ಚಿಕ್ಕಬಳ್ಳಾಪುರ: ಪ್ರಪಂಚದ ಪಾರಂಪರಿಕ ತಾಣಗಳಲ್ಲಿ ಒಂದಾದ ಹಂಪಿಯ ಕಲ್ಲಿನ ರಥ ಗುಲಾಬಿಗಳಲ್ಲಿ ಅರಳಿ ನಿಂತಿದ್ದು ಆಕರ್ಷಣೀಯ ಕೇಂದ್ರವಾಗಿದೆ.
ಚಿಕ್ಕಬಳ್ಳಾಪುರ ಸರ್ ಎಂ.ವಿ ಜಿಲ್ಲಾ ಕ್ರೀಡಾಂಗಣದಲ್ಲಿ ಕೃಷಿಮೇಳ 2020ರ ಅಂಗವಾಗಿ ಸಿರಿಧಾನ್ಯ ಮೇಳ ಹಾಗೂ ಫಲಪುಷ್ಪಪ್ರದರ್ಶನ ಆಯೋಜಿಸಲಾಗಿದೆ. ಫಲಪುಷ್ಪ ಪ್ರದರ್ಶನದಲ್ಲಿ ಗುಲಾಬಿ ಹೂಗಳಿಂದ ಹಂಪಿಯ ಕಲ್ಲಿನ ರಥದ ಆಕೃತಿಯನ್ನು ನಿರ್ಮಾಣ ಮಾಡಲಾಗಿದೆ.
ಬಣ್ಣ ಬಣ್ಣದ ತರಹೇವಾರಿ ಗುಲಾಬಿಗಳಿಂದ ತಲೆ ಎತ್ತಿರುವ ಹಂಪಿಯ ಹೂಗಳ ಕಲ್ಲಿನ ರಥಾದಾಕೃತಿ ನೋಡುಗರ ಮನಸೊರೆಗೊಂಡಿದೆ. ಸರಿ ಸುಮಾರು 2 ಲಕ್ಷಕ್ಕೂ ಹೆಚ್ಚು ಗುಲಾಬಿ ಹೂ ಹಾಗೂ ಇತರೆ ಹೂಗಳನ್ನು ಬಳಸಿ ಈ ಆಕೃತಿ ನಿರ್ಮಿಸಲಾಗಿದೆ.
ತೋಟಗಾರಿಕಾ ಇಲಾಖೆ ವತಿಯಿಂದ ಆಯೋಜನೆ ಮಾಡಲಾಗಿರುವ ಫಲಪುಷ್ಪ ಪ್ರದರ್ಶನದಲ್ಲಿ ತರಕಾರಿಗಳಿಂದ ವಿವಿಧ ಆಕೃತಿಗಳ ಕೆತ್ತನೆ, ಬೃಹಾದಾಕಾರದ ಶ್ರೀ ರಂಗನಾಥಸ್ವಾಮಿ ವಿಗ್ರಹ, ಸ್ವಾಮಿ ವಿವೇಕಾನಂದರ ಪ್ರತಿಮೆ ಹಾಗೂ ಸುಭಾಷ್ ಚಂದ್ರಬೋಸ್ ರ ಮರಳಿನಾಕೃತಿ ಎಲ್ಲರ ಗಮನ ಸೆಳೆಯುತ್ತಿವೆ. ಗುಲಾಬಿಗಳ ಹಂಪಿಯ ಕಲ್ಲಿನಾಕೃತಿಗೆ ನೋಡುಗರ ಮನಸೊರೆಗೊಂಡಿದ್ದು, ಸೆಲ್ಫಿ ಕ್ಲಿಕ್ಕಿಸಿಕೊಂಡು ಸಂತಸಪಡುತ್ತಿದ್ದಾರೆ.