ಹಾಸನ: ವರ್ಷಕ್ಕೊಮ್ಮೆ ಮಾತ್ರ ದರುಶನ ನೀಡುವ ಹಾಸನ ನಗರದ ಅಧಿದೇವತೆ ಹಾಸನಾಂಬೆ ದರ್ಶನಕ್ಕೆ ಸಾರ್ವಜನಿಕರಿಗೆ ಇಂದು ಕೊನೆಯ ದಿನ. ನಾಳೆ ಮಧ್ಯಾಹ್ನ ಹಾಸನಾಂಬೆ ದೇವಾಲಯದ ಗರ್ಭಗುಡಿ ಬಾಗಿಲನ್ನು ಶಾಸ್ತ್ರೋಕ್ತವಾಗಿ ಮುಚ್ಚಲಿದೆ. ಹೀಗಾಗಿ ಹಾಸನಾಂಬೆ ನೋಡಲು ಇಂದು ಭಕ್ತ ಸಾಗರವೇ ಹರಿದು ಬಂದಿದೆ.
ಇಂದು ಹಾಸನಾಂಬೆ ಸನಿಹದಲ್ಲಿರೋ ಸಿದ್ದೇಶ್ವರ ಸ್ವಾಮಿಯ ಚಂದ್ರ ಮಂಡಲೋತ್ಸವ, ರಥೋತ್ಸವ, ಕೊಂಡ ಹಾಯುವ ಕಾರ್ಯಕ್ರಮ ರಾತ್ರಿ ನೇರವೇರುತ್ತದೆ. ಹೀಗಾಗಿ ಇಂದು ಮಾತ್ರ ಸಾರ್ವಜನಿಕರಿಗೆ ದೇವಿ ದರ್ಶನಕ್ಕೆ ಅವಕಾಶ ಇದ್ದ ಕಾರಣ ಅಂತಿಮ ದಿನ ದೇವಿ ದರ್ಶನ ಪಡೆದ ಭಕ್ತರು ಪುನೀತ ಭಾವ ವ್ಯಕ್ತ ಪಡಿಸಿದರು. ಇದನ್ನೂ ಓದಿ: ಹಾಸನನಾಂಬೆ ದರ್ಶನಕ್ಕೂ ತಟ್ಟಿದ ಪುನೀತ್ ಸಾವಿನ ನೋವು
ಅಕ್ಟೋಬರ್ 28 ರಂದು ಹಾಸನಾಂಬೆ ದೇವಾಲಯ ಗರ್ಭಗುಡಿ ಬಾಗಿಲನ್ನು ತೆರೆಯಲಾಗಿತ್ತು. ಅಂದಿನಿಂದ ನವೆಂಬರ್ 5ರ ವರೆಗೆ ಹಾಸನಾಂಬೆ ದರ್ಶನಕ್ಕೆ ಸಾರ್ವಜನಿಕರಿಗೆ ಜಿಲ್ಲಾಡಳಿತ ಅವಕಾಶ ಮಾಡಿತ್ತು. ಇಂದೂ ಕೂಡ ಈ ವರ್ಷದ ಕಡೆ ದಿನ ದೇವಿ ದರ್ಶನ ಪಡೆಯಲು ಭಕ್ತರು ಮುಗಿಬಿದ್ದರು. ಹಾಗೆ ಹಾಸನ ಎಸ್ಪಿ ಶ್ರೀನಿವಾಸ್ ಗೌಡ ಪಂಚೆ, ಷಲ್ಯೆ ಧರಿಸಿ ಹಾಸನಾಂಬೆ ಸೇವೆಯಲ್ಲಿ ಭಾಗಿಯಾಗಿದ್ದು ವಿಶೇಷವಾಗಿತ್ತು. ಇದನ್ನೂ ಓದಿ: ನೈಟ್ ಕರ್ಫ್ಯೂ ಆದೇಶ ಹಿಂಪಡೆದ ರಾಜ್ಯ ಸರ್ಕಾರ
ಈ ಬಾರಿ ಹಾಸನಾಂಬೆ ದೇವಾಲಯ ಒಟ್ಟು 9 ದಿನ ಬಾಗಿಲು ತೆರೆಯಲಾಗಿದೆ. ಇದರಲ್ಲಿ 7 ದಿನ ಭಕ್ತರ ದರ್ಶನಕ್ಕೆ ಅವಕಾಶ ನೀಡಲಾಗಿತ್ತು. ನಾಳೆ ಮಧ್ಯಾಹ್ನ 12.30ರ ಸಮಯಕ್ಕೆ ಹಾಸನಾಂಬೆ ಗರ್ಭಗುಡಿ ಬಾಗಿಲನ್ನು ವಿವಿಧ ಪೂಜಾ ಕೈಂಕರ್ಯ ಈಡೇರಿಸಿ ಮುಚ್ಚಲಾಗುವುದು. ಹೀಗಾಗಿ ಅಂತಿಮ ದಿನ ಹಾಸನಾಂಬೆ ದರ್ಶನಕ್ಕೆ ಸಾರ್ವಜನಿಕರಿಗೆ ಅವಕಾಶ ಇರುವುದಿಲ್ಲ.