ಗದಗ: ನಮ್ಮ ಶಾಸಕರಿಗೆ ತಲೆ ಇದೆಯೋ ಇಲ್ವೋ ಗೊತ್ತಿಲ್ಲ ಎಂದು ಹೇಳುವ ಮೂಲಕ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ವಿರುದ್ಧ ಸಂಸದ ರಮೇಶ್ ಜಿಗಜಿಣಗಿ ಪರೋಕ್ಷವಾಗಿ ಗುಡುಗಿದ್ದಾರೆ.
ಇಂದು ನಗರದ ತೋಂಟದಾರ್ಯ ಮಠದ ಕಾರ್ಯಕ್ರಮಕ್ಕೆ ಆಗಮಿಸಿದ ಜಿಗಜಿಣಗಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಮ್ಮ ಶಾಸಕರಿಗೆ ತಲೆ ಇದೆಯೋ ಇಲ್ವೋ ಗೊತ್ತಿಲ್ಲ. ರಾಜ್ಯ ಮತ್ತು ಕೇಂದ್ರದಲ್ಲಿ ನಮ್ಮದೇ ಸರ್ಕಾರ ಇದೆ. ಸರ್ಕಾರದ ವಿರುದ್ಧ ಸಾರ್ವಜನಿಕವಾಗಿ ಹಾದಿ ಬೀದಿಯಲ್ಲಿ ಮಾತನಾಡೋದು ಸರಿನಾ? ಈ ರೀತಿ ತಲೆ ಇಲ್ಲದವರು ಹೇಳುತ್ತಾರೆ ಅಷ್ಟೇ. ತಲೆ ಇದ್ದವರು ಯಾರೂ ಈ ರೀತಿ ಮಾತನಾಡಲ್ಲ ಎಂದು ಕಿಡಿಕಾರಿದರು.
ನಾನು 40 ವರ್ಷ ರಾಜಕೀಯ ನೋಡಿದ್ದೇನೆ. ನಮ್ಮ ಪಕ್ಷದಲ್ಲಿ ಇದ್ದು ಸರ್ಕಾರದ ವಿರುದ್ಧ ಹೇಳಿಕೆ ನೀಡುವ ಅರ್ಥ ಏನು? ಇದು ಪಕ್ಷ ವಿರೋಧಿ ಹೇಳಿಕೆ ಆಗಲ್ವಾ? ಹೀಗಾಗಿ ಪಕ್ಷ ನೋಟಿಸ್ ನೀಡಿದೆ. ನಾವೂ ಪರಿಹಾರ ವಿಷಯದಲ್ಲಿ ಪ್ರಧಾನಿ ಕಚೇರಿಗೆ ಮಾಹಿತಿ ನೀಡಿದ್ದೇವೆ. ಕೇಂದ್ರ ಸಚಿವರಾದ ಪ್ರಹ್ಲಾದ್ ಜೋಶಿ ಮತ್ತು ಸದಾನಂದ ಗೌಡ ಅವರ ಜೊತೆ ದೂರವಾಣಿ ಮೂಲಕ ಮಾತನಾಡಿದ್ದೇನೆ. ನಾವೆನೂ ಮಲಗಿಲ್ಲ. ಧೈರ್ಯ ಅವರಿಗೆ ಮಾತ್ರ ಇಲ್ಲ ನಮಗೂ ಇದೆ. ಮತದ ಮೂಲಕ ಜನ ಧೈರ್ಯ ಕೊಟ್ಟಿದ್ದಾರೆ ಎಂದು ಯತ್ನಾಳ್ ಅವರನ್ನು ಜಿಗಜಿಣಗಿ ಕುಟುಕಿದರು.