ಹಾಸನ: ಕಾಡಾನೆ ದಾಳಿಯಿಂದ ಮೃತಪಟ್ಟಿದ್ದ ವ್ಯಕ್ತಿಯ ಅಂತ್ಯಸಂಸ್ಕಾರದ ವೇಳೆಯೂ ನರಹಂತಕ ಕಾಡಾನೆ ಪ್ರತ್ಯಕ್ಷವಾಗಿರುವ ಘಟನೆ ಹಾಸನ ಜಿಲ್ಲೆಯ ಸಕಲೇಶಪುರ ತಾಲೂಕಿನ ಕೆಳಗಳಲೆ ಗ್ರಾಮದಲ್ಲಿ ನಡೆದಿದೆ.
ಶನಿವಾರ ಕಾಡಾನೆ ದಾಳಿಯಿಂದ ಕೆಳಗಳಲೆ ಗ್ರಾಮದ ಕೃಷ್ಣೇಗೌಡ (63) ಸಾವನ್ನಪ್ಪಿದ್ದರು. ಇದರಿಂದ ರೊಚ್ಚಿಗೆದ್ದಿದ್ದ ಜನ, ಸಕಲೇಶಪುರದಲ್ಲಿ ರಸ್ತೆ ತಡೆಯನ್ನೂ ನಡೆಸಿ ಪ್ರತಿಭಟನೆ ನಡೆಸಿದ್ದರು. ಇದಾದ ಬಳಿಕ ಶನಿವಾರ ಸಂಜೆ ಗ್ರಾಮದ ಹೊರವಲಯದಲ್ಲಿ ಕೃಷ್ಣೇಗೌಡರ ಅಂತ್ಯಸಂಸ್ಕಾರ ನಡೆಸುತ್ತಿದ್ದರು. ಈ ವೇಳೆ ಕಾಡಾನೆಯೊಂದು ಅಂತ್ಯಸಂಸ್ಕಾರ ನಡೆಯುತ್ತಿರುವ ಸಮೀಪ ಕಾಣಿಸಿಕೊಂಡಿದೆ. ಇದರಿಂದ ಅಲ್ಲಿದ್ದ ಜನರು ಆತಂಕಗೊಂಡಿದ್ದಾರೆ. ಬಳಿಕ ಜನರು ಜೋರಾಗಿ ಕಿರುಚುತ್ತಿದ್ದಂತೆ ಗಜ ಕಾಫಿತೋಟದೊಳಕ್ಕೆ ಸಾಗಿದೆ. ಇದನ್ನೂ ಓದಿ: ಮರವಂತೆ ಸಮುದ್ರಕ್ಕೆ ಉರುಳಿದ ಕಾರು- ಓರ್ವ ಸಾವು, ಇನ್ನೋರ್ವನಿಗಾಗಿ ಹುಡುಕಾಟ
ಆನೆ ಕಾಫಿ ಬೆಳೆಗಾರ ಕೃಷ್ಣೇಗೌಡರನ್ನು ಕೊಂದು ಕಾಫಿ ತೋಟದೊಳಗೆ ಬೀಡುಬಿಟ್ಟಿರುವುದು ಸುತ್ತಮುತ್ತಲ ಜನರಿಗೆ ಮತ್ತಷ್ಟು ಆತಂಕ ಮೂಡಿದೆ. ಕೃಷ್ಣೇಗೌಡರನ್ನು ಕೊಂದಿರುವ ನರಹಂತಕ ಆನೆಯನ್ನು ಸೆರೆ ಹಿಡಿದು, ಸ್ಥಳಾಂತರಿಸುವಂತೆ ಗ್ರಾಮಸ್ಥರು ಒತ್ತಾಯಿಸಿದ್ದಾರೆ. ಈಗಾಗಲೇ ಅರಣ್ಯ ಇಲಾಖೆ ಮೂರು ದಿನ ಕಾರ್ಯಾಚರಣೆ ನಡೆಸಿ, ಪುಂಡಾಟಿಕೆ ನಡೆಸಿ, ಜನರ ಪ್ರಾಣತೆಗೆದಿದ್ದ ಎರಡು ಕಾಡಾನೆಗಳನ್ನು ಸೆರೆಹಿಡಿದಿದ್ದಾರೆ. ಇದೀಗ ಮತ್ತೊಂದು ಕಾಡಾನೆ ಕೂಡಾ ಜನರನ್ನು ಬಲಿಪಡೆದಿದ್ದು, ಇದೀಗ ಅರಣ್ಯ ಇಲಾಖೆಗೆ ದೊಡ್ಡ ತಲೆನೋವಾಗಿ ಪರಿಣಮಿಸಿದೆ. ಇದನ್ನೂ ಓದಿ: ಬನಶಂಕರಿ ದೇಗುಲದಲ್ಲಿ ಕಲಹ – ಮುಜರಾಯಿ ಆಯುಕ್ತರಿಗೆ ಅರ್ಚಕರ ವಿರುದ್ಧವೇ ದೂರು