ಬೀದರ್: ವಿದ್ಯುತ್ ತಂತಿ ತಗುಲಿ 2 ಲಕ್ಷ ರೂ. ಮೌಲ್ಯದ ತೋಗರಿ ಬೆಳೆ ಸಂಪೂರ್ಣವಾಗಿ ಬೆಂಕಿಗೆ ಆಹುತಿಯಾಗಿರುವ ಘಟನೆ ಬೀದರ್ ಜಿಲ್ಲೆಯ ಹುಮ್ನಾಬಾದ್ ತಾಲೂಕಿನ ಚಿಟ್ಟಗುಪ್ಪಾ ಹೊರವಲಯದಲ್ಲಿ ನಡೆದಿದೆ.
ಈರಣ್ಣ ಕಟ್ಟಿಗೆಯವರು ನಾಲ್ಕು ಎಕರೆಯಲ್ಲಿ ಬೆಳೆದಿದ್ದ ತೋಗರಿ ಬೆಳೆ ಭಸ್ಮವಾಗಿದ್ದು, ಈ ಮೂಲಕ ಕೆಲವೇ ದಿನಗಳಲ್ಲಿ ರಾಶಿ ಮಾಡಲು ತಯಾರಿ ಮಾಡಿಕೊಂಡಿದ್ದ ರೈತನಿಗೆ ನಿರಾಸೆಯಾಗಿದೆ. ಜಮೀನಿನ ಮೇಲಿದ್ದ ವಿದ್ಯುತ್ ತಂತಿಗಳು ಇಂದು ಸಂಜೆ ಕೆಳಗೆ ಬಿದ್ದಿದ್ದು, ಬೆಳೆಗೆ ತಗುಲಿ ನಾಲ್ಕು ಎಕರೆಯಲ್ಲಿ ಬೆಳೆದು ನಿಂತ್ತಿದ್ದ ತೋಗರಿ ಬೆಂಕಿಗೆ ಆಹುತಿಯಾಗಿದೆ. ಇದರಿಂದ ರೈತ ತೀವ್ರ ಆತಂಕಕ್ಕೊಳಗಾಗಿದ್ದಾರೆ.
ಜಮೀನಿಗೆ ಬೆಂಕಿ ಬಿದ್ದಿರುವ ಕುರಿತು ಮಾಹಿತಿ ತಿಳಿಯುತ್ತಿದ್ದಂತೆ ಅಗ್ನಿಶಾಮಕ ದಳದ ಸಿಬ್ಬಂದಿ ಸ್ಥಳಕ್ಕೆ ಆಗಮಿಸಿದ್ದು, ಬೆಂಕಿ ನಂದಿಸಲು ಹರಸಾಹಸ ಪಟ್ಟರು. ಅಷ್ಟರಲ್ಲಾಗಲೇ ಬೆಂಕಿಯ ಕೆನ್ನಾಲೆಗೆ ತೋಗರಿ ಬೆಳೆ ಸಂಪೂರ್ಣವಾಗಿ ಸುಟ್ಟು ಭಸ್ಮವಾಗಿತ್ತು. ಈ ಕುರಿತು ಚಿಟ್ಟಗುಪ್ಪಾ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.