ಗದಗ: ವಿದ್ಯುತ್ ಶಾರ್ಟ್ ಸರ್ಕ್ಯೂಟ್ ನಿಂದ ತೋಟದ ಗುಡಿಸಲು ಮನೆಗೆ ಬೆಂಕಿ ತಗುಲಿ, ವೃದ್ಧೆ ಹಾಗೂ 5 ಕುರಿಗಳು ಸಜೀವ ದಹನವಾಗಿರುವ ಘಟನೆ ಜಿಲ್ಲೆಯ ಗಜೇಂದ್ರಗಡ ತಾಲೂಕಿನ ನಾಗೇಂದ್ರಗಡ ಗ್ರಾಮದಲ್ಲಿ ನಡೆದಿದೆ.
ಸುಮಾರು 70 ವರ್ಷದ ಹನುಮವ್ವ ಹಂಡಿ ಹಾಗೂ 5 ಕುರಿಗಳು ಸಜೀವ ದಹನವಾಗಿವೆ. ಗುಡಿಸಲ ಮೇಲ್ಭಾಗದಲ್ಲಿ ಹಾದುಹೋಗಿದ್ದ ವಿದ್ಯುತ್ ತಂತಿಯ ಸ್ಪರ್ಶದಿಂದ ಗುಡಿಸಲು ಮನೆಗೆ ಬೆಂಕಿ ತಗುಲಿದೆ ಎನ್ನಲಾಗುತ್ತಿದ್ದು, ರಾತ್ರಿ ವೇಳೆ ತೋಟದ ಮನೆಯಲ್ಲಿ ಯಾರು ಇಲ್ಲದ ವೇಳೆ ಘಟನೆ ಸಂಭವಿಸಿದೆ. ಪರಿಣಾಮ ವೃದ್ಧೆ ಸೇರಿದಂತೆ 5 ಕುರಿಗಳು ಹೊರಬರಲಾರದೆ ಸಜೀವ ದಹನವಾಗಿವೆ.
ಗುಡಿಸಲಿಗೆ ಸಂಪೂರ್ಣ ಬೆಂಕಿ ಆವರಿಸಿಕೊಂಡಿದ್ದು, ಹಣ, ಬಟ್ಟೆ, ಗೃಹೋಪಯೋಗಿ ವಸ್ತುಗಳು ಹಾಗೂ ಕೃಷಿ ಸಲಕರಣೆಗಳು ಸಹ ಸುಟ್ಟು ಭಸ್ಮವಾಗಿವೆ. ಈ ಬಗ್ಗೆ ಸ್ಥಳೀಯರಿಗೆ ತಡವಾಗಿ ವಿಚಾರ ತಿಳಿದಿದೆ. ತಕ್ಷಣ ಅಗ್ನಿಶಾಮಕ ದಳದವರಿಗೆ ಕರೆ ಮಾಡಿ ಮಾಹಿತಿ ತಿಳಿಸಿದ್ದಾರೆ.
ಮಾಹಿತಿ ತಿಳಿದು ಸ್ಥಳಕ್ಕೆ ಅಗ್ನಿಶಾಮಕದಳ ಬಂದು ಅವರೊಂದಿಗೆ ಸ್ಥಳೀಯರು ಸೇರಿ ಬೆಂಕಿಯನ್ನು ನಂದಿಸಿದ್ದಾರೆ. ನಂತರ ಸ್ಥಳಕ್ಕೆ ಗಜೇಂದ್ರಗಡ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಈ ಕುರಿತು ಗಜೇಂದ್ರಗಡ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಕುಟುಂಬದವರ ಆಕ್ರಂದನ ಮುಗಿಲು ಮುಟ್ಟಿದೆ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್ಲೋಡ್ ಮಾಡಿ: play.google.com/publictv