ಬೆಳಗಾವಿ: ಮಹಾಮಳೆಗೆ ಬೆಂಗಳೂರಿನ ರಸ್ತೆಗಳಲ್ಲಿ ಗುಂಡಿ ಬಿದ್ದು ಹಲವರನ್ನು ಬಲಿ ಪಡೆದಿದೆ. ಗುಂಡಿ ಮುಚ್ಚಿಸಿ ಎಂದು ಸರ್ಕಾರಕ್ಕೆ ಗೋಗೆರೆದು ಸಾಕಾಗಿ ಹೋಗಿದೆ. ಈ ಹಿನ್ನೆಲೆಯಲ್ಲಿ ಬೆಳಗಾವಿಯ ರೈತರು ತಮ್ಮ ಕಾಯಕದ ಮೂಲಕವೇ ಉತ್ತರ ಕೊಟ್ಟಿದ್ದಾರೆ.
ಎಷ್ಟೇ ಮನವಿ ಮಾಡಿದರು ಸರ್ಕಾರವೇ ನಿರ್ಮಿಸಿದ ರಸ್ತೆಯನ್ನು ತಾವೇ ದುಡ್ಡು ಹಾಕಿ ರಿಪೇರಿ ಮಾಡಿದ್ದಾರೆ. ಅಥಣಿ ತಾಲೂಕಿನ ರಡ್ಡೇರಟ್ಟಿಯ ಕರ್ಲಾಳ ತೋಟದ ವಸತಿಯಲ್ಲಿ ಇರುವ ರೈತ ಕುಟುಂಬಗಳ ಸದಸ್ಯರು ಸೇರಿ ಎರಡು ನೂರು ಮನೆಗಳಿಂದ ಮನೆಗೆ ಒಂದು ಸಾವಿರದಂತೆ ಹಣ ಸಂಗ್ರಹ ಮಾಡಿದ್ದಾರೆ. ಬಳಿಕ ತಾವೇ ಸ್ವತಃ ಗುದ್ದಲಿ, ಪಿಕಾಸಿ ಹಿಡಿದು ರಸ್ತೆ ದುರಸ್ತಿ ಮಾಡಿದ್ದಾರೆ.
ಈ ಮೂಲಕ ಜನಸಾಮಾನ್ಯರ ಹಿತಾಶಕ್ತಿಯನ್ನೇ ಮರೆತ ಶಾಸಕರು, ಸ್ಥಳೀಯ ಜನಪ್ರತಿನಿಧಿಗಳಿಗೆ ನೀವಿಲ್ಲಂದ್ರೂ ನಡೆಯುತ್ತೆ ಅನ್ನೋ ಸಂದೇಶ ರವಾನಿಸಿದ್ದಾರೆ.