ಕೊಪ್ಪಳ: ವಿವಿಧ ಕಾಮಗಾರಿಗಳಲ್ಲಿ ಭ್ರಷ್ಟಾಚಾರ ನಡೆಸಿದ ಆರೋಪದ ಪ್ರಕರಣಕ್ಕೆ ಸಂಬಂಧಿಸಿದಂತೆ ಕೊಪ್ಪಳದ ಕರ್ನಾಟಕ ಗ್ರಾಮೀಣ ಮೂಲಭೂತ ಸೌಕರ್ಯ ಅಭಿವೃದ್ಧಿ ನಿಯಮಿತದ (KRIDL) ಕಾರ್ಯನಿರ್ವಾಹಕ ಎಂಜಿನಿಯರ್ ಅವರನ್ನ ಲೋಕಾಯುಕ್ತ ಪೊಲೀಸರು ಬಂಧಿಸಿದ್ದಾರೆ.
ಝರಣಪ್ಪ ಎಂ. ಚಿಂಚೋಳಿಕರ್ ಬಂಧಿತ ಆರೋಪಿ. ಇಲಾಖೆಯಲ್ಲಿ ಗ್ರೂಪ್ ಲೀಡರ್ ಆಗಿದ್ದ ದೇವರಾಜ ರೇಷ್ಮೆ ಎಂಬುವರನ್ನೂ ಬಂಧಿಸಿ ಇಬ್ಬರನ್ನೂ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.
ಕೊಪ್ಪಳದಲ್ಲಿ ಬ್ರಹ್ಮಾಂಡ ಭ್ರಷ್ಟಾಚಾರವನ್ನು ʻಪಬ್ಲಿಕ್ ಟಿವಿʼ ಬಯಲಿಗೆಳೆದಿತ್ತು. ಕೆಆರ್ಐಡಿಎಲ್ ಅಕ್ರಮದ ಬಗ್ಗೆ ಪಬ್ಲಿಕ್ ಟಿವಿ ನಿರಂತರ ವರದಿ ಬಿತ್ತರಿಸಿತ್ತು. ಇದರಿಂದ ಎಚ್ಚೆತ್ತ ಸರ್ಕಾರ ಲೋಕಾಯುಕ್ತದಲ್ಲಿ ಪ್ರಕರಣ ದಾಖಲು ಮಾಡಿತ್ತು. ನಂತರ ಭ್ರಷ್ಟಾಚಾರದ ಪ್ರಕರಣದ ತನಿಖೆ ಬೆಂಗಳೂರಿಗೆ ವರ್ಗಾವಣೆಗೊಂಡಿತ್ತು. ಅಲ್ಲಿನ ಲೋಕಾಯುಕ್ತ ಡಿವೈಎಸ್ಪಿ ಮಲ್ಲಿಕಾರ್ಜುನ ಚುಕ್ಕಿ ನೇತೃತ್ವದಲ್ಲಿ, ಬೆಂಗಳೂರು ಹಾಗೂ ಕೊಪ್ಪಳ ಜಿಲ್ಲೆಯ ಲೋಕಾಯುಕ್ತ ಅಧಿಕಾರಿಗಳು ಬಂಧಿಸಿದ್ದಾರೆ. ಬಳಿಕ ಇಲ್ಲಿನ ಜಿಲ್ಲಾ ಆಸ್ಪತ್ರೆಗೆ ಕರೆದುಕೊಂಡು ಹೋಗಿ ಆರೋಗ್ಯ ತಪಾಸಣೆ ಮಾಡಲಾಯಿತು.

ಝರಣಪ್ಪ ಎಂ. ಚಿಂಚೋಳಿಕರ್ ವಿರುದ್ಧ ಜಿಲ್ಲೆಯ ಯಲಬುರ್ಗಾ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ವಿವಿಧ ಯೋಜನೆಗಳ ಕಾರ್ಯನಿರ್ವಹಣೆಯಲ್ಲಿ ಅವ್ಯವಹಾರ ಮಾಡಿದ ಆರೋಪ ಸಾಬೀತಾಗಿತ್ತು. ಆದ್ದರಿಂದ 2 ವರ್ಷಗಳ ಹಿಂದೆ ಅವರನ್ನ ಕರ್ತವ್ಯದಿಂದ ಅಮಾನತು ಮಾಡಲಾಗಿತ್ತು. ಬಳಿಕ ಸೇವೆಯಿಂದಲೂ ವಜಾ ಮಾಡಲಾಗಿತ್ತು.
ಝರಣಪ್ಪ ಯಲಬುರ್ಗಾ ಕ್ಷೇತ್ರದಲ್ಲಿ 2016–18ರ ಅವಧಿಯಲ್ಲಿ ಸುವರ್ಣ ಗ್ರಾಮ ಯೋಜನೆಯ ಕಾಮಗಾರಿಗಳನ್ನ ನಿರ್ವಹಿಸದೇ ಅನುದಾನ ದುರ್ಬಳಕೆ ಮಾಡಿಕೊಂಡಿದ್ದಾರೆ ಎಂದು ಮಾಜಿ ಸಚಿವ ಹಾಲಪ್ಪ ಆಚಾರ್ 2020ರಲ್ಲಿ ದೂರು ನೀಡಿದ್ದರು. ಈ ದೂರಿನ ಅನ್ವಯ ಗ್ರಾಮೀಣಾಭಿವೃದ್ಧಿ ಪಂಚಾಯತ್ ರಾಜ್ ಇಲಾಖೆ ಸಂಸ್ಥೆಯಲ್ಲಿನ ಎಂಜಿನಿಯರ್ಗಳ ಅಧ್ಯಕ್ಷತೆಯಲ್ಲಿ ಪಂಚನಾಮೆ ಸಮಿತಿ ರಚಿಸಿತ್ತು. ಚಿಂಚೋಳಿಕರ್ ಇಲ್ಲಿನ ನಿವಾಸದಲ್ಲಿ ಕಳೆದ ಲೋಕಾಯುಕ್ತ ದಾಳಿಯೂ ಆಗಿತ್ತು. ಈ ಪ್ರಕರಣವೂ ಸೇರಿದಂತೆ ಕೆಆರ್ಐಡಿಎಲ್ ನಲ್ಲಿ ನಡೆದ 78 ಕೋಟಿ ರೂ. ಮೊತ್ತದ ಭ್ರಷ್ಟಾಚಾರಕ್ಕೆ ಸಂಬಂಧಿಸಿದಂತೆ ಬಂಧಿಸಲಾಗಿದೆ.
