ಬೆಂಗಳೂರು: ಶ್ರೀಮಂತ್ ಪಾಟೀಲ್ ನಾಪತ್ತೆ ಪ್ರಕರಣ ಸಂಬಂಧ ಗೃಹ ಇಲಾಖೆಗೆ ಪತ್ನಿಯ ಹಾಗೂ ಮನೆಯವರಿಂದ ಮಾಹಿತಿ ತರಿಸಿಕೊಳ್ಳುವಂತೆ ಸ್ಪೀಕರ್ ರಮೇಶ್ ಕುಮಾರ್ ಸೂಚನೆ ನೀಡಿದ್ದಾರೆ.
ಶ್ರೀಮಂತ್ ಪಾಟೀಲ್ ಅವರು ಹೃದಯದ ಸಮಸ್ಯೆ ಇರುವ ಕಾರಣ ಸದನಕ್ಕೆ ಆಗಮಿಸುವುದಿಲ್ಲ ಎಂದು ಬೆಳಗ್ಗೆ ಪತ್ರದ ಮೂಲಕ ಸ್ಪೀಕರ್ಗೆ ತಿಳಿಸಿದ್ದಾರೆ. ಆದರೆ ನಮ್ಮ ರಾಜ್ಯದಲ್ಲೇ ಹೈಟೆಕ್ ಆಸ್ಪತ್ರೆಗಳಿದ್ದವು, ಚೆನ್ನೈ, ಮುಂಬೈಗೆ ಓಡಾಡುವ ಅಗತ್ಯವೇನಿತ್ತು ಎಂದು ಸ್ಪೀಕರ್ ಸದನದಲ್ಲಿ ಪ್ರಶ್ನಿಸಿದ್ದಾರೆ.
ವಿಮಾನ ಪ್ರಯಾಣದ ಟಿಕೆಟ್ ಸಹ ಸಿಕ್ಕಿದೆ. ಶ್ರೀಮಂತ್ ಪಾಟೀಲ್ ಅವರಿಗೆ ಯಾವುದೇ ರೀತಿಯ ತೊಂದರೆಯಾಗಿಲ್ಲ ಬಿಜೆಪಿಯವರೇ ಅವರನ್ನು ಅಪಹರಿಸಿದ್ದಾರೆ ಎಂದು ಆಡಳಿತ ಪಕ್ಷದ ನಾಯಕರು ಇದೇ ವೇಳೆ ಹರಿಹಾಯ್ದರು.
ಈ ಆರೋಪವನ್ನು ಪುರಸ್ಕರಿಸಿದ ಸ್ಪೀಕರ್ ಗಂಭೀರ ಆರೋಗ್ಯ ಸಮಸ್ಯೆಗಳು ಇದ್ದರೆ ಮಾತ್ರ ಪತ್ರ ಬರೆದು ತಿಳಿಸಿ ಹೋಗಬಹುದು. ಆದರೆ ಶ್ರೀಮಂತ ಪಾಟೀಲ್ ಅವರು ನಿನ್ನೆಯಿಂದಲೂ ಆರಾಮವಾಗಿಯೇ ಇದ್ದರು ಎಂದು ಆಡಳಿತ ಪಕ್ಷದ ನಾಯಕರು ತಿಳಿಸುತ್ತಿದ್ದಾರೆ. ಬೆಳಗ್ಗೆ ಇದ್ದಕ್ಕಿದ್ದಂತೆ ಆರೋಗ್ಯ ಸಮಸ್ಯೆ ಉಲ್ಬಣಿಸಲು ಹೇಗೆ ಸಾಧ್ಯ ಎಂದು ಪ್ರಶ್ನಿಸಿದ್ದಾರೆ.
ಈ ವಿಚಾರದ ಬಗ್ಗೆ ಸ್ಪಷ್ಟನೆ ತಿಳಿಯಬೇಕು, ಶ್ರೀಮಂತ್ ಪಾಟೀಲ್ ನಾಪತ್ತೆ ಕುರಿತು ಪತ್ನಿ ಹಾಗೂ ಮನೆಯವರಿಂದ ಮಾಹಿತಿ ಪಡೆದು, ನಾಳೆಯೇ ವರದಿ ತರಿಸಿಕೊಳ್ಳುವಂತೆ ಗೃಹ ಇಲಾಖೆಗೆ ಸ್ಪೀಕರ್ ಸೂಚಿಸಿದರು.