ರಾಮನಗರ: ರೈತನೋರ್ವ ತಾನು ಬೆಳೆದ ಟೊಮೆಟೋವನ್ನು ಎಪಿಎಂಸಿ ಮಾರುಕಟ್ಟೆಯಲ್ಲಿ ಮಾರಾಟ ಮಾಡಿದ ವೇಳೆ ಬಂದ ಹಣದಲ್ಲಿ ನಕಲಿ ಜೆರಾಕ್ಸ್ ನೋಟೊಂದು ಪತ್ತೆಯಾಗಿರುವ ಘಟನೆ ರಾಮನಗರದಲ್ಲಿ ನಡೆದಿದೆ.
ರಾಮನಗರದ ಕೃಷಿ ಮಾರುಕಟ್ಟೆಗೆ ಚನ್ನಪಟ್ಟಣದ ರೈತ ಸುಜೀವನ್ಕುಮಾರ್ ಎಂಬುವವರು ಸುಮಾರು 30 ಕ್ರೇಟ್ ಟೊಮೆಟೋವನ್ನ ತಂದಿದ್ರು. ತಾವು ತಂದಿದ್ದ ಎಲ್ಲ ಟೊಮೆಟೋವನ್ನು ಮಾರಾಟ ಮಾಡಿದ ವೇಳೆ ವರ್ತಕ ಹಣವನ್ನ ನೀಡಿದ್ದಾನೆ. ವರ್ತಕನಿಂದ ಹಣ ಪಡೆದ ಬಳಿಕ ಹಣ ಎಣಿಸಿಕೊಳ್ಳುವ ವೇಳೆ ಜೆರಾಕ್ಸ್ ನೋಟು ಪತ್ತೆಯಾಗಿದೆ.
500 ರೂಪಾಯಿಯ ಜೆರಾಕ್ಸ್ ನೋಟು ಪತ್ತೆಯಾದ ಬಳಿಕ ಹಣ ನೀಡಿದ ವರ್ತಕನ ಹುಡುಕಾಟ ಸಹ ನಡೆಸಿದ್ದಾರೆ. ನಂತರ ರೈತ ಸುಜೀವನ್ ಕುಮಾರ್ ಎಪಿಎಂಸಿ ಮಾರುಕಟ್ಟೆಗೆ ಭೇಟಿ ನೀಡಿ ತಮಗೆ 500 ರೂಪಾಯಿಯ ಜೆರಾಕ್ಸ್ ನೋಟು ಬಂದ ಬಗೆಯನ್ನು ವಿವರಿಸಿ ಅಧಿಕಾರಿಗಳಿಗೆ ದೂರು ನೀಡಿದ್ದಾರೆ.
ಬೆಳಗ್ಗೆ ಮಾರುಕಟ್ಟೆಯಲ್ಲಿ ಹಣ ನೀಡಿದ ವರ್ತಕ ಯಾರೆಂದು ಪತ್ತೆ ಹಚ್ಚುವಂತೆ ರೈತ ಆಗ್ರಹಿಸಿದ್ದಾರೆ. ಅಲ್ಲದೇ ಮಾರುಕಟ್ಟೆಯಲ್ಲಿ ಖೋಟಾನೋಟುಗಳ ಹಾವಳಿ ಹೆಚ್ಚಾಗುತ್ತಿದೆ ಕೂಡಲೇ ಪೊಲೀಸ್ರು ಈ ಬಗ್ಗೆ ಕ್ರಮ ಕೈಗೊಳ್ಳಬೇಕೆಂದು ರೈತರು ಒತ್ತಾಯ ಮಾಡಿದ್ದಾರೆ.