ಗದಗ: ಜಿಲ್ಲೆಯ ನರಗುಂದ ಪಟ್ಟಣದ 7 ವರ್ಷದ ಬಾಲಕಿಗೆ ತಮಿಳುನಾಡು ಯುನಿವರ್ಸಲ್ ವಿವಿ ಗೌರವ ಡಾಕ್ಟರೇಟ್ ನೀಡಿ ಗೌರವಿಸಲಿದೆ.
ವೈದೃತಿ ಕೋರಿಶೆಟ್ಟರ್ ಗೌರವ ಡಾಕ್ಟರೇಟ್ ಪ್ರಶಸ್ತಿಗೆ ಆಯ್ಕೆಯಾಗಿದ್ದಾಳೆ. ಬಾಲಕಿ ಪಟ್ಟಣದ ಸರ್.ಎಂ ವಿಶ್ವೇಶ್ವರಯ್ಯ ಶಾಲೆಯಲ್ಲಿ 2ನೇ ತರಗತಿನಲ್ಲಿ ವ್ಯಾಸಂಗ ಮಾಡುತ್ತಿದ್ದಾಳೆ. ಪ್ರಧಾನ ಮಂತ್ರಿ, ಮುಖ್ಯಮಂತ್ರಿ, ಸಚಿವರು, ಶಾಸಕರು, ರಾಜ ಮಹಾರಾಜರ ಆಳ್ವಿಕೆಯ ಕಾಲಾವಧಿ ಕುರಿತು ಕೇಳುವ ಪ್ರಶ್ನೆಗಳಿಗೆ ವೈದೃತಿ ಪಟಾಪಟನೆ ಉತ್ತರಿಸಿದ್ದಾರೆ. ಹೀಗಾಗಿ ಬಾಲಕಿಯ ಅದ್ಬುತ ಸಾಧನೆ ಗುರುತಿಸಿ ಗೌರವ ಡಾಕ್ಟರೇಟ್ ಪದವಿ ನೀಡಿ ಗೌರವಿಸಲಾಗುತ್ತಿದೆ.
ತಮಿಳುನಾಡಿನ ಮಧುರೈನಲ್ಲಿ ನಡೆಯುವ ಯುನಿವರ್ಸಲ್ ವಿವಿ ಘಟಿಕೋತ್ಸವದಲ್ಲಿ ಇಂದು ಡಾಕ್ಟರೇಟ್ ಪ್ರಶಸ್ತಿಯನ್ನ ತನ್ನ ಮುಡಿಗೇರಿಸಿಕೊಳ್ಳಲಿದ್ದಾಳೆ. ಈ ಬಾಲಕಿಗೆ ಕರ್ನಾಟಕ ದರ್ಶನ ಮಾಸಪತ್ರಿಕೆ, ಸೇವಾ ಅಭಿವೃದ್ಧಿ ಸಂಸ್ಥೆ ನೀಡುವ ಕರ್ನಾಟಕ ‘ಜ್ಞಾನಚಕ್ರವರ್ತಿ’ ರಾಷ್ಟ್ರೀಯ ಪ್ರಶಸ್ತಿ, ಕರುನಾಡು ರಾಜ್ಯೋತ್ಸವ, ಸಂಗೋಳ್ಳಿ ರಾಯಣ್ಣ ಗೌರವ ಪ್ರಶಸ್ತಿ, ವಿಕ್ರಮಾದಿತ್ಯ ರಾಜ್ಯ ಪ್ರಶಸ್ತಿ ಸೇರಿದಂತೆ ಅನೇಕ ಪ್ರಶಸ್ತಿಗೆ ಆಯ್ಕೆಯಾಗಿರುವುದು ಹೆಮ್ಮೆಯ ಸಂಗತಿ.
7 ವರ್ಷದಲ್ಲಿ ಬಾಲಕಿ ಇಷ್ಟೊಂದು ಸಾಧನೆ ಮಾಡುತ್ತಿರುವುದು ಹೆಮ್ಮೆಯ ವಿಷಯ. ಜಿಲ್ಲೆಯ ಹೆಸರು ಮತ್ತಷ್ಟು ಉತ್ತುಂಗಕ್ಕೇರುವಂತೆ ಮಾಡಿದ್ದಾಳೆ ಎಂದು ಸ್ಥಳೀಯರು ಹಾಗೂ ಸ್ಥಳಿಯ ಸರ್.ಎಂ.ವಿಶ್ವೇಶ್ವರಯ್ಯ ಶಿಕ್ಷಣ ಸಂಸ್ಥೆ ಆಡಳಿತ ಮಂಡಳಿಯವರು ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ.