ವಿಜಯಪುರ: ಇತ್ತೀಚೆಗೆ ರಾಜ್ಯದಲ್ಲಿ ನಯ ವಂಚಕ ಕಂಪನಿಗಳ ಹಾವಳಿ ಜೋರಾಗಿದೆ. ಫ್ರಾಡ್ ಕಂಪನಿಗಳ ಬಲೆಗೆ ಮುಗ್ಧ ಹಾಗೂ ಸಾಮಾನ್ಯ ಜನರು ಬಲಿಯಾಗೋದು ಸಾಮಾನ್ಯ ಆಗಿದೆ. ಆದರೆ ವಿಜಯಪುರದಲ್ಲಿ ಫ್ರಾಡ್ ಕಂಪನಿಯೊಂದರ ಬಲೆಗೆ ಜನಪ್ರತಿನಿಧಿಯೇ ಬಿದ್ದಿದ್ದು, ಬರೋಬ್ಬರಿ 10 ಲಕ್ಷ ರೂ.ಯನ್ನು ಕಳೆದುಕೊಂಡಿದ್ದಾರೆ.
ವಿಜಯಪುರದ ನಾಗಠಾಣ ಮತಕ್ಷೇತ್ರದ ಮಾಜಿ ಶಾಸಕ ಹಾಗೂ ಕಾಂಗ್ರೆಸ್ ಮುಖಂಡ ವಿಠ್ಠಲ್ ಕಟಕಧೋಂಡ್ ಶ್ರೀ ಗೌರಿ ಗಣೇಶ ಚಿಟ್ಸ್ ಪ್ರೈ .ಲಿ. ಕಂಪನಿಯಲ್ಲಿ 5 ವರ್ಷದ ಹಿಂದೆ 5 ಲಕ್ಷದಂತೆ ಎರಡು ಚೀಟಿ ಹಾಕಿದ್ದರು. ಆದರೆ ಚೀಟಿ ಅವಧಿ ಮುಗಿದು ಹೋದರು ಈವರೆಗೂ ಅವರ ಹಣ ಮರಳಿಸಿಲ್ಲ. ಇದರಿಂದ ವಿಠ್ಠಲ್ ಕಟಕಧೋಂಡ ಪೊಲೀಸ್ ಠಾಣೆ ಮೆಟ್ಟಿಲೇರಿದ್ದಾರೆ.
ತಮಗಾದಂತೆ ನೂರಾರು ಜನರಿಗೆ ಈ ಕಂಪನಿ ವಂಚಿಸಿದೆ. ಇನ್ನು ಇದೇ ರೀತಿ ನೂರಾರು ಮುಗ್ಧ ಜನರು ಈ ಚಿಟ್ಫಂಡ್ನಲ್ಲಿ ಹಣ ಹಾಕಿದ್ದು, ಮಾಜಿ ಶಾಸಕರ ಮುಂದೆ ತಮಗಾದ ಅನ್ಯಾಯದ ಬಗ್ಗೆ ಅಳಲು ತೋಡಿಕೊಂಡಿದ್ದಾರೆ.