ಉಡುಪಿ: ಸಾಮಾಜಿಕ ಜಾಲತಾಣ ಫೇಸ್ ಬುಕ್ ಸ್ಟೇಟಸ್ ಮೂಲಕ ಬಳ್ಳಾರಿಯಲ್ಲಿ ಸಮರ ಸಾರಿ ಪರಮೇಶ್ವರ್ ನಾಯ್ಕ್ ಅವರ ಸಚಿವ ಸ್ಥಾನ ಕಿತ್ತುಕೊಂಡು ಕೊನೆಗೆ ಸೇವೆಗೆ ರಾಜೀನಾಮೆ ನೀಡಿದ ಮಾಜಿ ಡಿವೈ ಎಸ್ ಪಿ, ಭಾರತೀಯ ಜನಶಕ್ತಿ ಕಾಂಗ್ರೆಸ್ ಪಕ್ಷದ ಸಂಸ್ಥಾಪಕಿ ಅನುಪಮಾ ಶೆಣೈ ಅವರು ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಫೇಸ್ ಬುಕ್ ವಾರ್ ಶುರು ಮಾಡಿದ್ದಾರೆ.
ಮೋದಿ ಆಡಳಿತದ ಬಗ್ಗೆ ಈವರೆಗೆ ವಿಡಂಬನೆ ಮಾಡುತ್ತಿದ್ದ ಅನುಪಮಾ ಶೆಣೈ, ಈ ಬಾರಿ ಮೋದಿ ಪತ್ನಿ ಯಶೋಧ ಬೆನ್ ಬೆನ್ನು ಬಿದ್ದಿದ್ದಾರೆ. ಮೋದಿಯವರು ಪತ್ನಿಯನ್ನು ತೊರೆದಿದ್ದಾರೆ. ಅವರ ಪತ್ನಿ ಪೊಲೀಸ್ ಕಂಪ್ಲೆಂಟ್ ಕೊಟ್ಟಿದ್ದಾರಾ? ಅವರಿಗೂ ಮೋದಿಯ ಭಯ ಇರಬೇಕು. ಹಾಗಾಗಿ ಜೀವನಾಂಶ ಕೇಳಲೂ ಕೋರ್ಟಿಗೆ ಹೋಗಿಲ್ಲ ಅಂತ ಫೇಸ್ ಬುಕ್ ನಲ್ಲಿ ಕಮೆಂಟ್ ಮಾಡಿದ್ದಾರೆ.
ಇದಕ್ಕೂ ಮೊದಲು ಅನುಪಮಾ ಶೆಣೈ ಮತ್ತೊಂದು ಸ್ಟೇಟಸ್ ಹಾಕಿದ್ದು, ತ್ರಿವಳಿ ತಲಾಖ್ ರದ್ದುಗೊಳಿಸಲು ಹಗಲಿರುಳು ಶ್ರಮಿಸುವ ಮೋದಿಯವರು ತನ್ನ ಮಡದಿಯನ್ನು ದೂರ ಮಾಡಿದ್ದಾರೆ. ಈ ವಿಷಯವೂ ಸಂಸತ್ತಿನಲ್ಲಿ ಚರ್ಚೆಯಾಗಲಿ ಅಂತ ಸವಾಲು ಹಾಕಿದ್ದಾರೆ.
ಶೆಣೈ ಹಾಕಿರುವ ಸ್ಟೇಟಸ್ ಗೆ ಪರ ಮತ್ತು ವಿರೋಧ ಕಮೆಂಟ್ ಗಳು ಬರುತ್ತಿದೆ. ಮೋದಿ ಅಭಿಮಾನಿಗಳು ಶೆಣೈ ವಿರುದ್ಧ ಫೇಸ್ ಬುಕ್ ನಲ್ಲೇ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಪ್ರಧಾನಿಯವರ ಖಾಸಗಿ ಜೀವನದ ಚರ್ಚೆ ಬೇಡ. ಅವರ ಸಂಸಾರದ ವಿಚಾರ ನಿಮಗೆ ಬೇಡ. ಮೊದಲು ನೀವು ನಿಮ್ಮ ಹೊಸ ಪಕ್ಷ ಕಟ್ಟಿ, ಪಕ್ಷ ಸಂಘಟನೆ ಬಗ್ಗೆ ಚಿಂತೆ ಮಾಡಿ. ಪ್ರಧಾನಿ ಕುಟುಂಬದ ಬಗ್ಗೆ ನಿಮಗ್ಯಾಕೆ ಚಿಂತೆ ಅಂತ ಪ್ರಶ್ನೆ ಮಾಡಿದ್ದಾರೆ.
ಒಟ್ಟಿನಲ್ಲಿ ಮುಂದಿನ ವಾರ ಪ್ರಧಾನಿ ಮೋದಿ ರಾಜ್ಯ ರಾಜಧಾನಿಗೆ ಬರುತ್ತಿರುವುದರಿಂದ ಈ ಸ್ಟೇಟಸ್ ಮತ್ತಷ್ಟು ಮಹತ್ವ ಪಡೆದುಕೊಂಡಿದೆ.