ಬಳ್ಳಾರಿ: ಮಾಜಿ ಸಿಎಂ ಸಿದ್ದರಾಮಯ್ಯ ಗುರುವಾರ ಮಧ್ಯರಾತ್ರಿ ಬಳ್ಳಾರಿ ರೆಡ್ಡಿ ಅವರನ್ನು ಭೇಟಿ ಮಾಡಿ ಅರ್ಧ ಗಂಟೆಗೂ ಹೆಚ್ಚು ಕಾಲ ಚರ್ಚೆ ನಡೆಸಿದ್ದಾರೆ. ಮಾಜಿ ಸಿಎಂ ಸಿದ್ದರಾಮಯ್ಯ ಮಿಡ್ ನೈಟ್ನಲ್ಲಿ ಮೀಟ್ ಮಾಡಿದ್ದು ಜನಾರ್ದನರೆಡ್ಡಿ ಅವರನ್ನಲ್ಲ. ಬದಲಾಗಿ ಕೆಪಿಸಿಸಿ ಉಪಾಧ್ಯಕ್ಷ ಮಾಜಿ ಶಾಸಕ ಸೂರ್ಯನಾರಾಯಣ ರೆಡ್ಡಿ ಅವರನ್ನು ಭೇಟಿ ಮಾಡಿದ್ದಾರೆ.
ಚುನಾವಣೆ ಘೋಷಣೆಯಾದ ದಿನದಿಂದ ಪಕ್ಷದೊಂದಿಗೆ ಮುನಿಸುಕೊಂಡಿರುವ ಸೂರ್ಯನಾರಾಯಣ ರೆಡ್ಡಿ ಅವರನ್ನು ಸಿದ್ದರಾಮಯ್ಯ ಭೇಟಿಯಾಗಿ ಚರ್ಚೆ ನಡೆಸಿದರು. ಏನೇ ಭಿನ್ನಾಭಿಪ್ರಾಯ ಇದ್ದರೂ ಚುನಾವಣೆ ಮುಗಿದ ನಂತರ ಚರ್ಚೆ ಮಾಡೋಣ. ಸದ್ಯಕ್ಕೆ ಕಾಂಗ್ರೆಸ್ ಅಭ್ಯರ್ಥಿ ಉಗ್ರಪ್ಪರನ್ನು ಗೆಲ್ಲಿಸುವ ಜವಾಬ್ದಾರಿ ವಹಿಸಿಕೊಳ್ಳಬೇಕು ಎಂದು ಮನವಿ ಮಾಡಿದರು.
ಕಾಂಗ್ರೆಸ್ ಅಭ್ಯರ್ಥಿ ಉಗ್ರಪ್ಪ, ಮಾಜಿ ಸಚಿವ ಸಂತೋಷ ಲಾಡ್, ಶಾಸಕ ನಾಗೇಂದ್ರ ಸಹ ಸೂರ್ಯನಾರಾಯಣ ರೆಡ್ಡಿ ಮನವೊಲಿಸುವ ಪ್ರಯತ್ನ ಮಾಡಿದರು. ಸಿದ್ದರಾಮಯ್ಯ ಮನವೊಲಿಕೆ ನಂತರವೂ ಸೂರ್ಯನಾರಾಯಣ ರೆಡ್ಡಿ ಪಕ್ಷದ ಅಭ್ಯರ್ಥಿ ಪರ ಪ್ರಚಾರ ಮಾಡ್ತಾರೋ ಇಲ್ವೋ ಎನ್ನುವುದು ಇಂದು ಬಹಿರಂಗವಾಗಲಿದೆ.
ಕಳೆದ ಒಂದು ವಾರದ ಹಿಂದೆ ಜಲಸಂಪನ್ಮೂಲ ಸಚಿವ ಡಿ.ಕೆ ಶಿವಕುಮಾರ್ ಸಹ ಸೂರ್ಯನಾರಾಯಣ ರೆಡ್ಡಿ ಅವರನ್ನು ಭೇಟಿ ಮಾಡಿ ಮನವೊಲಿಕೆ ಮಾಡುವ ಪ್ರಯತ್ನ ಮಾಡಿದರು. ಆದರೆ ಡಿಕೆಶಿ ಸಂಧಾನಕ್ಕೆ ಜಗ್ಗದ ರೆಡ್ಡಿ ಸಿದ್ದರಾಮಯ್ಯನವರ ಮಾತುಕತೆಯಿಂದ ತೃಪ್ತಿಯಾದ್ರಾ ಎನ್ನುವುದನ್ನು ಸೂೂರ್ಯನಾರಾಯಣರೆಡ್ಡಿ ಅವರೇ ತಿಳಿಸಬೇಕಾಗಿದೆ.