ಹಾಸನ: ಚಲಿಸುತ್ತಿದ್ದ ಕಾರಿಗೆ ಕಾಡಾನೆಯೊಂದು ಏಕಾಏಕಿ ಅಡ್ಡ ಬಂದು ಕಾರಿನಲ್ಲಿದ್ದ ಬಾಲಕಿಯನ್ನು ಹೊರಗೆಳೆದು ತುಳಿದು ಗಾಯಗೊಳಿಸಿದ (Elephant Attack) ಘಟನೆ ಸಕಲೇಶಪುರದ (Sakleshpura) ಹೊಸಕೆರೆ ಬಳಿ ನಡೆದಿದೆ.
ಹಳೆಬಾಗೆ ಗ್ರಾಮದ ದೀಕ್ಷಿತಾ (16) ಕಾಡಾನೆ ದಾಳಿಯಿಂದ ಗಾಯಗೊಂಡ ಬಾಲಕಿ. ಚಿಕ್ಕಮಗಳೂರಿನಲ್ಲಿ ಪ್ರಥಮ ಪಿಯುಸಿ ವಿದ್ಯಾಭ್ಯಾಸ ಮಾಡುತ್ತಿದ್ದ ಬಾಲಕಿ, ರಜೆ ಇದ್ದ ಕಾರಣ ತನ್ನ ಊರಾದ ಹಳೆಬಾಗೆ ಗ್ರಾಮಕ್ಕೆ ಬಂದಿದ್ದಳು. ಅಲ್ಲಿಂದ ಪೋಷಕರ ಜೊತೆ ಮಾರುತಿ 800 ಕಾರಿನಲ್ಲಿ ಹೊಸಕೆರೆ ಗ್ರಾಮದ ಅಜ್ಜಿ ಮನೆಗೆ ಹೋಗಿ ವಾಪಾಸ್ ಆಗುತ್ತಿದ್ದಾಗ ಈ ಘಟನೆ ನಡೆದಿದೆ. ಇದನ್ನೂ ಓದಿ: ಮಹಿಳೆಯ ಹಸ್ತಕ್ಷೇಪದಿಂದ ಇಕ್ಕಟ್ಟಿಗೆ ಸರ್ಕಾರ – ದೇವರಗುಡ್ಡದ ಐತಿಹಾಸಿಕ ಕಾರ್ಣಿಕ
ಈ ವೇಳೆ ಏಕಾಏಕಿ ಕಾಡಾನೆ ಕಾರಿಗೆ ಅಡ್ಡ ಬಂದಿದೆ. ಕಾಡಾನೆ ಕಂಡು ದೀಕ್ಷಿತಾ ಪೋಷಕರಾದ ವಿನೋದ ಹಾಗೂ ಗಿರೀಶ್ ಕಾರು ನಿಲ್ಲಿಸಿ ಕೆಳಗಿಳಿದು ಓಡಿ ಹೋಗಿದ್ದಾರೆ. ದೀಕ್ಷಿತಾ ಕಾಡಾನೆ ಕಂಡು ಗಾಬರಿಯಿಂದ ಕಾರಿನಿಂದ ಇಳಿದು ಓಡಲಾಗದೆ ಕಾರಿನಲ್ಲೇ ಕುಳಿತಿದ್ದಳು. ಕಾಡಾನೆ ದೀಕ್ಷಿತಾಳನ್ನು ಸೊಂಡಿಲಿನಿಂದ ಎಳೆದುಕೊಂಡು ತುಳಿದು ಗಾಯಗೊಳಿಸಿದೆ. ಪೋಷಕರು ಕಿರುಚುತ್ತಿದ್ದಂತೆ ಕಾಡಾನೆ ಕಾಫಿ ತೋಟದೊಳಗೆ ಓಡಿ ಹೋಗಿದೆ.
ಗಾಯಗೊಂಡ ಬಾಲಕಿಗೆ ಸಕಲೇಶಪುರ ಆಸ್ಪತ್ರೆಯಲ್ಲಿ ಪ್ರಾಥಮಿಕ ಚಿಕಿತ್ಸೆ ಕೊಡಿಸಿ, ಹೆಚ್ಚಿನ ಚಿಕಿತ್ಸೆಗಾಗಿ ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ. ಸ್ಥಳಕ್ಕೆ ಅರಣ್ಯ ಇಲಾಖೆ (Forest Department) ಸಿಬ್ಬಂದಿ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಸಕಲೇಶಪುರ ಗ್ರಾಮಾಂತರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ. ಇದನ್ನೂ ಓದಿ: ವಿಜಯದಶಮಿ – ಶ್ರೀಗಳಿಂದ ರಾಯರಿಗೆ ವಿಶೇಷ ಪೂಜೆ
Web Stories