ನವದೆಹಲಿ: ಜ್ಞಾನವಾಪಿ ಮಸೀದಿ ಪ್ರಕರಣ (Gyanvapi Mosque case) ಸಂಬಂಧ ಹಿಂದೂಗಳಿಗೆ ಮತ್ತೆ ಜಯ ಸಿಕ್ಕಿದೆ. ಜ್ಞಾನವಾಪಿ ಸಂಕೀರ್ಣದ ‘ವ್ಯಾಸ್ ತೆಹ್ಖಾನಾ’ದಲ್ಲಿ (Vyas Tehkhana) ಪೂಜೆ ಸಲ್ಲಿಸಲು ಹಿಂದೂಗಳಿಗೆ ಅನುಮತಿ ನೀಡಿದ ಆದೇಶವನ್ನು ಪ್ರಶ್ನಿಸಿ ಸಲ್ಲಿಸಿದ್ದ ಅರ್ಜಿಯನ್ನು ಅಲಹಾಬಾದ್ ಹೈಕೋರ್ಟ್ ಇಂದು ವಜಾಗೊಳಿಸಿದೆ.
ವಾರಣಾಸಿ ಜಿಲ್ಲಾ ನ್ಯಾಯಾಧೀಶರು ಇತ್ತೀಚೆಗೆ ಆದೇಶ ನೀಡಿದ್ದ ಪೂಜೆಯನ್ನು ಮುಂದುವರಿಸಲಾಗುವುದು ಎಂದು ಹೈಕೋರ್ಟ್ ಆದೇಶ ನೀಡಿದೆ. ಅಲಹಾಬಾದ್ ಹೈಕೋರ್ಟ್ನಲ್ಲಿ ನ್ಯಾಯಮೂರ್ತಿ ರೋಹಿತ್ ರಂಜನ್ ಅಗರ್ವಾಲ್ ಅವರ ಪೀಠವು ಜ್ಞಾನವಾಪಿ ಮಸೀದಿಯನ್ನು ನಿರ್ವಹಿಸುವ ಸಂಸ್ಥೆಯಾದ ಅಂಜುಮನ್ ಇಂತೇಜಾಮಿಯಾ ಮಸೀದಿ ಸಮಿತಿ ಸಲ್ಲಿಸಿದ ಮೇಲ್ಮನವಿಯನ್ನು ಆಲಿಸಿ ತನ್ನ ತೀರ್ಪನ್ನು ಕಾಯ್ದಿರಿಸಿದೆ. ಇದನ್ನೂ ಓದಿ: ಪೂಜೆಗೆ ಅವಕಾಶ ನೀಡಬೇಡಿ : ಸುಪ್ರೀಂ ಮೊರೆ ಹೋಗಿದ್ದ ಜ್ಞಾನವಾಪಿ ಮಸೀದಿ ಸಮಿತಿ – ಜನವರಿ 31ರ ತಡ ರಾತ್ರಿ ನಡೆದಿದ್ದು ಏನು?
ಇನ್ನು ಕೋರ್ಟ್ ತೀರ್ಪು ಸಂಬಂಧ ಹಿಂದೂ ಪರ ವಕೀಲ ವಿಷ್ಣು ಶಂಕರ್ ಜೈನ್ ಪ್ರತಿಕ್ರಿಯಿಸಿ, ಇಂದು ಅಲಹಾಬಾದ್ ಹೈಕೋರ್ಟ್(Allahabad High Court) ಅಂಜುಮನ್ ಇಂತೇಜಾಮಿಯಾ ಮಸೀದಿ ಸಮಿತಿ ಆದೇಶದ ಮೊದಲ ಮೇಲ್ಮನವಿಯನ್ನು ವಜಾಗೊಳಿಸಿದೆ. ಇದರಲ್ಲಿ ವಾರಣಾಸಿ ಜಿಲ್ಲಾ ನ್ಯಾಯಾಲಯವು ಜನವರಿ 17 ಮತ್ತು 31 ರಂದು ನೀಡಿದ್ದ ಆದೇಶವನ್ನು ಅಲಹಾಬಾದ್ ಹೈಕೋರ್ಟ್ನಲ್ಲಿ ಪ್ರಶ್ನಿಸಲಾಗಿದೆ. ಜ್ಞಾನವಾಪಿ ಕಾಂಪ್ಲೆಕ್ಸ್ನ ‘ವ್ಯಾಸ್ ತೆಹ್ಖಾನಾ’ದಲ್ಲಿ ನಡೆಯುತ್ತಿರುವ ಪೂಜೆ ಮುಂದುವರಿಯುತ್ತದೆ. ಅವರು ಸುಪ್ರೀಂ ಕೋರ್ಟ್ಗೆ (Supreme Court) ಹೋದರೆ, ನಾವು ಸುಪ್ರೀಂ ಕೋರ್ಟ್ನಲ್ಲಿ ನಮ್ಮ ಅಭಿಪ್ರಾಯಗಳನ್ನು ಮಂಡಿಸುತ್ತೇವೆ ಎಂದಿದ್ದಾರೆ.