ಜೈಪುರ: ಈಚೆಗೆ ನಡೆದ ರಾಜ್ಯಸಭಾ ಚುನಾವಣೆಯಲ್ಲಿ ನಿರ್ದಿಷ್ಟ ಅಭ್ಯರ್ಥಿಗೆ ಮತ ಹಾಕಿದರೆ 25 ಕೋಟಿ ನೀಡುವ ಆಮಿಷವನ್ನು ನನಗೆ ಒಡ್ಡಲಾಗಿತ್ತು ಎಂದು ರಾಜಸ್ಥಾನದ ಸಚಿವ ರಾಜೇಂದ್ರ ಗುಧಾ ಗಂಭೀರ ಆರೋಪ ಮಾಡಿದ್ದಾರೆ.
ರಾಜೇಂದ್ರ ಗುಧಾ ಅವರು ಬಿಎಸ್ಪಿ ತೊರೆದು ಕಾಂಗ್ರೆಸ್ ಸೇರಿದ್ದರು. 2020 ರಲ್ಲಿ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ವಿರುದ್ಧದ ಬಂಡಾಯದ ಸಂದರ್ಭದಲ್ಲಿ ತನಗೆ ಇದೇ ರೀತಿ 60 ಕೋಟಿ ರೂ. ಆಮಿಷ ಬಂದಿತ್ತು ಎಂದು ಹೇಳಿದ್ದರು. ಇದನ್ನೂ ಓದಿ: ಹಪ್ಪಳದ ಪ್ಯಾಕೆಟ್ನಲ್ಲಿ 15 ಲಕ್ಷ ಮೌಲ್ಯದ ಅಮೆರಿಕನ್ ಡಾಲರ್ – ವ್ಯಕ್ತಿ ಬಂಧನ
ಜುಂಜುವಿನ ಖಾಸಗಿ ಶಾಲೆಯೊಂದರಲ್ಲಿ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡುವಾಗ ಸಚಿವ ರಾಜೇಂದ್ರ ಗಂಭೀರ ಆರೋಪ ಮಾಡಿದ್ದಾರೆ. ಆದರೆ ಆಮಿಷವನ್ನು ಒಡ್ಡಿದ ನಾಯಕ ಅಥವಾ ಪಕ್ಷ ಯಾವುದು ಎಂಬ ಬಗ್ಗೆ ಮಾಹಿತಿ ನೀಡಿಲ್ಲ.
ಸದ್ಭಾವನೆ ಕುರಿತು ವಿದ್ಯಾರ್ಥಿ ಕೇಳಿದ ಪ್ರಶ್ನೆಗೆ ಉತ್ತರಿಸುತ್ತಾ ರಾಜೇಂದ್ರ ಗುಧಾ ಅವರು, ರಾಜ್ಯಸಭಾ ಚುನಾವಣೆಯಲ್ಲಿ ನಿರ್ದಿಷ್ಟ ಅಭ್ಯರ್ಥಿಗೆ ಮತ ಹಾಕಲು ನನಗೆ 25 ಕೋಟಿ ಆಮಿಷ ಬಂದಿತ್ತು. ಈ ವಿಚಾರವನ್ನು ನನ್ನ ಪತ್ನಿ ಬಳಿಯೂ ಹೇಳಿದ್ದೆ ಎಂದು ಉತ್ತರಿಸಿದ್ದಾರೆ. ಈ ವೀಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಇದನ್ನೂ ಓದಿ: ಡಾಲರ್ ಎದುರು ರೂಪಾಯಿ ಮೌಲ್ಯ ಕುಸಿದಿಲ್ಲ, ಅದು ಸ್ವಾಭಾವಿಕ: ನಿರ್ಮಲಾ ಸೀತಾರಾಮನ್
ರಾಜಕೀಯ ಬಿಕ್ಕಟ್ಟಿನ ಸಂದರ್ಭದಲ್ಲಿ ನನಗೆ 60 ಕೋಟಿ ರೂ. ಆಫರ್ ಕೂಡ ಇತ್ತು. ನಾನು ನನ್ನ ಕುಟುಂಬದೊಂದಿಗೆ ಈ ಬಗ್ಗೆ ಮಾತನಾಡಿದೆ. ನಮಗೆ ಸದ್ಭಾವನೆ ಬೇಕು, ಹಣವಲ್ಲ ಎಂದು ಕುಟುಂಬದವರು ನನಗೆ ಮನವರಿಕೆ ಮಾಡಿದ್ದರು ಎಂದು ಸ್ಮರಿಸಿದ್ದಾರೆ.
2018ರ ವಿಧಾನಸಭಾ ಚುನಾವಣೆಯಲ್ಲಿ ಬಿಎಸ್ಪಿ ಅಭ್ಯರ್ಥಿಯಾಗಿ ಗೆಲುವು ಸಾಧಿಸಿದ್ದ ಗುಧಾ ಅವರು 2019ರಲ್ಲಿ ಕಾಂಗ್ರೆಸ್ಗೆ ಸೇರಿದರು. 2020ರಲ್ಲಿ ಪೈಲಟ್ ಮತ್ತು ಇತರ 18 ಕಾಂಗ್ರೆಸ್ ಶಾಸಕರು, ನಾಯಕತ್ವದ ವಿರುದ್ಧ ಬಂಡಾಯವೆದ್ದಾಗ ಗುಧಾ ಅವರು ಗೆಹ್ಲೋಟ್ ಬಣದಲ್ಲಿಯೇ ಇದ್ದರು.