ರಾಮನಗರ: ಒಂದೆಡೆ ಸೋರುತ್ತಿರುವ ಶಾಲೆ ಛಾವಣಿ, ಇನ್ನೊಂದೆಡೆ ಕುಸಿದುಬೀಳೊ ಹಂತದಲ್ಲಿರೋ ಸರ್ಕಾರಿ ಶಾಲೆ ಕಟ್ಟಡದಲ್ಲೇ ಮಕ್ಕಳು ಪಾಠ ಕೇಳುತ್ತಿದ್ದಾರೆ. ಮಾಜಿ ಸಿಎಂ ಎಚ್.ಡಿ ಕುಮಾರಸ್ವಾಮಿ ಸ್ವಕ್ಷೇತ್ರ ಚನ್ನಪಟ್ಟಣ ತಾಲೂಕಿನ ಶ್ಯಾನಭೋಗನಹಳ್ಳಿಯ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಈ ಎಲ್ಲಾ ದೃಶ್ಯ ಕಂಡು ಬಂದಿದೆ.
ನಾವು ಸರ್ಕಾರಿ ಶಾಲೆಗಳನ್ನ ಉಳಿಸೋಕೆ, ಅವುಗಳ ಅಭಿವೃದ್ಧಿಗೆ ಬದ್ಧವಾಗಿದ್ದೇವೆ. ಸರ್ಕಾರಿ ಶಾಲೆಗೆ ಬರುವ ಮಕ್ಕಳ ಸಂಖ್ಯೆ ಹೆಚ್ಚಾಗಲು ಹಲವು ಯೋಜನೆಗಳನ್ನ ತಂದಿದ್ದೀವೆ ಆದರೂ ಜನ ಖಾಸಗಿ ಶಾಲೆಗಳಿಗೆ ಹೋಗ್ತಾರೆ ಅಂತ ಬೊಬ್ಬೆ ಹೊಡಿಯೋ ಸರ್ಕಾರ, ಶಿಕ್ಷಣ ಮಂತ್ರಿಗಳು ಒಮ್ಮೆ ಇತ್ತ ಕಣ್ಣಾಡಿಸಿ, ಸರ್ಕಾರಿ ಶಾಲೆ ಯಾವ ದುಸ್ಥಿತಿಗೆ ತಲುಪಿದೆ ಎನ್ನುವ ಬಗ್ಗೆ ಗಮನಕೊಟ್ಟು, ಕ್ರಮ ತೆಗೆದುಕೊಳ್ಳಬೇಕಿದೆ.
ಹೌದು ಶ್ಯಾನಭೋಗನಹಳ್ಳಿಯ ಸರ್ಕಾರಿ ಶಾಲೆಯ ಕಟ್ಟಡ ಸಂಪೂರ್ಣವಾಗಿ ಶಿಥಿಲಾವಸ್ಥೆಗೆ ತಲುಪಿದ್ದು, ಯಾವ ಸಂದರ್ಭದಲ್ಲಾದರು ಕೂಡ ಕುಸಿದು ಬೀಳುವಂತಹ ಸ್ಥಿತಿಯಲ್ಲಿದೆ. ಹೆಂಚುಗಳು ಒಡೆದು ಶಾಲೆಯ ಮೇಲ್ಛಾವಣಿ ಸಂಪೂರ್ಣವಾಗಿ ಹಾಳಾಗಿದೆ. ಮಳೆ ಬಂದರೆ ಸಾಕು ನೀರೆಲ್ಲಾ ಕೊಠಡಿಗೆ ಹರಿದುಬರುತ್ತಿದೆ. ಮಕ್ಕಳು ಜೀವವನ್ನ ಕೈಯಲ್ಲಿಡಿದು ಪಾಠ ಆಲಿಸುವಂತಾಗಿದೆ.
ಒಂದೆಡೆ ಮಳೆಯಿಂದಾಗಿ ಸೋರುತ್ತಿರುವ ಶಾಲೆಯ ಕಟ್ಟಡ, ಮತ್ತೊಂದೆಡೆ ಮಕ್ಕಳ ವಿದ್ಯಾಭ್ಯಾಸ ಆತಂಕದಲ್ಲೇ ನಡೆಯುತ್ತಿದೆ. ಇದರ ಮಧ್ಯೆ ಪಾತ್ರೆಯಲ್ಲಿ ತುಂಬುವ ನೀರನ್ನು ಹೊರ ಚೆಲ್ಲುವ ಕೆಲಸ ಬೇರೆ. ಪಾಠದ ಕಡೆ ಗಮನ ಕೊಡಬೇಕೊ ಇಲ್ಲ ನೀರು ತುಂಬಿರುವ ಪಾತ್ರೆಗಳ ಬಗ್ಗೆ ಗಮನ ಕೊಡಬೇಕೋ ಅನ್ನೋ ಸಂದಿಗ್ಧತೆಯಲ್ಲಿ ಮಕ್ಕಳಿದ್ದಾರೆ. ಈ ಸರ್ಕಾರಿ ಶಾಲೆಯ ದುಸ್ಥಿತಿ ಯಾವ ಮಟ್ಟದಲ್ಲಿದೆ ಅನ್ನೋದನ್ನ ನೋಡಿದರೆ, ಸರ್ಕಾರಿ ಶಾಲೆ ಬಿಟ್ಟು ಮಕ್ಕಳು ಯಾಕೆ ಖಾಸಗಿ ಶಾಲೆಗಳತ್ತ ಮುಖ ಮಾಡಿದ್ದಾರೆ ಅನ್ನೋದನ್ನ ಎತ್ತಿ ತೋರಿಸುತ್ತದೆ.
ಈ ಶಾಲೆಯಲ್ಲಿ ಕಳೆದ ವರ್ಷ 25 ಕ್ಕೂ ಹೆಚ್ಚು ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದರು. ಆದರೆ ಶಾಲೆ ದುಸ್ಥಿತಿ ಕಂಡು ಹೆದರಿದ ಪೋಷಕರು ತಮ್ಮ ಮಕ್ಕಳನ್ನು ಸರ್ಕಾರಿ ಶಾಲೆಯಿಂದ ಬಿಡಿಸಿ ಹತ್ತಿರದ ಖಾಸಗಿ ಶಾಲೆಗೆ ಸೇರಿಸಿದ್ದಾರೆ. ಹೀಗಾಗಿ ಈ ಶಾಲೆಯಲ್ಲಿ ಸದ್ಯ 12 ಮಕ್ಕಳು ಮಾತ್ರ ವ್ಯಾಸಂಗ ಮಾಡುತ್ತಿದ್ದಾರೆ. ಕಳೆದ ಜೂನ್ನಲ್ಲಿ ಕುಮಾರಸ್ವಾಮಿ ಅವರು ಜನತಾದರ್ಶನ ನಡೆಸಿದಾಗ ಶಾಲೆಯ ದುಸ್ಥಿತಿ ಬಗ್ಗೆ ಗಮನ ಸೆಳೆಯಲಾಗಿತ್ತು. ಆದರೂ ಯಾವುದೇ ಪ್ರಯೋಜನವಾಗಿಲ್ಲ.
ಶಾಲೆಗಳಿಗೆ ಭೇಟಿ ಕೊಟ್ಟು ಮಕ್ಕಳ ಜ್ಞಾನಮಟ್ಟ ಪರೀಕ್ಷೆ ಮಾಡೋ ಶಿಕ್ಷಣ ಸಚಿವ ಸುರೇಶ್ ಕುಮಾರ್ ಅವರು ಇತ್ತ ಗಮನಹರಿಸಿದರೆ ಒಳಿತು ಎಂದು ಸ್ಥಳೀಯರು ಆಗ್ರಹಿಸಿದ್ದಾರೆ. ಇಂತಹ ಶಾಲೆಗಳಿಗೆ ಭೇಟಿ ಕೊಟ್ಟರೆ ವ್ಯವಸ್ಥೆಯಲ್ಲಿ ಒಂದಿಷ್ಟು ಬದಲಾವಣೆ ಆಗೋದು ನಿಶ್ಚಿತ ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.