಗೊಂಡಿದ್ದ ದುರುಗಮ್ಮ ಅವರನ್ನು ದಾವಣಗೆರೆ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು.
ದುರಗಮ್ಮ ಅವರ ತಲೆಗೆ ಬಲವಾದ ಪೆಟ್ಟು ಬಿದ್ದಿದ್ದರಿಂದ ಚಿಕಿತ್ಸೆ ಫಲಿಸದೆ ಮಂಗಳವಾರ ಸಾವನ್ನಪ್ಪಿದ್ದಾರೆ. ಈ ಸಂಬಂಧ ದುರಗಮ್ಮ ಸಂಬಂಧಿಕರು ರಾಣೆಬೆನ್ನೂರು ಗ್ರಾಮೀಣ ಪೊಲೀಸ್ ಠಾಣೆಗೆ ದೂರು ನೀಡಿದ್ದರು. ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿರುವ ಪೊಲೀಸರು ಆರೋಪಿ ವಿರೂಪಾಕ್ಷನನ್ನು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.