ಧಾರವಾಡ: ಮಾಜಿ ಸಚಿವ ಜಿ.ಟಿ.ದೇವೇಗೌಡರು ಎಲ್ಲಿಗೆ ಹೋಗುತ್ತಾರೋ ಗೊತ್ತಿಲ್ಲ. ಆದರೆ ಜೆಡಿಎಸ್ ಪಕ್ಷದಲ್ಲಂತೂ ಅವರು ಇರುವುದಿಲ್ಲ ಎಂದು ಮಾಜಿ ಸಭಾಪತಿ ಬಸವರಾಜ ಹೊರಟ್ಟಿ ಹೇಳಿದ್ದಾರೆ.
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಅಂಗೈ ಹುಣ್ಣಿಗೆ ಕನ್ನಡಿ ಯಾಕೆ ಬೇಕು. ಅವರು ಜೆಡಿಎಸ್ನಲ್ಲಿರುವುದಿಲ್ಲ ಎನ್ನುವುದು ಅವರ ಮಾತಿನಲ್ಲೇ ತಿಳಿಯುತ್ತದೆ. ಮೊದಲೇ ಅವರಿಗೆ ಅಸಮಾಧಾನವಿತ್ತು. ಆಗಲೇ ಅವರು ಪಕ್ಷದಲ್ಲಿ ಉಸಿರುಗಟ್ಟುವ ವಾತಾವಾರಣ ಇದೆ ಎಂದಿದ್ದರು. ಅದು ನನಗೂ ಸರಿ ಅನಿಸಿತ್ತು. ಈಗ ಪರಿಸ್ಥಿತಿ ಇನ್ನೂ ಅತಿರೇಕಕ್ಕೆ ಹೋಗಿದೆ. ಹೀಗಾಗಿ ಅವರು ಪಕ್ಷದಲ್ಲಿ ಇರುವುದಿಲ್ಲ, ಎಲ್ಲಿ ಹೋಗುತ್ತಾರೋ ಗೊತ್ತಿಲ್ಲ ಎಂದರು.
ಇಂಥವರನ್ನೆಲ್ಲ ಕರೆದು ಮಾತನಾಡುವುದು ಪಕ್ಷದ ವರಿಷ್ಠರ ಧರ್ಮ. ಒಬ್ಬೊಬ್ಬರು ಒಂದೊಂದು ಹೇಳಿಕೆ ನೀಡುವುದರಿಂದ ಪಕ್ಷದ ಭವಿಷ್ಯ ಹಾಳಾಗುತ್ತದೆ. ಹೀಗೆ ಮುಂದುವರಿದರೆ ಪಕ್ಷದ ಭವಿಷ್ಯ ಇನ್ನೂ ಕಠಿಣವಾಗುತ್ತದೆ. ಈಗಿನ ಬೆಳವಣಿಗೆ ನೋಡಿದರೆ ಅಪರೇಷನ್ ಕಮಲ ಮತ್ತೆ ನಡೆಯುತ್ತದೆ ಅನಿಸುತ್ತದೆ. ಸರ್ಕಾರ ಇದ್ದಾಗ ನಮ್ಮನ್ನೆಲ್ಲ ಸರಿಯಾಗಿ ನೋಡಿಲ್ಲ ಅಂತ ಬಹಳ ಜನ ಶಾಸಕರು ನೋವು ವ್ಯಕ್ತಪಡಿಸಿದ್ದಾರೆ. ನನಗೂ ಸಾಕಷ್ಟು ನೋವಾಗಿತ್ತು ಆದರೂ ನಾನು ಹೇಳಿಕೊಂಡಿಲ್ಲ. ನಾನು ಶಿಸ್ತಿನಲ್ಲಿರುವ ಕಾರಣ ಹೇಳಿಕೊಂಡಿರಲಿಲ್ಲ. ನನ್ನ ಬಳಿಯೂ ಅನೇಕರು ಮಾತನಾಡಿದ್ದಾರೆ. ಆಗಿನ ಅತೃಪ್ತಿ ಈಗ ಸ್ಫೋಟಗೊಳ್ಳುತ್ತಿದೆ ಎಂದು ಅಸಮಾಧಾನ ಹೊರಹಾಕಿದರು.
ಪ್ರಸ್ತುತ ಸರ್ಕಾರದಲ್ಲಿ ಅನುಭವ ಇಲ್ಲದವರೇ ಹೆಚ್ಚಿದ್ದಾರೆ, ಅನುಭವಿಗಳು ಇಲ್ಲ. ಇದ್ದವರು ಎಲ್ಲರೂ ಹೊಟ್ಟೆ ತುಂಬಿದವರು ಆಗಿದ್ದಾರೆ. ಸಚಿವರಾಗಿ ಕಾನೂನು ಪ್ರಕಾರ ಕೆಲಸ ಮಾಡಿದರೆ ಸಾಕು. ಆದರೆ ಅವರಿಗೆ ಇಚ್ಛಾಶಕ್ತಿ ಕೊರತೆಯಿದೆ. ಅಸಮಾಧಾನಗಳು ಕೂಡ ಹೆಚ್ಚಿವೆ. ಈ ಹಿನ್ನೆಲೆಯಲ್ಲಿ ಮುಖ್ಯಮಂತ್ರಿಗಳನ್ನು ಹೊರತುಪಡಿಸಿದರೆ ಬೇರೆ ಯಾವ ಮಂತ್ರಿಯೂ ಕೆಲಸ ಮಾಡುತ್ತಿಲ್ಲ. ಪ್ರವಾಹ ಪರಿಸ್ಥಿತಿಯಲ್ಲಿ ಮಂತ್ರಿಗಳು ಹಗಲು ರಾತ್ರಿ ಕೆಲಸ ಮಾಡಬೇಕಿತ್ತು. ಆದರೆ, ಕೇವಲ ಪ್ರವಾಹ ನೋಡಿ ಬರುವುದನ್ನು ಮಾಡುತ್ತಿದ್ದಾರೆ. ಹೀಗಾಗಿ ಸರ್ಕಾರ ಇದೆಯೋ ಇಲ್ಲವೋ ಎಂಬ ಭಾವನೆ ಜನರಲ್ಲಿದೆ. ವಿಧಾನಸಭೆಯಲ್ಲಿ ಯಾರೊಬ್ಬರೂ ಇರುವುದಿಲ್ಲ. ಜನರ ಬಳಿಯೂ ಇಲ್ಲ. ಹಾಗಾದರೆ ಇವರೆಲ್ಲ ಎಲ್ಲಿ ಹೋಗಿದ್ದಾರೆ ಎಂದು ಪ್ರಶ್ನಿಸಿದರು.
ಡಿ.ಕೆ.ಶಿವಕುಮಾರ್ ಇಡಿ ಕಸ್ಟಡಿಗೆ ಪಡೆದಿರುವ ಕುರಿತು ಪ್ರತಿಕ್ರಿಯಿಸಿದ ಅವರು, ಈ ಕುರಿತು ನಾನು ಹೆಚ್ಚು ಮಾತನಾಡುವುದಿಲ್ಲ ಅದು ಕಾನೂನು ಕೆಲಸ. ಆದರೆ ಅವರು ಎಂದಿಗೂ ವಿಚಾರಣೆ ತಪ್ಪಿಸಿಲ್ಲ ಕರೆದಾಗಲೆಲ್ಲ ಹೋಗಿದ್ದಾರೆ. ಹೀಗಾಗಿ ಅವರನ್ನು ಬಂಧಿಸುವ ಅಗತ್ಯ ಇರಲಿಲ್ಲ ಎಂದು ತಿಳಿಸಿದ್ದಾರೆ.